ನವದೆಹಲಿ: ಕಾಶ್ಮೀರಿ ಕಣಿವೆಯಲ್ಲಿ ಉಗ್ರರಿಗೆ ಸಾಥ್ ನೀಡುವ ಸ್ಥಳೀಯರನ್ನು ದೇಶ ವಿರೋಧಿಗಳೆಂದೇ ಪರಿಗಣಿಸಬೇಕಾಗುತ್ತದೆ ಎಂದು ಕಠಿಣ ಸಂದೇಶ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ.
ಕಾಶ್ಮೀರ ಕಣಿವೆಯಲ್ಲಿ ಉಗ್ರರೊಂದಿಗೆ ಸೈನ್ಯ ಹೋರಾಡುವಾಗ ಸ್ಥಳೀಯರು ಸೈನಿಕರಿಗೆ ಸಹಕರಿಸಬೇಕೆ ವಿನಃ, ಕೈಯಲ್ಲಿ ಗನ್ ಹಿಡಿದು ಉಗ್ರರಿಗೆ ಸಾಥ್ ನೀಡಕೂಡದು ಎಂದು ರಾವತ್ ಹೇಳಿದ್ದರು.
ಸಚಿವ ಕಿರಣ್ ರಿಜಿಜು
ದೇಶದ ಹಿತಾಸಕ್ತಿಯೇ ಮುಖ್ಯ. ಈ ನಿಟ್ಟಿನಲ್ಲಿ ಕಠಿಣ ಸಂದೇಶ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶದ ಒಳಿತಿನ ದೃಷ್ಟಿಯಿಂದ ನೀಡಿರುವ ಕಠಿಣ ಸಂದೇಶವನ್ನು ತಿರುಚುವುದು ತರವಲ್ಲ. ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಇದನ್ನು ರಾಜಕೀಯಕರಣಗೊಳಿಸಬಾರದು. ಭದ್ರತಾ ಪಡೆಗಳ ನೈತಿಕತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಪಕ್ಷಗಳು ವರ್ತಿಸಬೇಕು ಎಂದು ಕೋರಿದ್ದಾರೆ.
ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಅವಶ್ಯ. ಅನವಶ್ಯಕವಾಗಿ ಭದ್ರತಾ ವ್ಯವಸ್ಥೆಯನ್ನು ರಾಜಕೀಯಗೊಳಿಸಬಾರದು ಎಂದು ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಹೇಳಿದ್ದಾರೆ. ವಿಪಕ್ಷಗಳು ಸರ್ಜಿಕಲ್ ದಾಳಿಗೆ ಸಂಬಂಧಿಸಿದಂತೆಯೂ ವೃಥಾ ಟೀಕಿಸಿದವು, ಸಂಶಯ ವ್ಯಕ್ತಪಡಿಸಿದವು. ಇದೀಗ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ರಾಜಕೀಯ ಮಾಡಲು ಹೊರಟಿವೆ. ಪ್ರಜಾಪ್ರಭುತ್ವ ಹಿತದೃಷ್ಟಿಯಿಂದ ಸೇನಾವ್ಯವಸ್ಥೆಯಲ್ಲಿ ರಾಜಕೀಯ ತೂರಿಸುವುದು ಒಳಿತಲ್ಲ ಎಂದು ಅವರು ಹೇಳಿದ್ದಾರೆ.
ಕಾಶ್ಮೀರಿ ಪ್ರತ್ಯೇಕತಾವಾದಿಗಳು/ ನ್ಯಾಶನಲ್ ಕಾನ್ಫರನ್ಸ್
ಸೇನಾ ಮುಖ್ಯಸ್ಥರ ಹೇಳಿಕೆಗೆ ಕಾಶ್ಮೀರ ಪ್ರತ್ಯೇಕತಾವಾದಿಗಳು ಹಾಗೂ ನ್ಯಾಶನಲ್ ಕಾನ್ಫರನ್ಸ್ ಪ್ರತಿಕೂಲವಾಗಿ ಪ್ರತಿಕ್ರಿಯಿಸಿವೆ. ಕಾಶ್ಮೀರದ ವಾಸ್ತವತೆಯನ್ನು ತಿಳಿಯದೇ ಬಿಪಿನ್ ರಾವತ್ ಅವರು ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಡರೇಟ್ ಹುರಿಯತ್ನ ಮಿರ್ವಾಜ್ ಉಮರ್ ಫರೂಖ್ ಹೇಳಿದ್ದಾನೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಯೊಂದು ದುರಂತ ಎಂದಿರುವ ನ್ಯಾಶನಲ್ ಕಾನ್ಫರನ್ಸ್ ಮುಖ್ಯಸ್ಥ ಜುನೈದ್ ಅಮೀನ್ ಮಟ್ಟು, ಈ ರೀತಿಯ ಹೇಳಿಕೆಗಳು ಕಾಶ್ಮೀರಿಗಳ ಕುರಿತಾಗಿ ಸರ್ಕಾರಕ್ಕಿರುವ ಹಗೆತನವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.