ಮಥುರಾ / ನವದೆಹಲಿ : ಮಥುರಾದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 24 ಜನರು ಸಾವನ್ನಪ್ಪಿದ್ದು, 40 ಜನರನ್ನು ಬಂಧಿಸಿ, 365 ಜನರನ್ನು ವಿಚಾರಣೆಗೊಳಪಡಿಸಲಾಗಿದೆ.
ಘರ್ಷಣೆಯನ್ನು ಹತ್ತಿಕ್ಕಲು ವಿಫಲರಾದುದಕ್ಕೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಪ್ಪೊಪ್ಪಿಕೊಂಡಿದ್ದಾರೆ. ಸಂಪೂರ್ಣ ಸಿದ್ಧತೆಗಳೊಂದಿಗೆ ಪೊಲೀಸರು ಅಲ್ಲಿಗೆ ತೆರಳಬೇಕಾಗಿತ್ತು. ಸತ್ಯಾಗ್ರಹಿಗಳ ಬಳಿ ಶಸ್ತ್ರಾಸ್ತ್ರಗಳು ಇರುವುದು ಗೊತ್ತಿರಲಿಲ್ಲ. ಬಹಳಷ್ಟು ಸಲ ಮಾತುಕತೆ ನಡೆಸಿದ್ದರೂ ಸಂಧಾನ ಫಲಪ್ರದವಾಗಲಿಲ್ಲ. ಇದೀಗ ಅಕ್ರಮವಾಗಿ ವಾಸಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಈ ಪ್ರಕರಣವನ್ನು ಆಯುಕ್ತರ ಮಟ್ಟದಲ್ಲಿ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೃತಪಟ್ಟ ಇಬ್ಬರು ಪೊಲೀಸ್ ಕುಟುಂಬಗಳಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ 20 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ.
ಪ್ರಸ್ತುತ ಇಲ್ಲಿ ಉದ್ರಿಕ್ತ ವಾತಾವರಣವಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಆರ್ ಪಿಎಫ್ ಯೋಧರು ಇದ್ದಾರೆ.
ಘಟನೆಯ ಹಿನ್ನೆಲೆ
ಜವಾಹರ್ ಬಾಗ್ ಪ್ರದೇಶದಲ್ಲಿ ಅಕ್ರಮ ಭೂ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಂಡಿರುವ ಧಾರ್ಮಿಕ ನಾಯಕ ಜೈ ಗುರುದೇವ್ ಅವರ ಬೆಂಬಲಿಗರಾದ ಸುಮಾರು 3000 ಜನ ಈ ಪ್ರದೇಶದಲ್ಲಿ ಎರಡು ವರ್ಷಗಳಿಂದ ವಾಸಿಸುತ್ತಿದ್ದು ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಆಜಾದ್ ಭಾರತ್ ವಿಧಿಕ ವೈಚಾರಿಕ್ ಕ್ರಾಂತಿ ಸತ್ಯಾಗ್ರಹಿ ಎಂಬ ಹೆಸರಿನಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಕೆಲವಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು.
ಮಾಂಸಾಹಾರ ನಿಷೇಧಿಸಬೇಕು, ರಾಷ್ಟ್ರಪತಿ, ಪ್ರಧಾನಿ ಹುದ್ದೆಗೆ ಚುನಾವಣೆಯನ್ನು ರದ್ದು ಮಾಡಬೇಕು, ಭಾರತದ ರೂಪಾಯಿಯನ್ನು ರದ್ದುಗೊಳಿಸಿ ಆಜಾದ್ ಹಿಂದ್ ಫೌಜ್ ಕರೆನ್ಸಿಯನ್ನು ಅಸ್ತಿತ್ವಕ್ಕೆ ತರಬೇಕು, 1 ರೂ. ಗೆ 40 ಲೀ. ಪೆಟ್ರೋಲ್, 60 ಲೀ. ಡೀಸೆಲ್ ಮಾರಾಟ ಮಾಡಬೇಕು, ಬ್ರಿಟೀಷರ ಕಾಯ್ದೆಗಳನ್ನು ರದ್ದುಗೊಳಿಸಿ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಕಾಯ್ದೆ ಜಾರಿಗೊಳಿಸಬೇಕು ಎಂಬ ಆಗ್ರಹಗಳನ್ನಿಟ್ಟಿದ್ದರು.
ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಸಂಧಾನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಅಲಹಾಬಾದ್ ಹೈಕೋರ್ಟ್ ಜವಾಹರ್ ಬಾಗ್ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರನ್ನು ತೆರವುಗೊಳಿಸಿಬೇಕು ಎಂಬ ಆದೇಶದ ಬಳಿಕ ಪರಿಶೀಲನೆ ನಡೆಸಲು ಜವಾಹರ್ ಬಾಗ್ಗೆ ಎಸ್ಪಿ ಮುಕುಲ್ ದ್ವಿವೇದಿ ಹಾಗೂ ಫರಾಹ್ ಸ್ಟೇಷನ್ ಠಾಣಾಧಿಕಾರಿ ಸಂತೋಷ್ ಯಾದವ್ ತೆರಳಿದ್ದರು. ಆದರೆ ಅಲ್ಲಿನ ಸತ್ಯಾಗ್ರಹಿಗಳು ರೊಚ್ಚಿಗೆದ್ದು ಕಲ್ಲು ತೂರಾಟ, ಘರ್ಷಣೆ ಸಂಭವಿಸಿ ಗಲಭೆಯಲ್ಲಿ ಇಬ್ಬರೂ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದರು.
ತದನಂತರ ಹೆಚ್ಚಿನ ಪಡೆಗಳು ಆಗಮಿಸಿ ಸತ್ಯಾಗ್ರಹಿಗಳನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಬಂದೂಕು ಗ್ರೆನೇಡ್ ಗಳನ್ನು ಉಪಯೋಗಿಸಿ ಪೊಲೀಸರ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸ್ಫೋಟಕಗಳಿಗೆ ಬೆಂಕಿ ತಗುಲಿ ಭಾರೀ ಅನಾಹುತಕ್ಕೆ ಕಾರಣವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.