ಚೆನ್ನೈ : ತಮಿಳುನಾಡಿನ ಸಿಎಂ ಜಯಲಲಿತಾ ಜೆ. ಅವರು ಕಳೆದ ರಾತ್ರಿ (ಡಿ. 5) 11.30 ಕ್ಕೆ ವಿಧಿವಶರಾಗಿದ್ದು, ಇಂದಿನಿಂದ ತಮಿಳುನಾಡಿನಾದ್ಯಂತ 7 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಕಳೆದ 74 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ಜಯಲಲಿತಾ ಅವರಿಗೆ ಭಾನುವಾರ ಹೃದಯಾಘಾತವಾಗಿತ್ತು. ಕೃತಕ ಉಸಿರಾಟದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ.
ಮೂಲತಃ ಕನ್ನಡದವರಾದರೂ ಸತತ ಎರಡು ಬಾರಿ ಹಾಗೂ ಒಟ್ಟು ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಕೋಟ್ಯಾಂತರ ತಮಿಳರ ಜನಮಾನಸದಲ್ಲಿ ನೆಚ್ಚಿನ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆ ಕಾರ್ಯಕರ್ತರ ಪುರಚ್ಚಿ ತಲೈವಿಯಾಗಿ ಸ್ಥಾನ ಪಡೆದಿದ್ದರು. ಭಾರತ ದೇಶ ಕಂಡ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ರಾಜಕಾರಣಿಯಾಗಿದ್ದರು.
ಜಯಲಲಿತಾ ಅವರ ನಿಧನಕ್ಕೆ ದೇಶಾದ್ಯಂತ ಗಣ್ಯರು, ಚಿತ್ರನಟರು, ಕಲಾವಿದರು, ಎಲ್ಲರೂ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವರು ಜಯಲಲಿತಾ ಅವರ ನಿಧನಕ್ಕೆ ಟ್ವೀಟ್ ಮಾಡಿ, ಜಯಲಲಿತಾ ಅವರ ಅಕಾಲಿಕ ನಿಧನದಿಂದ ಅತೀವ ದುಃಖವಾಗಿದೆ. ಅವರು ಮಹಿಳೆಯರಿಗೆ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಬಡವರಿಗಾಗಿ ಅತ್ಯಂತ ಜನಪರ ಕೆಲಸಗಳನ್ನು ಮಾಡಿದ್ದರು. ಅವರ ನಿಧನದಿಂದಾಗಿ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
Deeply saddened at the passing away of Selvi Jayalalithaa. Her demise has left a huge void in Indian politics.
— Narendra Modi (@narendramodi) December 5, 2016
ಪ್ರಧಾನಿ ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಇಂದು ಚೆನ್ನೈಗೆ ತೆರಳಲಿದ್ದಾರೆ ಎನ್ನಲಾಗಿದೆ.
ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಅಂತಿಮದರ್ಶನಕ್ಕಾಗಿ ರಾಜಾಜಿ ಹಾಲ್ನಲ್ಲಿ ಇಡಲಾಗಿದ್ದು, ಮಂಗಳವಾರ ಸಂಜೆ 4.30 ಕ್ಕೆ ಚೆನ್ನೈನ ಮರೀನಾ ಬೀಚ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.
ಅಮ್ಮನಿಗೆ ಇಷ್ಟವಾಗಿದ್ದ ಹಸಿರು ಬಣ್ಣದ ಸೀರೆಯನ್ನಿಟ್ಟು ಪಾರ್ಥಿವ ಶರೀರವನ್ನು ರಾಷ್ಟ್ರಧ್ವಜವನ್ನು ದೇಹದ ಮೇಲೆ ಹೊದಿಸಲಾಗಿದೆ. ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಬರುತ್ತಿದ್ದು, ಕಳೆದುಕೊಂಡ ಪ್ರೀತಿಯ ಅಮ್ಮನಿಗಾಗಿ ಕಂಬನಿ ಮಿಡಿಯುತ್ತಿದ್ದಾರೆ.
ತಮಿಳುನಾಡಿನಲ್ಲಿ ಇಂದಿನಿಂದ 7 ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಲಾಗಿದ್ದು, 3 ದಿನಗಳ ಕಾಲ ಶಾಲಾ ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.