ಆಪ್ಘಾನಿಸ್ಥಾನ : ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಪ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರು ಜೊತೆಗೂಡಿ ಸಲ್ಮಾ ಅಣೆಕಟ್ಟನ್ನು ಲೋಕಾರ್ಪಣೆಗೊಳಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಭಾರತ ಈ ಡ್ಯಾಂಗೆ 1700 ಕೋಟಿ ರೂ.ಗಳಷ್ಟು ನೆರವನ್ನು ನೀಡಿದೆ.
ಈ ಅಣೆಕಟ್ಟಿಗೆ ಸಲ್ಮಾ ಅಣೆಕಟ್ಟು ಎಂದು ಹೆಸರಿತ್ತು. ಆದರೆ ಈಗ ಅದನ್ನು ‘ಆಪ್ಘಾನ್-ಇಂಡಿಯಾ ಫ್ರೆಂಡ್ ಶಿಫ್ ಡ್ಯಾಂ’ ಎಂದು ಹೆಸರಿಸಲಾಗಿದೆ. ಇದು ನಮ್ಮ 40 ವರ್ಷಗಳ ಕನಸು. ನಿಮ್ಮ ಸಹಕಾರದಿಂದ ಇಂದು ಸಾಕಾರಗೊಂಡಿದೆ ಎಂದು ಆಪ್ಘಾನಿಸ್ಥಾನದ ಅಧ್ಯಕ್ಷರು ಹೇಳಿದರು.
ಆಪ್ಘಾನ್-ಇಂಡಿಯಾ ಫ್ರೆಂಡ್ ಶಿಫ್ ಡ್ಯಾಂ ಎಂಬ ಹೆಸರಿಟ್ಟಿದ್ದಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ ಮೋದಿ, ಡ್ಯಾಂನ್ನು ಆಪ್ಘಾನಿಸ್ಥಾನದ ಜನರಿಗಾಗಿ ಭಾರತದ ಜನರು ಸಮರ್ಪಿಸಿದ್ದಾರೆ. ಉಭಯ ದೇಶಗಳ ನಡುವೆ ಹೊಸ ಸ್ನೇಹ ಸಂಬಂಧ ಸೃಷ್ಟಿಯಾಗಿದ್ದು, ಈ ಮೂಲಕ ಬಾಂಧವ್ಯ ವೃದ್ಧಿಯಾಗಲಿದೆ. ಇದು ಕೇವಲ ಒಂದು ಯೋಜನೆಯಾಗಿರದೆ, ಎರಡೂ ದೇಶಗಳ ನಡುವಿನ ಪ್ರೀತಿ, ಸ್ನೇಹ, ಸಂಬಂಧವನ್ನು ಅಭಿವೃದ್ದಿಪಡಿಸಲು ಸಹಕಾರಿಯಾಗಲಿದೆ. ಈ ಮೂಲಕ ಆಪ್ಘಾನಿಸ್ಥಾನ ಭವಿಷ್ಯದಲ್ಲಿ ಸಮೃದ್ಧತೆಯನ್ನು ಕಾಣಲು ಸಹಕಾರಿಯಾಗುತ್ತದೆ. ಡ್ಯಾಂ ಕೇವಲ ಇಟ್ಟಿಗೆಗಳಿಂದ ಕಟ್ಟಲಾಗಿಲ್ಲ. ಭಾರತ ಮತ್ತು ಆಪ್ಘಾನಿಸ್ಥಾನದ ನಡುವಿನ ವಿಶ್ವಾಸ, ಸ್ನೇಹ, ಪ್ರೀತಿಯ ಮೂಲಕ ಇದನ್ನು ಕಟ್ಟಲಾಗಿದೆ.
ಭಾರತ ಮತ್ತು ಆಪ್ಘಾನಿಸ್ಥಾನದ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. ಅದು ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದು ಎಂದು ಕೆಲ ವಿಷಯಗಳ ಕುರಿತು ಮಾತನಾಡಿದರು.
ಆಪ್ಘಾನಿಸ್ಥಾನದ ಸರ್ವ ಕ್ಷೇತ್ರಗಳ ಅಭಿವೃದ್ಧಿಗಾಗಿ ಭಾರತ ಸಹಾಯವನ್ನು ಮಾಡಲಿದೆ. ನಾವು ಆಪ್ಘಾನಿಸ್ಥಾನದಲ್ಲಿ ಪ್ರಜಾಪ್ರಭುತಾತ್ಮಕ ಬೇರುಗಳನ್ನು ನೋಡಲಿಚ್ಛಿಸುತ್ತೇವೆ. ಇದು ನಮ್ಮನ್ನು ಒಂದುಗೂಡಿಸಲಿದೆ. ಈ ಮೂಲಕ ಇಲ್ಲಿನ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ಇಲ್ಲಿಯ ಸಾಂಸ್ಕೃತಿಕ ಮತ್ತು ಕಲೆ ವೃದ್ಧಿಸಬೇಕು. ಕ್ರಿಕೆಟ್ ಆಟದಲ್ಲಿ ಟೆಸ್ಟ್ ಮತ್ತು ಐಪಿಎಲ್ ಪಂದ್ಯಗಳಲ್ಲಿ ಇಲ್ಲಿನ ಕ್ರೀಡಾಪಟುಗಳು ಭಾಗವಹಿಸಬೇಕು.
ಕ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಮಾತುಗಳನ್ನು ನೆನಪಿಸುತ್ತಾ, ಪ್ರತಿ ವ್ಯಕ್ತಿ ಸೂರ್ಯನ ಮೇಲೆ ಪ್ರೀತಿ, ನದಿಯ ಮೇಲೆ ಉದಾರತೆ ಮತ್ತು ಮಾತೃಭೂಮಿಯ ಆತಿಥ್ಯವನ್ನು ಮರೆಯಬಾರದು ಎಂದು ಹೇಳಿದರು.
ನಿಮ್ಮ ಗೆಳೆತನ ನಮಗೆ ಘನತೆಯನ್ನು ನೀಡಿದೆ. ನಿಮ್ಮ ಕನಸುಗಳನ್ನು ಪೂರೈಸುವ ಕರ್ತವ್ಯ ನಮ್ಮದಾಗಿದೆ. ಭಾರತ ಮತ್ತು ಆಪ್ಘಾನಿಸ್ಥಾನದ ನಡುವೆ 40 ವರ್ಷಗಳ ಸ್ನೇಹದ ಹೊಸ ಭಾಷ್ಯವನ್ನು ಬರೆದಂತಾಗಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಆಪ್ಘಾನಿಸ್ಥಾನ ಹೊಸ ಅಭಿವೃದ್ಧಿಯ ಪಥದತ್ತ ಸಾಗಲಿದೆ. ಅದಕ್ಕಾಗಿ ನಾವು ನಿಮ್ಮೊಂದಿಗಿದ್ದೇವೆ. ಆಪ್ಘಾನಿಸ್ಥಾನ ಮತ್ತು ಪ್ರಪಂಚದಾದ್ಯಂತ ಇರುವ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ತಿಂಗಳ ಶುಭಾಶಯ ಕೋರುತ್ತೇನೆ ಎಂದು ಪ್ರಧಾನಿ ಮೋದಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ ಮತ್ತು ಆಪ್ಘಾನಿಸ್ಥಾನದ ಪ್ರೀತಿಯ ದ್ಯೋತಕವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಪ್ಘಾನಿಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಅಮೀರ್ ಅಮಾನುಲ್ಲಾಖಾನ್ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಇದು ಆಪ್ಘಾನಿಸ್ಥಾನ ಮೊದಲ ಬಾರಿಗೆ ಒಬ್ಬ ವಿದೇಶಿ ವ್ಯಕ್ತಿಗೆ ನೀಡಿದ ಗೌರವವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.