ಲಖ್ನೌ : #UPGoesGreen ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಉತ್ತರ ಪ್ರದೇಶವನ್ನು ಸ್ವಚ್ಛಗೊಳಿಸಿ, ಹಸಿರು ಉತ್ತರಪ್ರದೇಶ ಯೋಜನೆಯಡಿಯಲ್ಲಿ ಒಂದೇ ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮೂಲಕ ಉತ್ತರ ಪ್ರದೇಶ ಸರ್ಕಾರವು ವಿಶ್ವದಾಖಲೆ ಮಾಡಲು ಹೊರಟಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳ ವಿವಿಧೆಡೆ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 80 ವಿವಿಧ ತಳಿಗಳ ಸಸಿಗಳನ್ನು ನೆಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಒಂದೇ ದಿನದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಉತ್ತರ ಪ್ರದೇಶವನ್ನು ಹಸಿರು ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಘೋಷಿಸಿದ್ದರು.
ಇದೇ ನಿಟ್ಟಿನಲ್ಲಿ ಇಂದು (ಜುಲೈ 11) ಈ ಯೋಜನೆ ಚಾಲನೆ ನೀಡಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ (ಮಂಗಳವಾರ ಜುಲೈ 12) ಮುಕ್ತಾಯವಾಗಲಿದೆ. ರಾಜ್ಯದ ವಿವಿಧೆಡೆ ಗಿಡಗಳನ್ನು ನೆಡಲಾಗುತ್ತಿದೆ. ಭೂಮಿಯ ಮೇಲೆ ಒಂದೇ ದಿನದಲ್ಲಿ ಎಲ್ಲೂ ಇಷ್ಟೊಂದು ಗಿಡಗಳನ್ನು ನೆಟ್ಟಿರುವ ದಾಖಲೆ ಇಲ್ಲ. ಇದು ವಿಶ್ವದಾಖಲೆಯಾಗಲಿದೆ ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.
ಈ ಯೋಜನೆಯು ಸುಮಾರು 770 ಚದುರ ಕಿಮೀ. ಅಳತೆಯ 6000 ಪ್ಲಾಂಟೇಷನ್ ಸ್ಥಳವನ್ನು ಹೊಂದಿದ್ದು, ಇದರ ಜೊತೆ ಸುಮಾರು 5,50,00 ಕ್ಕೂ ಹೆಚ್ಚು ಜನರು ಕೈಜೋಡಿಸಿದ್ದಾರೆ. ‘ನಮ್ಮ ಜೊತೆ ಗಿಡ ಬೆಳೆಸಿ, ಉತ್ತಮ ಪರಿಸರದೆಡೆಗೆ ನಿಮ್ಮ ಪಾತ್ರವನ್ನು ನಿಭಾಯಿಸಿ’ ಎಂದು ಉತ್ತರ ಪ್ರದೇಶ ಸರ್ಕಾರ ಟ್ವೀಟ್ ಮಾಡಿದೆ.
ಮಧ್ಯಾಹ್ನ 12.45 ರ ಸಮಯಕ್ಕೆ 1 ಕೋಟಿ ಗಿಡಗಳನ್ನು ನೆಡಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಅಧಿಕೃತ ಟ್ವಿಟರ್ ಟ್ವೀಟ್ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.