ಗುವಾಹಟಿ: ಬಿಲ್ವಿದ್ಯೆಯಲ್ಲಿ ಪ್ರವೀಣೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಾಕೆ. ಆದರೂ ಅವಳು ಹೊಟ್ಟೆ ಪಾಡಿಗಾಗಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹಣ್ಣಿನ ವ್ಯಾಪಾರ ಮಾಡ್ತಾಳೆ.
ಹೌದು. ಅಸ್ಸಾಂನ ಬುಲಿ ಬಸುಮಾತಾರಿ ಎಂಬುವಳೇ ರಾಷ್ಟ್ರಮಟ್ಟದ ಅರ್ಚರಿಯಲ್ಲಿ ಗಮನ ಸೆಳೆದಾಕೆ. ಕಿರಿಯ ಹಾಗೂ ಹಿರಿಯರ ಮಟ್ಟದಲ್ಲಿಯೂ ರಾಷ್ಟ್ರೀಯ ಬಿಲ್ಲುಗಾರಿಕೆ(ಅರ್ಚರಿ) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿರಿಮೆ ಅವಳದು.
2005 ರಲ್ಲಿ ಅಜ್ಮೀರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ 2 ಚಿನ್ನ, 1 ಬೆಳ್ಳಿ ಪದಕ ಪಡೆದಿದ್ದಾರೆ. 2006 ರಲ್ಲಿ ಔರಂಗಬಾದ್, ಅಮರಾವತಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಚಿನ್ನ, ಬೆಳ್ಳಿ ಪದಕ ಪಡೆದಿರುವುದು ಗಮನಾರ್ಹ.
28 ವರ್ಷದ ಇವಳಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿನ ಬಡತನ ಹಾಗೂ ಗಾಯದ ಸಮಸ್ಯೆ ಕಾರಣ ಜೀವನದ ಬಂಡಿ ಸಾಗಿಸುವುದೇ ಅವಳಿಗೆ ಕಷ್ಟವಾಗಿದೆ. ಸಂಸಾರದ ನೊಗ ಹೊತ್ತ ಅರ್ಚರಿ ಪ್ರತಿಭೆ, ಅನಿವಾರ್ಯವಾಗಿ ಹಣ್ಣು ಮಾರಾಟವನ್ನು ತನ್ನ ಜೀವನೋಪಾಯದ ಮಾರ್ಗ ಮಾಡಿಕೊಂಡಿದ್ದಾಳೆ.
ಅವಳ ಯಜಮಾನನೂ ದಿನಗೂಲಿ ನೌಕರನಾಗಿದ್ದು ಸಂಬಳ ಸಾಲುವುದಿಲ್ಲ. ಅದಕ್ಕಾಗೇ ಹಣ್ಣು ಮಾರಾಟಕ್ಕೆ ಮುಂದಾದೆ. ಇದರಿಂದ ದಿನಕ್ಕೆ 150 ರಿಂದ 200 ರೂಪಾಯಿ ಬರುತ್ತಿತ್ತು. ಇದು ನನಗೆ ಸಹಕಾರಿಯಾಗಿತ್ತು, ಆದರೆ ಸಾಕಾಗುತ್ತಿರಲಿಲ್ಲ ಎಂದು ಬುಲಿ ಬಸುಮಾತಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ 4 ವರ್ಷಗಳಿಂದ ಹಣ್ಣು ಮಾರಾಟದಲ್ಲೇ ಬದುಕು ಸಾಗಿಸುತ್ತಿರುವ ಇವಳ ಕುರಿತು ಮಾಧ್ಯಮಗಳು ವರದಿ ಮಾಡಿದವು. ಪರಿಣಾಮ ಅಸ್ಸಾಂ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಅಸ್ಸಾಂನ ಕ್ರೀಡಾ ಸಚಿವ ನಬಾ ಕುಮಾರ್ ಡೋಲಿ ಅವರು, ಅವಳಿಗೆ ಅಸ್ಸಾಂ ಅರ್ಚರಿ ತಂಡಕ್ಕೆ ತರಬೇತುದಾರಳನ್ನಾಗಿ ನೇಮಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ನೇಮಕಾತಿ ಪತ್ರವನ್ನು ನೀಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಮತ್ತೆ ತನ್ನ ಕನಸಿನ ಅರ್ಚರಿ ಕ್ಷೇತ್ರಕ್ಕೆ ಮರಳುತ್ತಿರುವುದಕ್ಕೆ ಕ್ರೀಡಾ ಪ್ರತಿಭೆ ಬುಲಿ ಬಸುಮಾತಾರಿ ಸಂತಸ ವ್ಯಕ್ತಪಡಿಸಿದ್ದು, ಮುಂದೆ ತನ್ನ ಮಕ್ಕಳಿಗೂ ಬಿಲ್ಲುಗಾರಿಕೆಯ ತರಬೇತಿಯನ್ನೇ ಕೊಡುವುದಾಗಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.