ಗೋಕರ್ಣ : ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀ ರಾಮಚಂದ್ರಾಪುರಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಾಡಿನ ವಿವಿಧ ಸಂತರುಗಳಿಂದ ಲೋಕಕಲ್ಯಾಣಾರ್ಥ ಶ್ರೀಆತ್ಮಲಿಂಗ ಪೂಜೆ ಹಾಗು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ “ಗೋಕರ್ಣ ಗೌರವ” ದಿನಾಂಕ 09-01-2017 ಸೋಮವಾರ ಶುಭಾರಂಭಗೊಂಡಿತ್ತು.
ಶ್ರೀಮದ್ ಗಿರಿರಾಜಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯಭಗವತ್ಪಾದರು, ಸೂರ್ಯಸಿಂಹಾಸನ ಮಠಾಧೀಶ ಶ್ರೀಶೈಲ ಆಂಧ್ರಪ್ರದೇಶ ಇವರು ಈ ವಿನೂತನ, ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಆತ್ಮಲಿಂಗ ಸನ್ನಿಧಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯವು ಭಕ್ತರ ಕೇಂದ್ರವಾಗಿದ್ದು ಇನ್ನು ಮುಂದೆ ಸಂತರ ಕೇಂದ್ರವಾಗಲಿದೆ. ರಾಜ್ಯದಲ್ಲಿ ಸುಮಾರು 5000 ಕ್ಕೂ ಹೆಚ್ಚಿನ ಮಠಗಳಿದ್ದು, ಎಲ್ಲ ಮಠಾಧೀಶರನ್ನು ಸಂಪರ್ಕಿಸಿ, ಅವರನ್ನು ಗೋಕರ್ಣಕ್ಕೆ ಆಹ್ವಾನಿಸಲಾಗುವುದು. ಪ್ರತಿದಿನ ಒಬ್ಬರು ಸಂತರಿಂದ ಆತ್ಮಲಿಂಗ ಪೂಜೆಗೆ ವ್ಯವಸ್ಥೆ ಮಾಡಲಾಗುವುದು ಎಂದು ರಾಮಚಂದ್ರಾಪುರಮಠದ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಆ ಸಂದರ್ಭದಲ್ಲಿ ತಿಳಿಸಿದ್ದರು.
ಪ್ರತಿದಿನ ನಾಡಿನ ಒಬ್ಬ ಮಠಾಧೀಶರು ಪಾಲ್ಗೊಳ್ಳುವ ‘ಗೋಕರ್ಣ ಗೌರವ’ ಕಾರ್ಯಕ್ರಮವು ಶ್ರೀ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಳದ ಸಹಯೋಗದೊಂದಿಗೆ, ಸಂತ ಸೇವಕ ಸಮಿತಿಯ ಸಂಘಟನೆಯಲ್ಲಿ ಕಳೆದ ಒಂದು ವರ್ಷದಿಂದ ಒಂದು ದಿನವೂ ತಪ್ಪದಂತೆ ನಿರಂತರವಾಗಿ ನಡೆಯುತ್ತಿದ್ದು ದಿನಾಂಕ 08-01-2018 ರಂದು 365 ದಿನಗಳನ್ನು ಪೂರೈಸಿದೆ. ಇಂದು ಪ. ಪೂ. ಶ್ರೀ ಮ ನಿ ಪ್ರ ಜಯಶಾಂತಲಿಂಗ ಮಹಾಸ್ವಾಮಿಗಳು, ಶ್ರೀಶಾಂತಲಿಂಗೇಶ್ವರ ಮಠ, ಬಸವಕಲ್ಯಾಣ ಇವರು ಪೂಜೆ ಸಲ್ಲಿಸಿದರು.
ಆಗಮಿಸಿದ ಎಲ್ಲ ಸಂತರು ತಮ್ಮ ಶಿಷ್ಯ ಜನತೆಯ ಒಳಿತನ್ನು ಹಾಗೂ ಲೋಕಕಲ್ಯಾಣವನ್ನು ಸಂಕಲ್ಪಿಸಿ, ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ, ನವಧಾನ್ಯ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿ, ಶಿವಸಂಪ್ರೀತಿಯನ್ನು ಪಡೆದು, ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ತಮ್ಮ ಅತಿ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸುತ್ತಿದ್ದಾರೆ. ಪೂಜೆಯ ನಂತರ ಪ್ರತಿದಿನದಗೌರವ ಸಮರ್ಪಣೆ ಕಾರ್ಯಕ್ರಮವನ್ನು ವಿವಿಧ ಸಮಾಜದ ಮುಖಂಡರಿಂದ ನಡೆಸಿಕೊಂಡು ಬರಲಾಗಿದೆ.
ಧಾರ್ಮಿಕ ಸೌಹಾರ್ದದ ಪ್ರತೀಕವಾದ, ಪ್ರತಿದಿನ ಸಂತರುಗಳಿಂದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಪೂಜೆ ನೆರವೇರಿಸುವ ಈ ಅದ್ವಿತೀಯವಾದ ಕಾರ್ಯಕ್ರಮ ನಿರ್ವಿಘ್ನವಾಗಿ ಒಂದು ವರ್ಷ ಪೂರೈಸಲು ರಾಘವೇಶ್ವರ ಶ್ರೀಗಳ ಸತ್ ಸಂಕಲ್ಪ ಹಾಗೂ ಸಂತರ ಆಶೀರ್ವಾದವೇ ಕಾರಣವಾಗಿದ್ದು, ಗೋಕರ್ಣ ಗೌರವ ಕಾರ್ಯಕ್ರಮಕ್ಕೆ ಉಪಾಧಿವಂತ ಮಂಡಳ ಹಾಗೂ ಗೋಕರ್ಣದ ಸರ್ವಸಮಾಜದ ಸಹಕಾರ ಅವಿಸ್ಮರಣೀಯ ಎಂದು ಶ್ರೀದೇವಾಲಯದ ಪದನಿಮಿತ್ತ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.