ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಭೀಕರ ಬರಗಾಲ ಎದುರಾಗಿದ್ದು, ದಾರಿಕಾಣದ ರೈತ ಕಂಗಾಲಾಗಿದ್ದಾನೆ. ನೀರಿಲ್ಲದೆ ಆತ ಬೆಳೆದ ಬೆಳೆಗಳು ಸುಟ್ಟುಹೋಗುತ್ತಿವೆ. ಒಂದೆಡೆ ಸಾಲದ ಸುಳಿ, ಮತ್ತೊಂದೆಡೆ ಜೀವನ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಆತನನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಈ ಸ್ಥಿತಿಯಿಂದ ರೈತರನ್ನು ಕಾಪಾಡಲು ಸರ್ಕಾರ ಒಂದು ದೀರ್ಘಾವಧಿಯ ಯೋಜನೆಯನ್ನು ರೂಪಿಸಿದೆ. ಭತ್ತ, ಗೋಧಿಗಳು ಮಾತ್ರವಲ್ಲದೇ ಸಿರಿಧಾನ್ಯಗಳತ್ತವೂ ಮುಖಮಾಡುವಂತೆ ರೈತನನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ.
ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಸಿರಿಧಾನ್ಯಗಳು ಬಡವರ ಆಹಾರ ಎಂದೇ ಬಿಂಬಿತಗೊಂಡಿವೆ. ಅಕ್ಕಿ, ಗೋಧಿಗಳಷ್ಟು ಜನಪ್ರಿಯತೆಯನ್ನು ಪಡೆಯಲು ಇದು ವಿಫಲಗೊಂಡ ಪರಿಣಾಮ ವಾಣಿಜ್ಯ ದೃಷ್ಟಿಯಿಂದ ರೈತ ಭತ್ತ, ಗೋಧೀಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾನೆ. ಆದರೆ ಬರದ ಸಂದರ್ಭ ಈ ಬೆಳೆ ಆತನಿಗೆ ಕೈಕೊಡುತ್ತವೆ. ಆದರೆ ಸಿರಿಧಾನ್ಯಗಳು ಬರ ಪರಿಸ್ಥಿತಿಯಲ್ಲೂ ಅದ್ಭುತ ಇಳುವರಿಯನ್ನು ನೀಡಬಹುದು.
ಸಿರಿಧಾನ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ, ಹೆಚ್ಚು ತಾಪಮಾನದಲ್ಲೂ ಇದು ಉತ್ತಮ ಫಸಲು ನೀಡಬಲ್ಲುದು, ಆರೋಗ್ಯಕ್ಕೂ ಉತ್ತಮ. ಹೀಗಾಗಿ ಈ ಬೆಳೆಗಳನ್ನು ಬೆಳೆಯಲು ರೈತನಿಗೆ ಉತ್ತೇಜನ ನೀಡುವ ಸಲುವಾಗಿ ಹಲವಾರು ವರ್ಕ್ಶಾಪ್, ಅರಿವು ಕಾರ್ಯಕ್ರಮಗಳನ್ನು ಕರ್ನಾಟಕದಲ್ಲಿ ಸರ್ಕಾರ ಹಮ್ಮಿಕೊಳ್ಳುತ್ತಿದೆ. ಸಿರಿಧಾನ್ಯಗಳ ಪ್ರಯೋಜನ ಸಾರಲು ಇತ್ತೀಚಿಗೆ ಮ್ಯಾರಥಾನ್ಗಳನ್ನೂ ನಡೆಸಲಾಗಿದೆ. ಡಯಟೀಷಿಯನ್ಗಳನ್ನು ಕರೆಸಿ ಅದರ ಆರೋಗ್ಯ ಪ್ರಯೋಜನಗಳನ್ನು ಜನರಿಗೆ ತಿಳಿಸಲಾಗುತ್ತಿದೆ.
ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಿಗಳು ವಿಧವಿಧದ ಸಿರಿಧಾನ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಸುತ್ತಿದ್ದಾರೆ. ಎಪ್ರಿಲ್ 28ರಿಂದ 30ರವರೆಗೆ ಸಿರಿಧಾನ್ಯಗಳ ಹಬ್ಬವನ್ನೂ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ರೈತರಿಗೆ ಉಚಿತವಾಗಿ ಸಿರಿಧಾನ್ಯಗಳ ಬೀಜ ನೀಡುತ್ತೇವೆ ಮತ್ತು ಮಾರುಕಟ್ಟೆ ದರಕ್ಕಿಂತ ಶೇ.೩೦ರಷ್ಟು ಹೆಚ್ಚು ದರ ನಿಡಿ ಖರೀದಿಸಲು ಮುಂದಾಗುತ್ತೇವೆ ಎಂದು ಕೃಷಿ ಸಚಿವ ಕಷ್ಣ ಬೈರೇ ಗೌಡ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.