ನವದೆಹಲಿ: ತನ್ನ ಹೆಸರನ್ನು ಬರೆಯುವ ತವಕ, ಕುತೂಹಲ ಕನಸು ಅವಳದು. ಅದಕ್ಕೇನು ಅಡ್ಡಿ ಅಂತೀರಾ ? ಪಾಪ ಅವಳು ಅನಕ್ಷರಸ್ಥೆ. ವಯಸ್ಕರ ಶಾಲೆ ಇವೆ ಎನ್ನಬಹುದು. ಆದರೆ ಅವಳ ವಯಸ್ಸು ಬರೋಬ್ಬರಿ 90. ಮೆಚ್ಚಬೇಕು ಆ ಜೀವದ ಅಕ್ಷರದ ಆಕಾಂಕ್ಷೆಗೆ.
ಅಜ್ಜಿಯ ಹೆಸರು ಅನುಸೂಯಾ ದೇಶಮುಖ್. ಮಹಾರಾಷ್ಟ್ರದ ಪಂಗಣೆ ಗ್ರಾಮದವಳು ಆಕೆ. ಇಡೀ ತನ್ನ ಬದುಕೇ ಅನಕ್ಷರತೆಯಲ್ಲೇ ಕಳೆದಿದೆ. ಆದ್ದರಿಂದ ಬದುಕು ಅಪೂರ್ಣ ಎನಿಸಿದೆ. ಪೋಷಕರು ಶಾಲೆಗೆ ಕಳುಹಿಸುವ ಸ್ಥಿತಿಯಿರಲಿಲ್ಲ. ಆದರೆ ನಾನೀಗ ನನ್ನ ಹೆಸರನ್ನು ಬರೆಯಲು ಕಲಿತಿರುವೆ. ತಾನು ಸತ್ತರೂ ಚಿಂತೆಯಿಲ್ಲ ಎನ್ನುತ್ತಾಳೆ ಅಜ್ಜಿ ಅನುಸೂಯಾ.
ಅಜ್ಜಿಯ ಕನಸಿಗೆ ಬಲ ತುಂಬಿದ್ದು ಸ್ಕೂಲ್ ಫಾರ್ ಗ್ರ್ಯಾನೀಸ್ (ಅಜ್ಜಿಬಾಯೀಚಿ ಶಾಲಾ) ಎಂಬ ಅಪರೂಪದ ಶಾಲೆ. 90 ವರ್ಷ ಮೇಲ್ಪಟ್ಟವರು, ಎಂದಿಗೂ ಶಾಲೆಗೆ ತೆರಳದವರಿಗೆ ಮಾತ್ರ ಇಲ್ಲಿ ಪ್ರವೇಶ. ಇಲ್ಲಿ ಓದುವುದು, ಬರೆಯುವುದು ಕಳೆದ 11 ತಿಂಗಳಿಂದ ಇಲ್ಲಿ ಕಲಿಸಲಾಗುತ್ತಿದೆ.
ಯೋಗೇಂದ್ರ ಬಂಗಾರ ಎಂಬ ಓರ್ವ ಪ್ರಾಥಮಿಕ ಶಾಲಾ ಶಿಕ್ಷಕ ಈ ಶಾಲೆಯನ್ನು ಆರಂಭಿಸಿದ್ದಾರೆ. ಒಂದು ಧಾರ್ಮಿಕ ಸಮಾರಂಭದಲ್ಲಿ ಓರ್ವರು ಗ್ರಂಥ ಓದುವುದನ್ನು ಕಂಡ ಅಜ್ಜಿ, ನಮಗೂ ಓದಲು ಬಂದಿದ್ದರೆ, ನಾವೇ ನಮ್ಮ ಮನೆಯಲ್ಲಿ ಪವಿತ್ರ ಧರ್ಮಗ್ರಂಥ ಓದಿಕೊಳ್ಳಬಹುದಿತ್ತು ಎನ್ನುತ್ತಾರೆ.
ಇದರಿಂದ ಪ್ರೇರಿತವಾದ ಯೋಗೇಂದ್ರ ಅವರು, ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಎಲ್ಲ ರೀತಿಯಿಂದಲೂ ಕಾಳಜಿ ಮಾಡುತ್ತಾರೆ. ಆದರೆ ಈ ಹಿರಿಯರ ಕನಸುಗಳ ಬಗ್ಗೆ ಯಾರೂ ಚಿಂತಿಸುವುದಿಲ್ಲ ಎಂದು ಅರಿಯುತ್ತಾರೆ. ಅದರ ಪರಿಣಾಮವಾಗಿ ಹಿರಿಯರ ಶಾಲೆ ಆರಂಭಿಸಲು ಮನಸ್ಸು ಮಾಡುತ್ತಾರೆ.
ಇದರೊಂದಿಗೆ ಇನ್ನೊಂದು ಕಾರಣವೆಂದರೆ ಅವರ ಪ್ರಾಥಮಿಕ ಶಾಲಾ ಕಟ್ಟಡವನ್ನು ವಿಸ್ತರಿಸಿ ಇನ್ನೊಂದು ಹೊಸ ಕೋಣೆಯನ್ನು ನಿರ್ಮಿಸಿರುತ್ತಾರೆ. ಇಲ್ಲಿ ಹಿರಿಯರಿಗೆ ಪಾಠ ಹೇಳಿಕೊಡುವುದರ ಜೊತೆಗೆ, ಪ್ರಾಥಮಿಕ ಶಾಲಾ ಮಕ್ಕಳಿಗೆ ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ಅವರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿಕೊಡಲು ಸುಲಭ ಎಂದು ಆಶಿಸಿ ಈ ಯೋಜನೆಗೆ ಯೋಗೇಂದ್ರ ಅವರು ಮುಂದಾದರಂತೆ. “A grandmother is a diamond. Value her, is our message” ಇದು ಅವರ ಸಂದೇಶವಂತೆ.
ತನ್ನ ಹೆಸರನ್ನು ಬರೆಯಲು ಕಲಿಯುವ ಉತ್ಸಾಹದ ಅಜ್ಜಿ ಅನುಸೂಯಾಗೆ ಈ ಶಾಲೆ ಹೇಳಿ ಮಾಡಿಸಿದಂತಿತ್ತು. ಅವಳ ಇಬ್ಬರು ಮಕ್ಕಳು-ಸೊಸೆಯಂದಿರು ಹಾಗೂ ಮಕ್ಕಳೊಂದಿಗೆ ಅಜ್ಜಿಯ ವಾಸ್ತವ್ಯ. ಅಜ್ಜಿಯನ್ನು ಪ್ರತಿದಿನವೂ ಶಾಲೆಗೆ ಬಿಡುವುದು ಹಾಗೂ ಕರೆದುಕೊಂಡು ಹೋಗುವುದು ಅವಳ ಕೊನೆಯ ಮೊಮ್ಮಗಳ ಕೆಲಸವಂತೆ. 28 ಜನ ಕಲಿಕಾಂಕ್ಷೆಯ ಅಜ್ಜಿಯರಲ್ಲಿ ಅನುಸೂಯ ದೇಶಮುಖ್ ಹಿರಿಯಳು.
ಅಜ್ಜಿಯರ ಶಾಲಾ ಸಮವಸ್ತ್ರ
ತಿಳಿಗುಲಾಬಿ ಸೀರೆ ಅಜ್ಜಿಯರ ಸಮವಸ್ತ್ರ. ಪಾಟಿ, ಚಾಕ್(ಪೇಣೆ), ಪಠ್ಯಪುಸ್ತಕ ಹೊಂದಿರುವ ಚೀಲ. ಸಾಮಾನ್ಯವಾಗಿ ಬಿಳಿ ಸೀರೆಯನ್ನೇ ಉಟ್ಟುಕೊಳ್ಳುವ ಮೂಲಕ ಪತಿ ಸತ್ತಿರುವ ಸಂಕೇತವಾಗಿ ಬದುಕುತ್ತಾರೆ. ಆದರೆ ಈ ರೀತಿಯ ನಂಬಿಕೆಗಳಿಂದ ಹೊರಬಂದು, ಅವರ ಉಳಿದ ಬದುಕಾದರೂ ಸಂತಸದಿಂದ, ನೆಮ್ಮದಿ, ಹೊಸತನದಿಂದ ಕೂಡಿರಲಿ ಎಂಬ ಸದಾಶಯದಿಂದ ಸೀರೆ ಬಣ್ಣವನ್ನು ಗುಲಾಬಿಗೆ ಬದಲಾಯಿಸಿದ್ದೇವೆ ಎನ್ನುತ್ತಾರೆ ಯೋಗೇಂದ್ರ ಮೇಷ್ಟ್ರು.
ವ್ಯಾಪಕ ಬೆಂಬಲ
ಇಡೀ ಗ್ರಾಮವೇ ಯೋಗೇಂದ್ರದ ಸಾಹಸಕ್ಕೆ ಬೆಂಬಲವಾಗಿ ನಿಂತಿದೆ. ಮೋತಿರಾಮ್ ದಲಾಲ್ ಚಾರಿಟೇಬಲ್ ಟ್ರಸ್ಟ್ನ ದಿಲೀಪ್ ದಲಾಲ್ ಅವರ ಸಹಾಯ, ಸಹಕಾರವೂ ಇದೆ. ಈ ಶಾಲೆಯಲ್ಲಿ ಓದುವುದು, ಬರೆಯುವುದನ್ನು ಕಲಿಯಲು ಅಜ್ಜಿಯರು ಹೆಮ್ಮೆ ಪಡುತ್ತಾರೆ. ಈ ನೂತನ ಪ್ರಯೋಗದಿಂದ ಮಕ್ಕಳಿಗೂ ಪರೋಕ್ಷವಾಗಿ ಅಧ್ಯಯನ ಮಹತ್ವ ತಿಳಿಸುವ ಸಂದೇಶ ಸಾರಿದಂತಾಗುತ್ತದೆ ಎನ್ನುತ್ತಾರೆ ದಿಲೀಪ್ ದಲಾಲ್ ಅವರು.
ಇದೇ ಶಾಲೆಯ ವಿದ್ಯಾರ್ಥಿನಿ 62 ವರ್ಷದ ಅಜ್ಜಿ ಸೀತಾ ಎಂಬುವರು ಬ್ಯಾಂಕಿಗೆ ಹೋದಾಗ ಸಹಿ ಮಾಡಿದರಂತೆ. ಪ್ರತಿ ಬಾರಿಯೂ ಹೆಬ್ಬೆಟ್ಟು ಒತ್ತುತ್ತಿದ್ದ ಅಜ್ಜಿಗೆ ಆಗ ಎಲ್ಲಿಲ್ಲದ ಸಂಭ್ರಮವಾಯಿತೆಂದು ಅವರೇ ಹೇಳಿಕೊಂಡಿದ್ದಾರೆ.
ಪಕ್ಕದ ಹಳ್ಳಿಯ ಅಜ್ಜಿಯರೂ ಈ ಶಾಲೆಗೆ ಬರಲು ಇಚ್ಛಿಸುತ್ತಿದ್ದಾರೆ. ಮುಂಬರುವ ಮಾ.8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ ಈ ಶಾಲೆಯ ವಾರ್ಷಿಕೋತ್ಸವ ಆಚರಿಸುವ ಹುಮ್ಮಸ್ಸಿನಲ್ಲಿದ್ದಾರೆ ಶಿಕ್ಷಕ ಯೋಗೇಂದ್ರ ಅವರು.
ಓದುವ ಅಜ್ಜಿಯರ ಸಂಖ್ಯೆ ಸಾವಿರವಾಗಲಿ, ಸಾಕ್ಷರತೆಯ ಜ್ಯೋತಿ ಎಲ್ಲೆಡೆ ಬೆಳಗಲಿ ಎಂಬುದೇ ನಮ್ಮ ಆಶಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.