ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿಯ ನಿರ್ಧಾರದ ಬಗ್ಗೆ ಸ್ಪಷ್ಟಪಡಿಸುತ್ತಾ, ಈ ನಡೆಯು ಕಪ್ಪು ಹಣದ ವಿರುದ್ಧ ಹೋರಾಟದಲ್ಲಿ ಸಾಮಾನ್ಯ ಜನರ ಶಕ್ತಿಯನ್ನು ಬಲಪಡಿಸಿದೆ ಎಂದು ಹೇಳಿದರು. ವಿರೋಧ ಪಕ್ಷದವರ ನಡೆಯ ಕುರಿತು ಪ್ರತಿಕ್ರಿಯಿಸಿದ ಅವರು, ಈ ನಡೆಯನ್ನು ಟೀಕಿಸುವವರು ತಾವು ಸಿಕ್ಕಿಬಿಳುವ ಭಯದಿಂದ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಿದರು.
ಸಂವಿಧಾನ ದಿನದ ಹಿನ್ನಲೆಯಲ್ಲಿ ಸಂಸತ್ ಭವನದಲ್ಲಿ ಏರ್ಪಡಿಸಲಾಗಿದ್ದ ‘ಮೇಕಿಂಗ್ ಆಫ್ ಇಂಡಿಯನ್ ಕಾನ್ಸ್ಟಿಟ್ಯೂಷನ್’ ಮತ್ತು ‘ಇಂಡಿಯನ್ ಕಾನ್ಸ್ಟಿಟ್ಯೂಷನ್’ ಪರಿಷೃತ ಆವೃತ್ತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ನೋಟು ರದ್ದತಿಯನ್ನು ಟೀಕಿಸುತ್ತಿರುವವರು ಸರ್ಕಾರದ ಈ ಒಳ್ಳೆಯ ನಡೆಯ ಬಗ್ಗೆ ಅವರಿಗೆ ತೊಂದರೆ ಇಲ್ಲ. ಆದರೆ ಅವರಿಗೆ ತಯಾರಾಗಲು ಸಮಯ ನೀಡಿಲ್ಲ ಎನ್ನುವುದೇ ಅವರ ದೊಡ್ಡ ಸಮಸ್ಯೆಯಾಗಿದೆ’ ಎಂದು ಹೇಳಿದ್ದಾರೆ.
‘ಭಾರತದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಒಬ್ಬ ಯೋಧನಂತಾಗಿದ್ದು ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ದ ಹೋರಾಡಲು ಸಿದ್ಧರಾಗಿದ್ದಾರೆ. ಆನ್ಲೈನ್ ಮೂಲಕ ಪಾವತಿ ಮಾಡುವುದರಿಂದ ದೇಶವನ್ನು ಕ್ಯಾಶ್ಲೆಸ್ ಸಮಾಜವಾಗಿ ನಿರ್ಮಿಸುವುದು ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.
ಸಂವಿಧಾನದ ವಿಚಾರ ನೆನಪಿಸಿದಾಗೆಲ್ಲಾ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಬಗ್ಗೆ ನೆನಪಾಗುತ್ತದೆ ಎಂದು ಹೇಳಿದರು.
ನವೆಂಬರ್ 26 ನ್ನು ಸಂವಿಧಾನ ದಿನವೆಂದು ಆಚರಿಸಲು ನಿರ್ಧರಿಸಲಾಗಿದ್ದು, ಈ ಪ್ರಯುಕ್ತ ಯುವಜನತೆಯಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಕೇವಲ ಸಂವಿಧಾನದ ಆರ್ಟಿಕಲ್(ವಿಧಿ)ಗಳ ಬಗ್ಗೆ ತಿಳಿದುಕೊಳ್ಳದೆ, ಅದರ ಜೊತೆಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದುವುದು ಮಹತ್ವದ್ದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ನವೆಂಬರ್ 26 ರ ಆಚರಣೆ ಇಲ್ಲದೇ, ಜನವರಿ 26 ರ ಗಣರಾಜ್ಯೋತ್ಸವ ದಿನಾಚರಣೆ ಅಪೂರ್ಣ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.