ತಿರುವನಂತಪುರಂ: ದಶಕಗಳಿಂದ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಕೇರಳದ ಅತಿಸುಂದರ ಮುನಾರ್ನ ಪ್ರಕೃತಿಯನ್ನೇ ಹಾಳುಗೆಡವಿದ್ದಾರೆ. ಅಲ್ಲಿನ ಅರಣ್ಯ ಸಂಪತ್ತನ್ನು, ಕಣಿವೆಗಳನ್ನು ನೆಲಸಮ ಮಾಡಿ ದೊಡ್ಡ ದೊಡ್ಡ ರೆಸಾರ್ಟ್, ಶಾಪಿಂಗ್ ಮಾಲ್, ಹೋಟೆಲ್ಗಳನ್ನು ನಿರ್ಮಿಸಿದ್ದಾರೆ. ಸ್ಥಳಿಯ ನಾಯಕರ ಬೆಂಬಲದೊಂದಿಗೆ ಭೂ ಮಾಫಿಯಾ ಪ್ರಕೃತಿ ತಾಯಿಯನ್ನೇ ಅಲ್ಲಿ ದೌರ್ಜನ್ಯಕ್ಕೊಳಪಡಿಸಿದೆ.
ಆದರೀಗ ಯುವ ಐಎಎಸ್ ಅಧಿಕಾರಿ ಭೂ ಮಾಫಿಯಾದ ವಿರುದ್ಧ ಸೆಟೆದು ನಿಂತಿದ್ದಾರೆ. ಜಾಗ ಖಾಲಿ ಮಾಡುವಂತೆ 100ಕ್ಕೂ ಅಧಿಕ ರೆಸಾರ್ಟ್, ವಾಣಿಜ್ಯ ಕಟ್ಟಡಗಳಿಗೆ ಕಳೆದ ಎರಡು ತಿಂಗಳುಗಳಿಂದ ನೋಟಿಸ್ ಕಳುಹಿಸುತ್ತಿದ್ದಾರೆ. ಈಗಾಗಲೇ 90ಕ್ಕೂ ಅಧಿಕ ಕಾನೂನು ಬಾಹಿರ ರೆಸಾರ್ಟ್, ಕಟ್ಟಡಗಳನ್ನು ಕೆಡವಿ ಹಾಕಿದ ಸಾಹಸ ಮಾಡಿದ್ದಾರೆ.
ಅವರೇ ೩೦ ವರ್ಷದ ಅಧಿಕಾರಿ ಶ್ರೀರಾಮ್ ವೆಂಕಟರಾಮನ್. ಸ್ಥಳಿಯ ಮಟ್ಟದಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾದರೂ, ಸ್ಥಳಿಯ ಪ್ರಭಾವಿ ಸಚಿವ ಎಂ.ಎಂ ಮಣಿಯಿಂದ ಬಹಿರಂಗ ಬೆದರಿಕೆಗಳು ಬಂದರೂ ಜಗ್ಗದೇ ಪ್ರಕೃತಿ ಉಳಿವಿಗಾಗಿ ತಮ್ಮ ಕರ್ತವ್ಯ ಮುಂದುವರೆಸುತ್ತಲೇ ಇದ್ದಾರೆ.
ನಾನು ಯಾರಿಗೂ ಹೆದರುವುದಿಲ್ಲ, ನೆಲದ ಕಾನೂನನ್ನು ಪಾಲಿಸುತ್ತಿದ್ದೇನಷ್ಟೇ ಎಂದು ಹೇಳುವ ಈಗಾಗಲೇ ಮುನಾರ್ನಲ್ಲಿನ 92 ಕಾನೂನು ಬಾಹಿರ ಕಟ್ಟಡಗಳನ್ನು ಕೆಡವಿ ಹಾಕಿದ್ದಾರೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದರಿಂದ ಪ್ರಶಂಸೆಯನ್ನೂ ಗಳಿಸಿದ್ದಾರೆ. ಆದರೆ ಇತರ ರಾಜಕಾರಣಿಗಳು ಮಾತ್ರ ಇವರನ್ನು ವಿಲನ್ರಂತೆ ಕಾಣುತ್ತಿದ್ದಾರೆ.
ಮುನಾರ್ ಸಾಗಮಟ್ಟಕ್ಕಿಂತ 1800 ಮೀಟರ್ ಎತ್ತರವಿದ್ದು, 2 ರಾಷ್ಟ್ರೀಯ ಉದ್ಯಾನ, 2 ವನ್ಯಜೀವಿ ಸಂರಕ್ಷಣಾಲಯ ಇದೆ. 3,000 ವಿವಿಧ ಹೂಗಳು, ಹಕ್ಕಿಗಳು, ವನ್ಯಜೀವಿಗಳು, ಹುಳುಗಳು ಇಲ್ಲಿ ನೆಲೆಕಂಡಿವೆ. ಅದನ್ನು ಭೂ ಮಾಫಿಯಾ ನಾಶಪಡಿಸುವ ಕಾರ್ಯವನ್ನು ಮಾಡುತ್ತಿದೆ.
ಇಲ್ಲಿನ ಭೂಮಿಯನ್ನು ಮೊದಲು ಅತಿಕ್ರಮಿಸಿ ಬಳಿಕ ಅದನ್ನು ಸಕ್ರಮ ಮಾಡುತ್ತದೆ, ಬಳಿಕ ಸರ್ವೇ ನಂಬರ್ಗಳನ್ನು ಪಡೆಯುತ್ತದೆ. ಈ ಮೂಲಕ ಭೂಮಾಫಿಯಾ ವ್ಯವಸ್ಥಿತ ಪ್ರಕ್ರಿಯೆ ನಡೆಸುತ್ತದೆ ಎಂದು ಶ್ರೀರಾಮ್ ಹೇಳುತ್ತಾರೆ. ಭೂಮಾಫಿಯಾದ ವಿರುದ್ಧ ಅವರು ನಡೆಸಿರುವ ಹೋರಾಟಕ್ಕೆ ಹಲವಾರು ಪರಿಸರ ಪ್ರೇಮಿಗಳ ಸಾಥ್ ಸಿಕ್ಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.