ಗುವಾಹಟಿ: ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸ್ಸಾಂನ 21 ಜಿಲ್ಲೆಗಳಲ್ಲಿ ‘ನಮಾಮಿ ಬ್ರಹ್ಮಪುತ್ರ’ ಮಹೋತ್ಸವ ಮಾರ್ಚ್ 31ರಿಂದ ನಡೆಯಲಿದೆ.
ನಮಾಮಿ ಬ್ರಹ್ಮಪುತ್ರ ಎಂದರೆ ಬ್ರಹ್ಮಪುತ್ರೆಗೆ ಪ್ರಣಾಮ ಅಥವಾ ವಂದನೆ ಎಂದರ್ಥ. ಅಸ್ಸಾಂ ಸಂಸ್ಕೃತಿಯ ಜಾಗತಿಕ ಪ್ರದರ್ಶನ, ಆರ್ಥಿಕ, ವಾಣಿಜ್ಯಿಕ ಅಭಿವೃದ್ಧಿಗೆ ಪೂರಕ ಈ ಹಬ್ಬ. ಅಲ್ಲದೇ ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಅಸ್ಸಾಂ ಒಂದು ಅಪರೂಪದ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಉದ್ದೇಶದಿಂದ ನಮಾಮಿ ಬ್ರಹ್ಮಪುತ್ರ ಹಬ್ಬ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬ್ರಹ್ಮಪುತ್ರ ನಮ್ಮ ಸಂಸ್ಕೃತಿ, ಅದೊಂದು ನಾಗರಿಕತೆ, ಆರ್ಥಿಕ ಮಹತ್ವವುಳ್ಳದ್ದೂ ಅಲ್ಲದೇ ಅದೊಂದು ಜೀವನದಿ. ದೇಶದ ಅನೇಕ ರಾಜ್ಯಗಳು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅತ್ಯಾಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನಮಾಮಿ ಬ್ರಹ್ಮಪುತ್ರ ಜನರು ಸಾಮೂಹಿಕ ಕೃತಜ್ಞತೆ ಸಲ್ಲಿಸುವ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತಿದೆ. ಈ ಉತ್ಸವದ ಮೂಲಕ ರಾಜ್ಯದ ಸಂಸ್ಕೃತಿ, ಆಚಾರ, ವಿಚಾರ, ಕಲೆ, ವ್ಯಾಪಾರ, ವಹಿವಾಟು, ಬಂಡವಾಳ ಹೂಡಿಕೆ, ಪ್ರವಾಸೋದ್ಯಮ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಸ್ಸಾಂ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ಈ ಹಬ್ಬದ ಧ್ಯೇಯ ಎಂದು ಎಎಸ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಪ್ರಕಾಶ್ ತಿವಾರಿ ಹೇಳಿದ್ದಾರೆ.
ಈ ಉತ್ಸವವು ಮಾ.31ರಿಂದ ಎಪ್ರಿಲ್ 4ರ ವರೆಗೆ ನಡೆಯಲಿದ್ದು, ಗುವಾಹಟಿಯಲ್ಲಿ ಪ್ರಮುಖ ಉತ್ಸವ ಹಮ್ಮಿಕೊಳ್ಳಲಾಗಿದೆ.
ಉತ್ಸವದ ಭಾಗವಾಗಿ ರಾಜ್ಯದ ಸರ್ಕಾರಿ ಅಧಿಕಾರಿಗಳು ಎಲ್ಲ ರಾಜ್ಯ ರಾಜಧಾನಿಗಳು, ಪ್ರಮುಖ ನಗರಗಳಿಗೆ ಭೇಟಿ ನೀಡಲಿದ್ದು, ಪ್ರವಾಸೋದ್ಯಮ ಇಲಾಖೆಗಳು, ಉದ್ಯಮ ಸಂಘಗಳ ಜೊತೆ ಸಂಬಂಧ ಸ್ಥಾಪಿಸಲಿದ್ದಾರೆ. ಅಸ್ಸಾಂನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೋಡ್ ಶೋ ಆಯೋಜಿಸುವ ಮೂಲಕ ಯುವಜನತೆಯಲ್ಲಿ ಅರಿವು ಮೂಡಿಸುವ ಆಲೋಚನೆಯೂ ಇದೆ ಎಂದು ತಿವಾರಿ ಹೇಳಿದ್ದಾರೆ.
ವಿಶೇಷ ಕಾರ್ಯಾಗಾರ, ಉಪನ್ಯಾಸ ಮಾಲೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಸ್ತು ಪ್ರದರ್ಶನ ಇತ್ಯಾದಿಗಳು ಹಬ್ಬಕ್ಕೆ ಮೆರಗು ನೀಡಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.