ರಾಂಚಿ : ಜಾರ್ಖಂಡ್ ಮತ್ತು ಛತ್ತೀಸ್ಗಢ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಉನ್ನತ ನಕ್ಸಲ್ ನಾಯಕ ಭಾಲ್ಕೇಶ್ವರ್ ಓರಾಯನ್ ಅಲಿಯಾಸ್ ವಿನಯ್ ಓರಾಯನ್ ಅಲಿಯಾಸ್ ಬಡಾ ವಿಕಾಶ್ ಪೊಲೀಸರಿಗೆ ಶರಣಾಗತನಾಗಿದ್ದಾನೆ.
ಜಾರ್ಖಂಡ್ ಪೊಲೀಸ್ ಮಹಾನಿರ್ದೇಶಕ ಡಿ. ಕೆ. ಪಾಂಡೆ ಅವರ ಎದುರು ರಾಂಚಿಯಲ್ಲಿನ ಪೊಲೀಸ್ ಹೆಡ್ಕ್ವಾಟರ್ಸ್ನಲ್ಲಿ ಆತ ಶರಣನಾಗಿದ್ದಾನೆ.
ನಕ್ಸಲ್ ನಾಯಕ ಅರವಿಂದ್ ಜಿ ಬಳಿಕ ವಿಕಾಶ್ ನಕ್ಸಲ್ ಸಂಘಟನೆಯ ಎರಡನೇ ಅತಿ ದೊಡ್ಡ ಕಮಾಂಡರ್ ಆಗಿದ್ದ. ಹಲವು ನಕ್ಸಲ್ ಸಂಬಂಧಿತ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನ ತಲೆಗೆ 25 ಲಕ್ಷ ಘೋಷಣೆ ಮಾಡಲಾಗಿತ್ತು.
ಲಾಥೇಹಾರ್ನ ಮಾನೇಕ ಪ್ರದೇಶದವನಾದ ಈತ ಸಿಪಿಐ(ಮಾವೋವಾದಿ) ಬಿಹಾರ-ಜಾರ್ಖಂಡ್-ಉತ್ತರ ಛತ್ತೀಸಗಢದ ವಿಶೇಷ ಪ್ರದೇಶದ ಸಮಿತಿಯ ಸದಸ್ಯನಾಗಿದ್ದ. 1995 ರಲ್ಲಿ ಈ ಸಂಘಟನೆಗೆ ಸೇರಿಕೊಂಡಿದ್ದ.
ಇದೀಗ ಜಾರ್ಖಂಡ್ ಸರ್ಕಾರದ ‘ಆಪರೇಷನ್ ನಯೀ ದಿಶಾ’ ಯೋಜನೆಯಿಂದ ಪ್ರಭಾವಿತನಾಗಿ ಪೊಲೀಸರ ಸತತ 6 ತಿಂಗಳ ಪರಿಶ್ರಮದ ಫಲವಾಗಿ ವಿಕಾಶ್ ಶರಣನಾಗಿದ್ದಾನೆ.
ನಕ್ಸಲ್ ಹಾದಿ ತುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವ ಯೋಜನೆಯೇ ‘ಆಪರೇಶನ್ ನಯೀ ದಿಶಾ’. ಇದೀಗ ವಿಕಾಶ್ ಶರಣಾಗತನಾಗಿದ್ದರಿಂದ ಅವನಿಂದ ಪ್ರೇರಿತರಾಗಿ ಇತರ ನಕ್ಸಲರೂ ಶರಣಾಗತರಾಗುವ ನಿರೀಕ್ಷೆ ಇದೆ.
ವಿಕಾಶ್ ತಲೆಗೆ ಘೋಷಿಸಲಾದ 25 ಲಕ್ಷ ರೂ. ಅನ್ನು ಯೋಜನೆಯ ನಿಯಮದಂತೆ ಆತನ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.