News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳು

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ ಅಜ್ಜಿಯ ಫೋನು. ‘ಅಮ್ಮಾ, ಅಜ್ಜಿಯ ಬಳಿ ನಾನು ಸ್ವಲ್ಪ ಮಾತಾಡಬೇಕು. ಫೋನ್ ಕೊಡು’ ಮಗು ಅಮ್ಮನ ಬೆನ್ನು ಹಿಡಿಯಿತು.

ಅಜ್ಜಿ, ನಾಳೆಯಿಂದ ಪರೀಕ್ಷೆ. ನಂಗೆ ನಿನ್ನ ಆಶೀರ್ವಾದ ಬೇಕು…’ ಮೊಮ್ಮಗುವಿನ ಡೈಲಾಗು ಕೇಳಿ ಅತ್ತಲಿಂದ ಅಜ್ಜಿಗೆ ನಗುವೋ ನಗು. ಒಳಗೊಳಗಿಂದ ಸಂಭ್ರಮ.

ಇಂತಹ ಪ್ರಬುದ್ಧ ಮಾತೊಂದು ಅಷ್ಟು ಸಣ್ಣ ಮಗುವಿನ ಬಾಯಿಂದ ಹೇಗೆ ಬಂತು? ಯೋಚಿಸಿದ ಅವಳಿಗೆ ತಕ್ಷಣ ಉತ್ತರ ಹೊಳೆಯಿತು: ಯೆಸ್, ಅದು ಯಕ್ಷಗಾನದ ಆಶೀರ್ವಾದ! ಮಗು ಇರುವುದು ನಗರದಲ್ಲೇ ಆದರೂ ಮನೆ ತುಂಬ ಯಕ್ಷಗಾನದ ವಾತಾವರಣ. ಆಗಲೇ ಏಳೆಂಟು ಬಾರಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ವೇದಿಕೆಯಲ್ಲಿ ಪುಟಪುಟನೆ ಹೆಜ್ಜೆ ಹಾಕಿದ್ದೂ ಆಗಿದೆ.

ಯಾವುದೇ ಕಲೆಯ ಪ್ರಭಾವ ಅಷ್ಟಕ್ಕೇ ಸೀಮಿತವಲ್ಲ. ಅದು ಎಳೆಬಿಸಿಲಿನ ಸೋನೆಯಂತೆ ಪಾತ್ರಧಾರಿಯ ಮನಸ್ಸಿನೊಳಗೆ ಮೆಲ್ಲಮೆಲ್ಲಗೆ ಜಿನುಗತೊಡಗುತ್ತದೆ. ಅದು ನಾಡಿಗಳೊಳಗಿನ ರಕ್ತದ ಹರಿವಿನಷ್ಟೇ ಸಹಜ ಮತ್ತು ಅಜ್ಞಾತ.

ಒಳಗೆ ಇಳಿದದ್ದೆಲ್ಲ ಯಾವುದೋ ಒಂದು ರೂಪದಲ್ಲಿ ಇನ್ಯಾವುದೋ ಸಮಯದಲ್ಲಿ ಹೊರಗೆ ಕಾಣಿಸತೊಡಗುತ್ತದೆ. ನಾವು ಅದನ್ನೇ ವ್ಯಕ್ತಿತ್ವ ಎಂದು ಕರೆಯುತ್ತೇವೆ. ಎಲ್ಲೋ ಕೇಳಿದ ಮಾತು, ಇನ್ನೆಲ್ಲೋ ನೋಡಿದ ಘಟನೆ ಗೊತ್ತಿಲ್ಲದಂತೆಯೇ ವ್ಯಕ್ತಿಯ ಗುಣದ ಒಂದು ಭಾಗವೇ ಆಗಿಬಿಡುತ್ತದೆ. ವಿದ್ಯೆಯಿಂದ ವಿನಯವೂ, ವಿನಯದಿಂದ ವ್ಯಕ್ತಿತ್ವವೂ, ವ್ಯಕ್ತಿತ್ವದಿಂದ ಸಂಪತ್ತೂ, ಸಂಪತ್ತಿನಿಂದ ಸುಖ ಸಂತೋಷವೂ ಲಭಿಸುತ್ತದೆ.

ವಿದ್ಯೆಯಿಂದ ವ್ಯಕ್ತಿತ್ವ ಲಭಿಸುವುದಾದರೆ ಆ ವಿದ್ಯೆ ನಾಲ್ಕು ಗೋಡೆಗಳ ನಡುವೆ ನಡೆಯುವ ಪಾಠಪ್ರವಚನದಿಂದ ದೊರೆಯುವ ತಿಳುವಳಿಕೆ ಮಾತ್ರ ಅಲ್ಲ. ಅದೊಂದು ಬಹುಮುಖ ಕಲಿಕೆ.ಶಿಕ್ಷಣ ಎಂದರೆ ಬರಿಯ ಪಠ್ಯಪುಸ್ತಕದ ಓದಲ್ಲ.

ಶಿಕ್ಷಣ ಎಂದರೆ ಮಗು ಮತ್ತು ಮನುಷ್ಯನ ದೇಹ, ಮನಸ್ಸು ಮತ್ತು ಅಂತರ್ಯದಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುವ ವಿಧಾನ’ ಎಂಬ ಗಾಂಧೀಜಿಯವರ ಮಾತೂ, ‘ಶಿಕ್ಷಣ ಎಂದರೆ ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಗೆ ಮೂರ್ತರೂಪ ಕೊಡುವ ವಿಧಾನ’ ಎಂಬ ವಿವೇಕಾನಂದರ ಮಾತಿನಲ್ಲೂ ಇದೇ ಅರ್ಥವಿದೆ.

ಮನುಷ್ಯನ ವ್ಯಕ್ತಿತ್ವ ರೂಪಿಸುವ ಈ ಶಿಕ್ಷಣ ಒಂದು ನಿರಂತರ ಪ್ರಕ್ರಿಯೆ. ಅದು ಶಾಲೆ, ಕಾಲೇಜು, ಕುಟುಂಬ, ಸ್ನೇಹಿತರು, ಸಮಾಜ- ಹೀಗೆ ವಿವಿಧ ಸ್ತರಗಳಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ. ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ಕುಟುಂಬದ, ಅಪ್ಪ-ಅಮ್ಮಂದಿರ ಪಾತ್ರ ಬಹುದೊಡ್ಡದು. ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳನ್ನು ಗಮನಿಸೋಣ:

1. ಸಂಗೀತ ಕಲಿಸಿ:
ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ… ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ನಿಮಗೆ ಒಂದು ಸಣ್ಣ ಅವಕಾಶ ಇದ್ದರೂ ನಿಮ್ಮ ಮಗುವಿಗೆ ಸಂಗೀತ ಕಲಿಸುವುದನ್ನು ತಪ್ಪಿಸಬೇಡಿ. ಮಗು ಸಂಗೀತ ಕಲಿಯುತ್ತಲೇ ತನ್ನಷ್ಟಕ್ಕೇ ವಿಶಿಷ್ಟವಾದ ಶಿಸ್ತೊಂದನ್ನು ರೂಢಿಸಿಕೊಳ್ಳುತ್ತದೆ. ಅದರ ಬೌದ್ಧಿಕ ತೀಕ್ಷ್ಣತೆ, ಸೃಜನಶೀಲತೆ, ಆತ್ಮವಿಶ್ವಾಸ, ಒಟ್ಟಾರೆ ವ್ಯಕ್ತಿತ್ವ ಹೂವಿನಂತೆ ಅರಳುತ್ತಾ ಹೋಗುತ್ತದೆ. ಸಂಗೀತದ ಶಕ್ತಿ ಅವ್ಯಕ್ತ, ಅದ್ಭುತ.

2. ಕಲೆಯತ್ತ ಸೆಳೆಯಿರಿ:
ನೃತ್ಯ, ಪೈಂಟಿಂಗ್, ನಾಟಕ, ಯಕ್ಷಗಾನ, ಕಸೂತಿ, ಕರಾಟೆ, ಭರತನಾಟ್ಯ… ಯಾವುದಾದರೂ ಒಂದು ಕಲೆಯಲ್ಲಿ ನಿಮ್ಮ ಮಗು ತೊಡಗುವಂತೆ ಮಾಡಿ. ಎಲ್ಲವನ್ನೂ ಕಲಿಸಬೇಕೆಂಬ ಆತುರ ಬೇಡ; ಅಥವಾ ತಾವು ಇಷ್ಟಪಟ್ಟದ್ದನ್ನೇ ಮಗು ಕಲಿಯಬೇಕು ಎಂಬ ಒತ್ತಾಯವೂ ಬೇಡ. ತನಗಿಷ್ಟವಾದ ಯಾವುದಾದರೂ ಒಂದನ್ನು ಕಲಿಯುವ ಅವಕಾಶವನ್ನು ಮಗುವಿಗೆ ಮಾಡಿಕೊಡಿ. ಯಾವುದೇ ಒಂದು ಕಲೆಯನ್ನು ಅಭ್ಯಾಸ ಮಾಡಿಕೊಂಡಿರುವ ಮಗು ಇತರ ಮಕ್ಕಳಿಗಿಂತ ತುಂಬ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

3. ಆಟೋಟಗಳಲ್ಲಿ ತೊಡಗಿಸಿ:
ಕ್ರೀಡೆ ದೈಹಿಕವಾಗಿಯೂ ಮಾನಸಿಕವಾಗಿಯೂ ಮಗುವನ್ನು ಸದೃಢಗೊಳಿಸುತ್ತದೆ. ಸ್ವಸ್ಥ ದೇಹ ಮತ್ತು ಸ್ವಸ್ಥ ಮನಸ್ಸು ಪರಿಪೂರ್ಣ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ತನಗಿಷ್ಟವಾದ ಆಟೋಟ ಕ್ರೀಡೆಗಳಲ್ಲಿ ನಿಮ್ಮ ಮಗು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿ.

ನಿಮ್ಮ ಮಗುವಿನ ಸಾಮರ್ಥ್ಯ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಅಂಕಪಟ್ಟಿ ತೂಕದ ಮೇಲೆಯೇ ಬುದ್ಧಿವಂತಿಕೆಯನ್ನು ಅಳೆಯಬೇಡಿ. ಪರ್ಸೆಂಟೇಜೇ ಸರ್ವಸ್ವ ಅಲ್ಲ. ಓದಿನಲ್ಲಿ ಹಿಂದಿರುವ ಮಗು ಆಟೋಟದಲ್ಲಿ ವಿಶೇಷ ಆಸಕ್ತಿ ಹೊಂದಿರಬಹುದು. ಅದನ್ನು ಗುರುತಿಸಿ ಪ್ರೋತ್ಸಾಹಿಸಿ. ಒತ್ತಾಯಕ್ಕೆ ಮಣಿದು ಯಾವುದೋ ಡಿಗ್ರಿ ಮಾಡಿ ನಿರುದ್ಯೋಗಿಯಾಗುವ ಮಗು ನಾಳೆ ಕ್ರೀಡಾ ಕ್ಷೇತ್ರದಲ್ಲಿ ಶಾಶ್ವತ ದಾಖಲೆಗಳನ್ನು ಮಾಡೀತು, ಬಲ್ಲವರಾರು?

4. ಅವಕಾಶಗಳನ್ನು ಬಾಚಿಕೊಳ್ಳಲಿ:
ಪಾಠ-ಪ್ರವಚನಗಳ ಹೊರತಾಗಿ ಶಾಲಾ ಕಾಲೇಜುಗಳಲ್ಲಿ ದೊರೆಯುವ ಪಠ್ಯೇತರ ವೇದಿಕೆಗಳನ್ನು ಮಕ್ಕಳು ಗರಿಷ್ಠ ಬಳಸಿಕೊಳ್ಳಲಿ. ಭಾಷಣ, ಚರ್ಚೆ, ಪ್ರಬಂಧ, ರಸಪ್ರಶ್ನೆ, ಗಾಯನ, ಕವನವಾಚನ ಇತ್ಯಾದಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿ. ಕಬ್ಸ್ & ಬುಲ್‌ಬುಲ್ಸ್, ರೋವರ‍್ಸ್ & ರೇಂಜರ್ಸ್, ಸ್ಕೌಟ್ಸ್ & ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ- ಇತ್ಯಾದಿ ಯಾವುದಾದರೂ ಒಂದು ಗುಂಪು ಚಟುವಟಿಕೆಯಲ್ಲಾದರೂ ಪಾಲ್ಗೊಳ್ಳುವ ಅವಕಾಶವನ್ನೂ ತಪ್ಪಿಸಿಕೊಳ್ಳಬಾರದು.

ಅನೇಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಇವೆಲ್ಲ ಟೈಂವೇಸ್ಟ್ ಎಂಬ ಭಾವನೆ ಇದೆ. ಆದರೆ ಇಂತಹ ಅವಕಾಶಗಳನ್ನು ಬಾಚಿಕೊಳ್ಳುತ್ತಾ ಮಕ್ಕಳ ಜ್ಞಾನ, ಕೌಶಲ, ಆತ್ಮವಿಶ್ವಾಸ, ನಾಯಕತ್ವ, ಸಂಘಟನಾ ಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದು ಗಮನಾರ್ಹ. ಇವೆಲ್ಲ ಅತ್ಯುತ್ತಮ ವ್ಯಕ್ತಿತ್ವದ ವಿವಿಧ ಆಯಾಮಗಳೆಂಬುದನ್ನು ಮರೆಯಬಾರದು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ಉಳಿದವರಿಗಿಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾನೆ/ಳೆ.

5. ಹೋಲಿಕೆ ಬೇಡ:
ನಿಮ್ಮ ಮಗುವನ್ನು ದಯಮಾಡಿ ಯಾರೊಂದಿಗೂ ಹೋಲಿಸಬೇಡಿ. ಏಕೆಂದರೆ ಪ್ರತಿಯೊಂದು ಮಗುವೂ ವಿಶಿಷ್ಟ. ಅದಕ್ಕೆ ಅದರದ್ದೇ ಆದ ಬುದ್ಧಿವಂತಿಕೆ, ಸಾಮರ್ಥ್ಯ ಇದೆ. ಪರಸ್ಪರ ಹೋಲಿಸುವ ಮೂಲಕ ಮಗುವನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲಗೊಳಿಸುತ್ತೇವೆಯೇ ಹೊರತು ಯಾವ ಪ್ರಯೋಜನವೂ ಆಗುವುದಿಲ್ಲ.

6. ಮೊಬೈಲ್, ಟಿವಿ ನಿಯಂತ್ರಿಸಿ:
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಒಳ್ಳೆಯದು. ಆದರೆ ಉಪ್ಪಿನಕಾಯಿಯೇ ಊಟ ಆಗಬಾರದು. ಮಕ್ಕಳಿಗೆ ಹೊಸ ಕಾಲದ ತಂತ್ರಜ್ಞಾನದ ಪರಿಚಯ ಇರಬೇಕು. ಆದರೆ ಮೊಬೈಲ್, ಕಂಪ್ಯೂಟರ್, ಟಿವಿಗಳೇ ಸರ್ವಸ್ವ ಆಗಬಾರದು. ಕಾರ್ಟೂನ್ ನೋಡುತ್ತ ಮಗು ಇನ್ನೊಂದು ಕಾರ್ಟೂನು ಆಗುತ್ತದೆಯೇ ಹೊರತು ಅದರ ಸೃಜನಶೀಲತೆ ಒಂದಿನಿತೂ ಅರಳುವುದಿಲ್ಲ.

7. ಮನೆಗೆಲಸಗಳಲ್ಲಿ ತೊಡಗಿಸಿ:
ಅಡುಗೆ, ಮನೆಯನ್ನು ಓರಣವಾಗಿರಿಸುವುದು ಮುಂತಾದ ಕೆಲಸಗಳಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ತೊಡಗಿಸಿಕೊಳ್ಳಿ. ಇದರಿಂದ ಮಗು ಮೊಬೈಲಿನಂತಹ ಚಟಕ್ಕೆ ಬೀಳುವುದೂ ಕಡಿಮೆಯಾಗುತ್ತದೆ, ಮನೆಗೆಲಸಗಳನ್ನೂ ಕಲಿಯುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಕೌಟುಂಬಿಕ ಸಮಯದ ಪಾಲು ತುಂಬ ದೊಡ್ಡದು.

8. ಸೋಲುವುದನ್ನು ಕಲಿಸಿ:
ನಿಮ್ಮ ಮಗು ಎಲ್ಲ ಕಡೆ ಗೆಲ್ಲಬೇಕೆಂದು ಬಯಸಬೇಡಿ. ಸೋಲುವುದನ್ನೂ ಕಲಿಸಿಕೊಡಿ. ಸಣ್ಣಪುಟ್ಟ ವೈಫಲ್ಯಗಳನ್ನು ದೊಡ್ಡದು ಮಾಡಬೇಡಿ. ಅದು ಸಹಜ ಎಂಬುದನ್ನು ಮಗುವಿಗೆ ಅರ್ಥೈಸಿಕೊಳ್ಳಲು ಸಹಾಯ ಮಾಡಿ.

9. ಬೆರೆಯುವುದನ್ನು ಬೆಂಬಲಿಸಿ:
ಮಕ್ಕಳು ಸಮಾಜದೊಂದಿಗೆ ಬೆರೆಯುವುದನ್ನು ಪ್ರೋತ್ಸಾಹಿಸಿ. ದಿನದಲ್ಲಿ ಒಂದಿಷ್ಟು ಸಮಯವನ್ನು ಮಕ್ಕಳು ನೆರೆಹೊರೆಯ ಗೆಳೆಯರೊಂದಿಗೆ ಕಳೆಯಲಿ. ಓರಗೆಯವರೊಂದಿಗಿನ ಕಲಿಕೆ ಯಾವ ಪಠ್ಯದ ಕಲಿಕೆಗೂ ಸಾಟಿಯಲ್ಲ. ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸುವಾಗ ಮಕ್ಕಳನ್ನೂ ಕರೆದುಕೊಂಡು ಹೋಗಿ. ಬಂಧುಮಿತ್ರರನ್ನು ಪರಿಚಯಿಸಿ. ಯಾರೊಂದಿಗೆ ಎಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ಮಕ್ಕಳಿಗೆ ತಾನಾಗೇ ಒಲಿಯುತ್ತದೆ.

10. ನಿಮ್ಮ ಬಗ್ಗೆ ಎಚ್ಚರ:
ನಿಮ್ಮ ಮಕ್ಕಳಿಗೆ ನೀವೇ ಎಲ್ಲದಕ್ಕಿಂತ ದೊಡ್ಡ ಮಾದರಿ. ಅಪ್ಪ-ಅಮ್ಮನಿಗಿಂತ ದೊಡ್ಡ ರೋಲ್ ಮಾಡೆಲ್ ಮಕ್ಕಳಿಗೆ ಬೇರೆ ಯಾರೂ ಇಲ್ಲ. ಮಕ್ಕಳೆದುರಿನ ನಿಮ್ಮ ಮಾತು-ವರ್ತನೆಗಳಲ್ಲಿ ಎಚ್ಚರದಿಂದ ಇರಿ. ಅವರು ನಿಮ್ಮನ್ನು ಸದಾ ಗಮನಿಸುತ್ತಿರುತ್ತಾರೆ ಮಾತ್ರವಲ್ಲ, ಅನುಸರಿಸುತ್ತಾರೆ. ತಂದೆ-ತಾಯಿಯಂತೆ ಮಗು, ನೂಲಿನಂತೆ ಸೀರೆ- ಎಂಬುದನ್ನು ಮರೆಯದಿರಿ. ಕಾಲ ಎಷ್ಟೇ ಮುಂದುವರಿದರೂ ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ಹಳತಾಗುವುದಿಲ್ಲ.

✍ ಸಿಬಂತಿ ಪದ್ಮನಾಭ 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top