ನವದೆಹಲಿ: ದೇಶದಲ್ಲಿ ವಾಹನ ಅಪಘಾತ ಪ್ರಕರಣಗಳು ವರ್ಷಂಪ್ರತಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸಚಿವ ಸಂಪುಟ ಹೊಸ ಮೋಟಾರ್ ಕಾಯಿದೆ (ತಿದ್ದುಪಡಿ) ಮಸೂದೆ 2016 ಜಾರಿಗೆ ಅನುಮೋದನೆ ನೀಡಿದೆ.
ಈ ಹಿಂದೆ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರ, ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಿದಲ್ಲಿ 1000 ರೂ. ದಂಡ, 3 ತಿಂಗಳು ಲೈಸನ್ಸ್ ಅಮಾನತು ಮಾಡುವ ಮಸೂದೆ ಜಾರಿಗೆ ತಂದಿತ್ತು. ಇದೀಗ ಮದ್ಯಪಾನ ಮಾಡಿ ವಾಹನ ಚಲಾಯಿಸಿದಲ್ಲಿ 10,000 ರೂ. ದಂಡ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ರೂ. 10 ಲಕ್ಷ ಪರಿಹಾರ, ಹಿಟ್ ಅಂಡ್ ರನ್ ಸಂತ್ರಸ್ತರಿಗೆ ರೂ. 25,000ದಿಂದ 2 ಲಕ್ಷ ರೂ. ಪರಿಹಾರ ಸೇರಿದಂತೆ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅದ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಹೊಸ ಕಾಯಿದೆ ಅನ್ವಯ ವಿಮೆ ಇಲ್ಲದೇ ವಾಹನ ಚಾಲನೆ 2000 ರೂ ದಂಡ, 3 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುವುದು. ಲೈಸನ್ಸ್ ಇಲ್ಲದೇ ಅಥವಾ ಅನಧಿಕೃತವಾಗಿ ವಾಹನ ಚಲಾಯಿಸಿದಲ್ಲಿ ರೂ. 5000 ದಂಡ ವಿಧಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ರೂ.100 ದಂಡವನ್ನು ರೂ. 500ಕ್ಕೆ ಏರಿಸಲಾಗಿದ್ದು, ಬೆಲ್ಟ್ ಇಲ್ಲದೇ ವಾಹನ ಚಲಾಯಿಸಿದಲ್ಲಿ 1000 ರೂ. ದಂಡ ವಿಧಿಸಲಾಗಿದೆ.
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಅಪಘಾತ ಸಂಭವಿಸಿದಲ್ಲಿ ಹೆತ್ತವರು ಹೊಣೆಗಾರರಾಗಲಿದ್ದು, ರೂ. 25,000 ದಂಡ, 3 ವರ್ಷ ಜೈಲು ಹಾಗೂ ವಾಹನ ನೋಂದಣಿ ರದ್ದು ಮಾಡಲಾಗುವುದು. ಮಿತಿ ಮೀರಿ ಸರಕು ಸಾಗಣೆ ಮಾಡಿದಲ್ಲಿ ರೂ. 20,000 ದಂಡ ವಿಧಿಸಲಾಗುವುದು.
ಇದೇ ವೇಳೆ ದೇಶದ ಎಲ್ಲ ಗ್ರಾಮಗಳಿಗೆ ಸಾರಿಗೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರಗಳಿಗೆ ಕಾಂಟ್ರಾಕ್ಟ್ ಕ್ಯಾರಿಯೇಜ್, ಸ್ಟೇಜ್ ಕ್ಯಾರಿಯೇಜ್ ಪರವಾನಗಿ ಅಧಿಕಾರ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.