ನವದೆಹಲಿ: ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಎಲ್ಲ ಸಮುದಾಯಗಳ ಏಳ್ಗೆಗೆ ಶ್ರಮಿಸಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ನಾಳೆ ಬಜೆಟ್ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, ರೈಲ್ವೈ ಬಜೆಟ್ನ್ನೂ ಒಳಗೊಂಡ ಇದು ಐತಿಹಾಸಿಕ ಮಹತ್ವ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ದಲಿತರು, ವಂಚಿತರು ಹಾಗೂ ಬಡವರ ಪರ ಇರುವುದಕ್ಕೆ ಜನ್ಧನ್ ಖಾತೆಯನ್ನು ಜಾರಿಗೆ ತಂದಿರುವುದೇ ಸಾಕ್ಷಿ. ಸ್ವಚ್ಛ ಭಾರತ ಅಭಿಯಾನ ಇಂದು ಜನಾಂದೋಲನವಾಗಿ ಬದಲಾಗಿದೆ. ಜನರ ಜೀವನಮಟ್ಟ ಸುಧಾರಿಸುವಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ನಾರಿ ಶಕ್ತಿ ಪುರಸ್ಕಾರ, ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಗಳ ಮೂಲಕ ಮಹಿಳಾ ಪರವಾಗಿಯೂ ಸರ್ಕಾರ ಇರುವುದನ್ನು ಸಾಬೀತುಪಡಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ, ಬುಡಕಟ್ಟು ಜನರ ಅಭಿವೃದ್ಧಿಗಾಗಿ ಸ್ಥಳೀಯ ಪ್ರದೇಶಗಳ ಅಭಿವೃದ್ಧಿ, ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಯುವಸಮೂಹದ ಏಳ್ಗೆಗಾಗಿ ಸರ್ಕಾರ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸೇರಿದಂತೆ ಸಾಮಾಜಿಕ, ಆರ್ಥಿಕ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದೆ ಎಂದರು.
ನೋಟ್ಬ್ಯಾನ್ ಮಾಡುವ ಮೂಲಕ ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಹೂಡಿದ್ದು ಗಮನಾರ್ಹ ಸಂಗತಿ. ಬೆಲೆ ಏರಿಕೆ ನಿಯಂತ್ರಣ, ರೈತರ ಜೀವನಮಟ್ಟ ಸುಧಾರಿಸುವಲ್ಲಿಯೂ ಹಲವು ಕ್ರಮ ಕೈಗೊಂಡಿದೆ.
ಸೇನೆಯ ಸಮಾನ ವೇತನ ಮತ್ತು ಸಮಾನ ಪಿಂಚಣಿ ಸಮಸ್ಯೆಯನ್ನೂ ಬಗೆಹರಿಸಿರುವ ಸರ್ಕಾರ, ಪಾಕ್ ಮೇಲೆ ಸೀಮಿತ ದಾಳಿ ಮಾಡುವ ಮೂಲಕ ತಕ್ಕ ಉತ್ತರ ನೀಡಿ ಧೈರ್ಯವನ್ನೂ ಮೆರೆದಿದೆ. ಸೈನಿಕರಿಗೆಲ್ಲ ನನ್ನ ವಂದನೆ ಎಂದು ಮುಖರ್ಜಿ ಹೇಳಿದರು.
ಇತ್ತೀಚೆಗೆ ಪರಿಚಯಿಸಿದ ಭೀಮ್ ಆಪ್, 7 ನೇ ವೇತನಾ ಆಯೋಗದ ರಚನೆ ಇತ್ಯಾದಿಗಳ ಮೂಲಕ ಅನೇಕ ಸ್ವಾಗತಾರ್ಹ ಕಾರ್ಯ ಮಾಡಿದ್ದು ಸರ್ಕಾರದ ಹೆಮ್ಮೆ ಎಂದು ಅವರು ಹೇಳಿದರು.
ಹೀಗೇ ಮೋದಿ ನೇತೃತ್ವದ ಸರ್ಕಾರದ ಅನೇಕ ವಿಶಿಷ್ಟಪೂರ್ಣ ಕಾರ್ಯಗಳನ್ನು ಪ್ರಸ್ತಾಪಿಸಿದ ಪ್ರಣಬ್ ಮುಖರ್ಜಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ಬೆನ್ನು ತಟ್ಟಿದರೆಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.