ಬೆಂಗಳೂರು: ಬರದಿಂದ ಜನ ಬಳಲುತ್ತಿರುವ ಸಂದರ್ಭದಲ್ಲೇ ವಿದ್ಯುತ್ ದರ ಹೆಚ್ಚಿಸುವ ಮೂಲಕ ಇದೀಗ ರಾಜ್ಯ ಸರ್ಕಾರ ವಿದ್ಯುತ್ ಶಾಕ್ ನೀಡಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದು, ಪ್ರತಿ ಯೂನಿಟ್ಗೆ ಸರಾಸರಿ 25 ಪೈಸೆಯಿಂದ 50 ಪೈಸೆಯವರೆಗೆ ಏರಿಕೆ ಮಾಡಿ ಆದೇಶಿಸಿದೆ. ಹೊಸದರ ಏ. 1 ರಿಂದಲೇ ಅನ್ವಯವಾಗಲಿದೆ.
ಈ ಕುರಿತು ಪ್ರಕಟಿಸಿರುವ ಕೆಇಆರ್ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ, ನಗರ ಪ್ರದೇಶಗಳಲ್ಲಿನ ಗೃಹ ಬಳಕೆಯ ಗ್ರಾಹಕರಿಗೆ 25 ಪೈಸೆಯಿಂದ 40 ಪೈಸೆಯವರೆಗೆ ಹಾಗೂ ಬೆಂಗಳೂರು ನಗರ ಬಳಕೆದಾರರಿಗೆ 40 ರಿಂದ 50 ಪೈಸೆ, ಗ್ರಾಮಾಂತರ ಪ್ರದೇಶದಲ್ಲಿ 25 ಪೈಸೆಯಿಂದ 35 ಪೈಸೆವರೆಗೂ ಪ್ರತಿ ಯೂನಿಟ್ ದರವನ್ನು ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 5 ವಿದ್ಯುತ್ ಕಂಪನಿಗಳು ನಷ್ಟದಲ್ಲಿದ್ದು, ದರ ಹೆಚ್ಚಿಸುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಕಂಪನಿಗಳ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸರಾಸರಿ 48 ಪೈಸೆವರೆಗೂ ಏರಿಕೆ ಮಾಡಲು ವಿದ್ಯುತ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಒಂದು ಲಕ್ಷಕ್ಕೂ ಅಧಿಕ ಯೂನಿಟ್ ಹೆಚ್.ಪಿ. ವಿದ್ಯುತ್ ಬಳಕೆದಾರರು ವಿದ್ಯುತ್ ಕಂಪನಿಗಳಿಂದ ಕೈತಪ್ಪಿಹೋಗಲಿವೆ ಎನ್ನುವ ಆತಂಕದಿಂದ ಒಂದು ಲಕ್ಷ ಯೂನಿಟ್ಗೆ ಮೇಲ್ಪಟ್ಟು ಬಳಸುವ ವಿದ್ಯುತ್ ಕೈಗಾರಿಕೆಗಳಿಗೆ 10 ರಿಂದ 20 ಪೈಸೆ ನಿಗದಿ ಮಾಡಲಾಗಿದೆ.
ಬೆಸ್ಕಾಂ ಮತ್ತು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಕೈಗಾರಿಕೆಗಳಿಗೆ 20 ಪೈಸೆ ಪ್ರತಿ ಯೂನಿಟ್ಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಡಯೋಗ್ನೋಸ್ಟಿಕ್, ಕ್ಲಿನಿಕಲ್ ಲ್ಯಾಬ್ಗಳಲ್ಲಿ ಬಳಸುವ ವಿದ್ಯುತ್ನ್ನು ವಾಣಿಜ್ಯ ವ್ಯಾಪ್ತಿಗೆ ಅಳವಡಿಸಿಕೊಳ್ಳಲಾಗಿದೆ. ವಿದ್ಯುತ್ ವಿತರಣಾ ನಷ್ಟ ಗುಲ್ಬರ್ಗಾದಲ್ಲಿ ಶೇ. 18 ರಷ್ಟು, ಬೆಂಗಳೂರು ನಗರದಲ್ಲಿ ಶೇ. 12.5 ರಷ್ಟಿದೆ. ಒಟ್ಟಾರೆ ವಿದ್ಯುತ್ ಪ್ರಸರಣ ನಷ್ಟ ಶೇ. 16 ರಷ್ಟು ದಾಟಿದ್ದು, ಅದನ್ನು ಶೇ. 15 ರೊಳಗೆ ಇಳಿಸಲು ಕ್ರಮ ಕೈಗೊಳ್ಳುವಂತೆ ವಿದ್ಯುತ್ ಕಂಪನಿಗಳಿಗೆ ಸೂಚಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.