ನವದೆಹಲಿ: ಇಲ್ಲಿಯ ಜುಮ್ಮಾ ಮಸೀದಿ ಬಳಿಯ ನೇಪಾಳಿ ವೂಲನ್ ಮಾರ್ಕೆಟ್ ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿ 1:10ರ ಸುಮಾರಿಗೆ ಬೆಂಕಿ ಅವಗಢ ಸಂಭವಿಸಿದ್ದು, ಸುಮಾರು 150 ವೂಲನ್ ಬಟ್ಟೆ ಅಂಗಡಿಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ದುರಂತ ಸಂಭವಿಸಿದ ಕೂಡಲೇ 14 ಅಗ್ನಿಶಾಮಕ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಆಗಮಿಸಿ ಸತತ ಮೂರು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿಯಲ್ಲಿ ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಲೇ ಇವೆ. ಸೋಮವಾರ ಸಂಜೆ ಉತ್ತರ ದೆಹಲಿಯ ಸಾದರ್ ಬಜಾರ್ನ ಸ್ಲಂ ಪ್ರದೇಶದ ಬಳಿ ಸುಮಾರು 300 ಮನೆಗಳು ಬೆಂಕಿಗಾಹುತಿಯಾಗಿದ್ದವು.
ಇನ್ನು ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಿರ್ದೇಶನದಂತೆ ವಾಯು ಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ೧೫ ವರ್ಷಗಳಷ್ಟು ಹಳೆಯ ಡೀಸೆಲ್ ವಾಹನಗಳ ಮರುನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಜೊತೆಗೆ ಧಾರ್ಮಿಕ ಹಬ್ಬಗಳನ್ನು ಹೊರತುಪಡಿಸಿ ಮದುವೆ ಮತ್ತಿತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಪಟಾಕಿಗಳ ಬಳಕೆಯನ್ನು ನಿಷೇಧಿಸಿದೆ.
ವಾಯು ಮಾಲಿನ್ಯನಿಂದ ಕೂಡಿದ ಪ್ರದೇಶಗಳಿಂದ ದೂರ ಉಳಿಯುವಂತೆ ಜನರಿಗೆ ಸೂಚಿಸಲಾಗಿದ್ದು, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಗೆ ಹೋಗದಂತೆ ತಿಳಿಸಿದೆ.
ಗವರ್ನರ್ ನಜೀರ್ ಜಂಗ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ, ಪರಿಸರ ಸಚಿವ ಇಮ್ರಾನ್ ಹುಸೇನ್ ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಹಿರಿಯ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳನ್ನು ನವೆಂಬರ್ ೧೫ರಂದು ನಡೆಯಲಿರುವ ಮುಂದಿನ ಸಭೆಯಲ್ಲಿ ಪರಿಶೀಲಿಸಲಾಗುವುದು. ನಿರ್ಮಾಣ ಮತ್ತು ಕಟ್ಟಡಗಳ ಕೆಡುವಿಕೆ ಚಟುವಟಿಕೆಗಳು ನವೆಂಬರ್ ೧೪ರ ವರೆಗೆ ಮುಂದುವರೆಯಲಿದ್ದು, ಮಿತಿಮೀರಿ ಸರಕುಗಳನ್ನು ತುಂಬಿದ ಟ್ರಕ್ಗಳು ಮತ್ತಿತರ ವಾಹನಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಗವರ್ನರ್ ಕಚೇರಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲಿನ್ಯಕಾರಕ ಕೈಗಾರಿಕೆಗಳು ವಿಶೇಷವಾಗಿ ಅನುಮತಿ ಇಲ್ಲದ ಪ್ರದೇಶಗಳಲ್ಲಿ ನಡೆಸಲಾಗುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಮಹಾನಗರ ಪಾಲಿಕೆ ಮತ್ತು ದೆಹಲಿ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ಅಂತಹ ಕೈಗಾರಿಕೆಗಳನ್ನು ಮುಚ್ಚುವಂತೆ ಗವರ್ನರ್ ನಜೀರ್ ಜಂಗ್ ಆದೇಶಿಸಿದ್ದಾರೆ.
೧೫ ವರ್ಷಗಳಷ್ಟು ಹಳೆಯ ಡೀಸೆಲ್ ವಾಹನಗಳ ಮರುನೋಂದಣಿಯಿಂದ ಸುಮಾರು 2 ಲಕ್ಷ ವಾಹನಗಳು ರಸ್ತೆಯಿಂದ ದೂರ ಉಳಿಯಲಿವೆ ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.