ನವದೆಹಲಿ: ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ಗೆ ಹುತಾತ್ಮ ಯೋಧನ ಪುತ್ರ ಮನೀಷ್ ಶರ್ಮಾ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಠ ಮಾಡಿದ್ದಾರೆ.
ಇಲ್ಲಿನ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಬಿವಿಪಿ ಸಂಘಟನೆ ವಿರುದ್ಧ ಹರಿಹಾಯ್ದಿರುವ ಕೌರ್, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೋರಾಡುತ್ತಿರುವುದಾಗಿ ಹೇಳಿದ್ದರು.
ಮನೀಷ್ ಶರ್ಮಾ ಎಂಬುವರು ತಮ್ಮ ಫೇಸ್ಬುಕ್ ಖಾತೆಯ ಮುಖಪುಟದಲ್ಲಿ ಕೌರ್ಗೆ ಪತ್ರ ಬರೆದಿದ್ದು, ಹಲವಾರು ಪ್ರಶ್ನೆಗಳನ್ನು ಪ್ರಸ್ತಾಪಿಸುವ ಮೂಲಕ ಕೌರ್ಗೆ ವಾಸ್ತವಿಕತೆಯ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ ಎನ್ನಬಹುದು.
’ಸಾಮಾನ್ಯವಾಗಿ ನಾನು ಸಾರ್ವಜನಿಕವಾಗಿ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ನಿನ್ನ ಇತ್ತೀಚಿನ ನಡೆಗಳು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವುದೋ ಅಥವಾ ನಿನಗೆ ತಿಳಿಯದೇ ಮಾಡುತ್ತಿರುವುದೋ ಗೊತ್ತಿಲ್ಲ, ಆದರೆ ನಿನ್ನ ಮಾತು ಮತ್ತು ಕೃತಿಯಿಂದ ಅನೇಕ ರಕ್ಷಣಾ ಕುಟುಂಬಗಳ ಮನಸಿಗೆ ಘಾಸಿಯಾಗಿದೆ. ಆದ್ದರಿಂದ ನಾನು ನಿನಗೆ ಬಹಿರಂಗವಾಗಿ ಈ ಪತ್ರ ಬರೆಯಬೇಕಾಯಿತು’ ಎಂದು ಮನೀಷ್ ಶರ್ಮಾ ಹೇಳಿಕೊಂಡಿದ್ದಾರೆ.
ವೃತ್ತಿಯಿಂದ ಮನೀಷ್ ಐಟಿ ಕ್ಷೇತ್ರದಲ್ಲಿದ್ದಾರಂತೆ. ಅವರ ತಂದೆಯೂ ಕೂಡಾ ಭಾರತೀಯ ಸೇನೆಯ ಅಧಿಕಾರಿಯಾಗಿದ್ದರು. ಶ್ರೀನಗರದಲ್ಲಿ ಉಗ್ರರೊಂದಿಗೆ ಹೋರಾಡುವಾಗ ಅವರ ತಂದೆ ಹುತಾತ್ಮರಾಗಿದ್ದಾರಂತೆ. ತಂದೆಯ ಸಾವಿಗೆ ಪಾಕಿಸ್ಥಾನವೋ, ಯುದ್ಧವೋ, ರಾಜಕಾರಣವೋ ಯಾವುದು ಕಾರಣ, ಯಾರನ್ನು ದೂಷಿಸಬೇಕು ಗೊತ್ತಿಲ್ಲ ಎಂದು ಮನೀಷ್ ಬರೆದಿದ್ದಾರೆ. ಆದರೆ ’ನನ್ನ ತಂದೆ ತಮಗಾಗಿ, ನಮಗಾಗಿ, ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿದ್ದು ಮಾತ್ರ ಸತ್ಯ’ ಎಂದೂ ಶರ್ಮಾ ಹೇಳಿಕೊಂಡಿದ್ದಾರೆ.
ನಾವಿಬ್ಬರೂ ಹುತಾತ್ಮ ಯೋಧರ ಮಕ್ಕಳೇ ಇದ್ದೀವಿ ಎಂದಿರುವ ಅವರು, ತನ್ನ ತಂದೆಯನ್ನು ಪಾಕ್ ಕೊಂದಿಲ್ಲ, ಯುದ್ಧ ಕೊಂದಿದೆ ಎಂದ ಕೌರ್ಗೆ ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ.
ನಿಮ್ಮ ತಂದೆಯವರು ಯುದ್ಧ ಮಾಡಿದ್ದಾದರೂ ಯಾರ ವಿರುದ್ಧ? ಅದು ಅವರ ವೈಯಕ್ತಿಕ ಯುದ್ಧವಾಗಿತ್ತೇ ಅಥವಾ ದೇಶದ ವಿರುದ್ಧದ ಯುದ್ಧವಾಗಿತ್ತೇ ? ಯುದ್ಧ ಮಾಡುವುದು ನಿಮ್ಮ ತಂದೆಯವರ ಆಯ್ಕೆಯಾಗಿತ್ತೋ ? ಅಥವಾ ಯುದ್ಧವೇ ಇವರ ಹಾಗೂ ದೇಶದ ಮೇಲೆ ಒತ್ತಡ ಹಾಕಿತೋ? ಎಂದು ಪ್ರಶ್ನಿಸಿರುವ ಅವರು, ಪಾಕಿಸ್ಥಾನದ ನಡೆ ಯುದ್ಧಕ್ಕೆ ಪ್ರೇರೇಪಿಸಿದ್ದು. ನಿಮ್ಮ ತಂದೆಯವರೂ ಸೇರಿದಂತೆ ಅದರಲ್ಲಿ ಸಾಕಷ್ಟು ಯೋಧರು ತಮ್ಮ ಆತ್ಮವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ನಿಮ್ಮ ತಂದೆಯವರು ಕಾಶ್ಮೀರ ಉಳಿವಿಗಾಗಿಯೇ ಹೋರಾಡಿದ್ದು. ಇದೀಗ ಜೆಎನ್ಯು ಕ್ಯಾಂಪಸ್ನಲ್ಲಿ ಅನುರಣಿಸುತ್ತಿರುವುದು ಅದೇ ಕಾಶ್ಮೀರ ಪ್ರತ್ಯೇಕತೆ, ಸ್ವಾತಂತ್ರ್ಯಕ್ಕಾಗಿ ಎಂಬುದು ಗೊತ್ತಿರಲಿ ಎಂದು ಶರ್ಮಾ ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು? ಎಂದು ಪ್ರಶ್ನಿಸಿರುವ ಅವರು, ಕಾಶ್ಮೀರವನ್ನು ಪಾಕ್ ತೆಕ್ಕೆಯಲ್ಲಿ ಹಾಕುವಂತೆ ಅವರು ಕೂಗುತ್ತಿದ್ದಾರೆ. ಆದರೆ ಅವರ ಈ ಕೂಗಿನ ವಿರುದ್ಧವೇ ನಿನ್ನ ಹಾಗೂ ನನ್ನ ತಂದೆ ಹೋರಾಡಿದ್ದು ಎಂಬ ಸತ್ಯ ಗೊತ್ತಿರಲಿ ಎಂದಿದ್ದಾರೆ.
ಟಿ.ವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಯಾವುದೇ ರಾಜಕೀಯ ಪಕ್ಷಗಳ ವಿರುದ್ಧ ಹೋರಾಡುತ್ತಿಲ್ಲ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವೆ ಎಂದು ಕೌರ್ ಹೇಳಿದ್ದನ್ನು ಪ್ರಸ್ತಾಪಿಸಿರುವ ಶರ್ಮಾ ಅವರು, ಭಾರತವನ್ನು ತುಂಡು ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೇ? ದೇಶದ ವಿರುದ್ಧ ಘೋಷಣೆ ಕೂಗುವುದು ಅಭಿವ್ಯಕ್ತಿ ಸ್ವಾತಂತ್ರ್ಯವೇ ? ಎಂದು ಪ್ರಶ್ನಿಸಿದ್ದಾರೆ.
’ಇದು ಖಂಡಿತಾ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ನಿಮ್ಮ ತಂದೆಯವರು ಬದುಕಿದ್ದರೆ ಬಹುಶಃ ನನಗಿಂತ ಚೆನ್ನಾಗಿ ನಿನಗೆ ಈ ಕುರಿತು ಹೇಳುತ್ತಿದ್ದರು. ಏನೇ ಆಗಲಿ, ನಿಮ್ಮ ತಂದೆಯವರ ತ್ಯಾಗವೇ ನಿನಗೆ ಪಾಠವಾಗಲಿ. ದೇಶವನ್ನು ಕನಿಷ್ಟವಾದರೂ ಗೌರವಿಸುವುದನ್ನು ಕಲಿ, ದೇಶವೇ ಎಲ್ಲಕ್ಕಿಂತ ಮೊದಲು’ ಎಂದು ಶರ್ಮಾ ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಇನ್ನಿಲ್ಲದ ಗದ್ದಲ ಎಬ್ಬಿಸಿದ್ದ ಹುತಾತ್ಮ ಯೋಧನ ಪುತ್ರಿ ಕೌರ್ಗೆ, ಹುತಾತ್ಮ ಯೋಧನ ಪುತ್ರ ಶರ್ಮಾ ಅವರು ಬರೆದ ಪತ್ರವೂ ವೈರಲ್ ಆಗಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.