ಫತೇಪುರ: ರಂಜಾನ್ ವೇಳೆ ವಿದ್ಯುತ್ ಪೂರೈಕೆ ಇದ್ದರೆ, ದೀಪಾವಳಿಯಲ್ಲೂ ಇರಲೇಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆ ತತ್ವಕ್ಕೆ ಆದ್ಯತೆ ನೀಡಬೇಕೆಂದು ಆಶಿಸಿದ್ದಾರೆ.
ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದ ಅವರು, ಎಲ್ಲಿ ಖಬರ್ಸ್ಥಾನ ಇರುವುದೋ ಅಲ್ಲಿ ರುದ್ರಭೂಮಿಯೂ ಇರಬೇಕು ಎಂದಿದ್ದಾರೆ.
ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಇದೊಂದು ಗೂಂಡಾ ರಾಜ್ಯವಾಗಿದೆ. ಅತ್ಯಾಚಾರದಂತಹ ಪ್ರಕರಣಗಳಲ್ಲಿ ಎಸ್ಪಿಯ ಮಂತ್ರಿಗಳೇ ಭಾಗಿಯಾಗಿರುವುದು ದುರಂತ ಎಂದರು.
ಆರೋಪಿ ಗಾಯತ್ರಿ ಪ್ರಸಾದ್ ಪ್ರಜಾಪತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧರಿಲ್ಲ. ಇದನ್ನು ಗಮನಿಸಿದರೆ ಉತ್ತರ ಪ್ರದೇಶದ ಎಲ್ಲ ಪೊಲೀಸ್ ಠಾಣೆಗಳು ಸಮಾಜವಾದಿ ಪಕ್ಷದ ಕಚೇರಿಗಳಂತಾಗಿವೆ ಎಂದು ಮೋದಿ ಹರಿಹಾಯ್ದಿದ್ದಾರೆ.
ಇಲ್ಲಿನ ಪೊಲೀಸ್ ವ್ಯವಸ್ಥೆಗೆ ಏನಾಗಿದೆ? ದೂರನ್ನು ಯಾಕೆ ಸ್ವೀಕರಿಸುವುದಿಲ್ಲ ? ಇದೆಂತಹ ಸಂಸ್ಕೃತಿ? ಈ ನಿಟ್ಟಿನಲ್ಲಿ ರಾಜ್ಯವನ್ನು ಸುಧಾರಿಸುವಲ್ಲಿ ಸಮಾಜವಾದಿ ಪಕ್ಷ ನಿರ್ಲಕ್ಷ್ಯ ತೋರಿದೆ. ಆದ್ದರಿಂದ ಜನರು, ರಾಜ್ಯದ ರಕ್ಷಣೆಗೆ ಆದ್ಯತೆ ನೀಡುವ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದ್ದಾರೆ.
ಕಾಂಗ್ರೆಸ್ನೊಂದಿಗೆ ಕೈ ಕುಲುಕಿರುವ ಎಸ್ಪಿ, ಸಮಾಜವಾದಿ ರಾಮಮನೋಹರ ಲೋಹಿಯಾ ಅವರಿಗೆ ಮಾಡಿದ ಅವಮಾನ ಎಂದಿರುವ ಪ್ರಧಾನಿ ಮೋದಿ ಅವರು, ರಾಜ್ಯಕ್ಕೆ ಬಿಜೆಪಿ ನೀಡಿರುವ ಅಭಿವೃದ್ಧಿಯ ಕೊಡುಗೆಯನ್ನು ಪ್ರಸ್ತಾಪಿಸಿದ್ದಾರೆ.
ಒಂದೇ ಒಂದು ಕರೆಗೆ 1.15 ಕೋಟಿ ಜನರು ತಮ್ಮ ಎಲ್ಪಿಸಿ ಸಬ್ಸಿಡಿ ಬಿಟ್ಟುಕೊಟ್ಟರು. ಇದರಿಂದ ಅಷ್ಟೇ ಸಂಖ್ಯೆಯ ಬಡವರ್ಗದವರಿಗೆ ಅದರಿಂದ ಅನುಕೂಲವಾಯಿತು. ಎಲ್ಇಡಿ ಬಲ್ಬ್ ಬಳಕೆಗೆ ಪ್ರೋತ್ಸಾಹ ನೀಡಿದ್ದೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆಯೇ ಎಂದು ಅವರು ಹೇಳಿದ್ದಾರೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದೇ ಬಿಜೆಪಿಯ ತತ್ವ. ಅಸಮಾನತೆಗೆ ಇಲ್ಲಿ ಅವಕಾಶವಿಲ್ಲ. ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.