ಬಿಹಾರ: ಬಿಹಾರದ ಗೋಪಾಲ್ಗಂಜ್ ಎಂಬ ಕುಗ್ರಾಮವೊಂದರ ಮಕ್ಕಳ ಕನಸುಗಳನ್ನು ತಿಳಿಯುವ ತವಕ ಅವರದು. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳೊಂದಿಗೆ ಮಾತಿಗೂ ಇಳಿಯುತ್ತಾರೆ ಅವರು. ಅನೇಕ ಅಂಶಗಳು ಬೆಳಕಿಗೆ ಬರುತ್ತವೆ ಅಲ್ಲಿ. ಪುಸ್ತಕದ ಅಲಭ್ಯತೆಯೂ ಅದರಲ್ಲೊಂದು. ಸೂರ್ಯಪ್ರಕಾಶ ರೈ ಇದಕ್ಕೊಂದು ಪರಿಹಾರ ಮಾರ್ಗ ಹುಡುಕಿದ್ದಾರೆ.
ಪ್ರಯೋಗ್ ಎಂಬ ನೂತನ ಸಂಸ್ಥೆಗೆ ನಾಂದಿ ಹಾಡುವ ಅವರು, ಗೋಪಾಲ್ಗಂಜ್ನಲ್ಲಿ ವಿದ್ಯಾರ್ಥಿಗಳಿಗಾಗಿಯೇ ಸಮುದಾಯ ಲೈಬ್ರರಿಯನ್ನು ತೆರೆಯಲು ಮುಂದಾಗುತ್ತಾರೆ. ಓದಲೇಬೇಕಾದ ಹಾಗೂ ಜನಪ್ರಿಯ ಪುಸ್ತಕಗಳ ಸಂಗ್ರಹವನ್ನು ಮಾಡಲಾಗುತ್ತೆ. ಸದ್ಯ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮುದಾಯ ಲೈಬ್ರರಿಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರಂತೆ.
ಮಕ್ಕಳಲ್ಲಿ ಸಾಮಾಜಿಕ ಅರಿವು ಮೂಡಬೇಕು. ಅವರಿಗೊಂದು ಶೈಕ್ಷಣಿಕ ಮೂಲ ನೆಲೆಯನ್ನು ಒದಗಿಸಬೇಕು ಎಂಬ ಧ್ಯೇಯದ ಪ್ರತಿಫಲವೇ ಸಮುದಾಯ ಲೈಬ್ರರಿ. ಇದೀಗ ವಿವಿಧ ಬಗೆಯ ಚರ್ಚೆಗಳು, ಬರವಣಿಗೆ, ಪ್ರಬಂಧ ಹಾಗೂ ಚಿತ್ರಕಲೆಯಂತಹ ವೈವಿಧ್ಯಮಯ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುತ್ತಿರುವುದು ರೈ ಅವರ ಕನಸಿಗೆ ಬಣ್ಣ ತುಂಬಿದೆ.
ಶಿಕ್ಷಣವೇ ಮಾನವನ ಬದುಕಿನ ವಿಕಸನಕ್ಕೆ ಬುನಾದಿ ಎಂಬುದು ರೈ ಅವರ ಅಭಿಮತ. ಅಂತೆಯೇ ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಳಕಳಿ ಅವರದು. ಅಲ್ಲದೇ ವಿವಿಧ ಗ್ರಾಮಗಳಿಗೆ ತೆರಳಿ ರಾತ್ರಿ ಶಾಲೆಯನ್ನೂ ಆರಂಭಿಸುತ್ತಾರೆ. ಶೈಕ್ಷಣಿಕ ಮಹತ್ವ ಕುರಿತು ವಿವರಿಸುತ್ತಾರೆ ಅವರು. ಇದೀಗ ಗೋಪಾಲ್ಗಂಜ್ನ ಸುತ್ತ ಮುತ್ತಲ ಗ್ರಾಮಗಳ ಅನೇಕ ಶಾಲೆಗಳಲ್ಲಿಯೇ ಲೈಬ್ರರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದೂ ಕೂಡಾ ರೈ ಅವರ ಶ್ರಮದ ಪ್ರತಿಫಲ.
ಆಧುನಿಕ ತಂತ್ರಜ್ಞಾನದ ಬದುಕಿಗೆ ಪೂರಕವಾಗಿ ಬೆಳೆಯುವಂತೆ ಮಕ್ಕಳಿಗೆ ಡಿಜಿಟಲ್ ಜ್ಞಾನವನ್ನೂ ನೀಡುವಲ್ಲಿ ಪ್ರಯೋಗ್ ಸಂಸ್ಥೆ ಶ್ರಮಿಸುತ್ತಿದೆ. ಶಿಕ್ಷಣ ಕಲ್ಪಿಸುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವಲ್ಲಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸೂರ್ಯಪ್ರಕಾಶ ರೈ ಅವರಿಗೊಂದು ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.