ನವದೆಹಲಿ: ಕೊರೋನಾ ವೈರಸ್ನ ತಾಂಡವ ನೃತ್ಯದಿಂದ ದೇಶಕ್ಕೆ ದೇಶವೇ ತತ್ತರಿಸಿರುವ ಸಂದರ್ಭದಲ್ಲಿ, ಇದೀಗ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿಯೊಂದನ್ನು ಬಹಿರಂಗ ಪಡಿಸಿದೆ. ನಿನ್ನೆ ಸಂಜೆಯ ವೇಳೆಗೆ ಕೇವಲ 24 ಗಂಟೆಗಳೊಳಗೆ 1074 ಜನರು ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ ಜನರು ಎಚ್ಚರಿಕೆಯಿಂದಿದ್ದರೆ ಈ ಅಪಾಯಕಾರಿ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಸಾಧ್ಯ ಎಂದು ತಿಳಿಸಿದೆ.
ಕೊರೋನಾ ಸಾಂಕ್ರಾಮಿಕ ಸೋಂಕಿನ ಕಾರಣದಿಂದ ದೇಶದಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದೆ. ಆದರೆ ಸಾವಿಗೀಡಾದವರ ಸಂಖ್ಯೆಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಾಗಿದೆ. ಚೇತರಿಕೆಯ ಪ್ರಮಾಣ 27.52%ಕ್ಕೆ ಏರಿಕೆಯಾಗಿದೆ. 11,706 ಜನರು ಈ ವರೆಗೆ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದೊಂದು ಆಶಾದಾಯಕ ಬೆಳವಣಿಗೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಆರೋಗ್ಯ ಕಿಟ್ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಆದರೆ ಇಂತಹ ಆಪತ್ತಿನ ಸಂದರ್ಭದಲ್ಲಿ ಎಲ್ಲರೂ ಎಚ್ಚರ ವಹಿಸಿದಲ್ಲಿ ಮಾತ್ರವೇ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯ. ಎಲ್ಲರೂ ಸಾಮೂಹಿಕವಾಗಿ ನಿಯಂತ್ರಣ ನಿಯಮಗಳನ್ನು ಅನುಸರಿಸಿದಲ್ಲಿ ಮಾತ್ರ ಸೋಂಕು ಏರಿಕೆಯಾಗುವ ಪ್ರಮಾಣ ತಪ್ಪಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಇಲ್ಲವಾದಲ್ಲಿ ದೊಡ್ಡ ಮಟ್ಟದ ಅನಾಹುತ ನಡೆಯುವ ಸಾಧ್ಯತೆ ಇದ್ದು, ಜನರು ಎಚ್ಚರದಿಂದ ಇರುವಂತೆಯೂ ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.