ಮಂಗಳೂರು : ಇಂದು ಎಬಿವಿಪಿ ವತಿಯಿಂದ ದೇಶ ಮೊದಲು- ತಿರಂಗ ರ್ಯಾಲಿ ಆಯೋಜಿಸಲಾಯಿತು. ನಗರದ ಪಿ.ವಿ.ಎಸ್ ವೃತ್ತದಿಂದ ಪ್ರಾರಂಭವಾದ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
ನಂತರ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಸಂಚಾಲಕ ಸುದಿತ್, ಈ ದೇಶದ ಯೋಧರು ಕೊರೆಯುವ -40 ಡಿಗ್ರಿ ಚಳಿಯಲ್ಲಿ ದೇಶ ಕಾಯುತ್ತಿದ್ದರೆ, ಈ ನೆಲದ ಅನ್ನ ತಿಂದು, ಈ ನೆಲದ ನೀರು ಕುಡಿದ ಕೆಲ ವಿಕೃತ ಮನಸ್ಸುಗಳು ದೇಶವನ್ನು ತುಂಡರಿಸುವ ಮಾತುಗಳನ್ನಾಡಿದವು. ಯಾವ ದೇಶಪ್ರೇಮಿ ತಾನೇ ಈ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಿರಲು ಸಾಧ್ಯ? ದೇಶ ತುಂಡರಿಸುವ ಮಾತುಗಳನ್ನಾಡುವ ಕೆಲ ಒಡಕಿ ಧ್ವನಿಗಳಿಗೆ ಉತ್ತರವಾಗಿ, ಸಾವಿರ ಅಫ್ಜಲ್, ಸಾವಿರ ಯಾಕೂಬ್, ಸಾವಿರ ಮಕ್ಬೂಲ್ರಿಂದ ಈ ದೇಶ ತುಂಡರಿಸಲು ಸಾಧ್ಯವಿಲ್ಲವೆಂದು ನಾವು ಕೋಟಿ ಕೋಟಿ ಸ್ವರಗಳ ಮೂಲಕ ಸಾರಿ ಹೇಳಬೇಕಾಗಿದೆ. ಈ ದೇಶವನ್ನು ನಾಶಗೊಳಿಸುವ ಮಾತನಾಡುವ ಮಾವೋವಾದಿಗಳು, ನಕ್ಸಲರು, ಪ್ರತ್ಯೇಕವಾದಿಗಳು ಹಾಗೂ ಅವರನ್ನು ಬೆಂಬಲಿಸುವ ಕಾಂಗ್ರೇಸಿನ ಒಳಸಂಚುಗಳನ್ನು, ಕುಟಿಲ ರಾಜನೀತಿಯನ್ನು ನಾವು ಮತ್ತು ಸಮಾಜ ಅರಿಯಬೇಕಿದೆ ಎಂದು ಹೇಳಿದರು.
ಫೆಬ್ರವರಿ ೯ ರಂದು ಜೈ ಜವಾನ್ ಘೋಷಣೆಗಳೊಂದಿಗೆ ಇಡೀ ದೇಶದ ಜನ ಒಂದಾಗಿ ಸಿಯಾಚಿನ್ ಯೋಧ ಲ್ಯಾನ್ಸ್ ನಾಯ್ಕ್ ಹನುಮಂತಪ್ಪನವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರೆ, ದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರು ವಿವಿಯಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೆಲ ಅರಾಷ್ಟ್ರೀಯವಾದಿ, ಮಾವೋ ವಿಚಾರ ಪ್ರೇರಿತ, ವಿಕೃತ ಮನಸ್ಸಿನ ವಿದ್ಯಾರ್ಥಿಗಳು ಕೂಗುತ್ತಿದ್ದರು.
‘ದೇಶವನ್ನು ಹತ್ತು ತುಂಡುಗಳನ್ನಾಗಿ ಮಾಡುತ್ತೇವೆ’, ‘ದೇಶ ನಾಶ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’, ‘ಅಜಾದ್ ಕಾಶ್ಮೀರ್ ಪಡೆದೇ ತೀರುತ್ತೇವೆ’, ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅವರು ಕೂಗಿದ ಘೋಷಣೆಗಳನ್ನು ಕೇಳಿಸಿಯೇ ಬಹುಶಹ ಧೀರ ಯೋಧ ಹನುಮಂತಪ್ಪನವರ ಉಸಿರು ಅಂದು ನಿಂತು ಹೋಯಿತು ಎಂದರು.
ಜೆ.ಎನ್.ಯುನಲ್ಲಿ ನಡೆದ ಘಟನೆ ಈ ರೀತಿಯ ಕೊಳಕು ಮನಸ್ಸುಗಳ ನಿಜವಾದ ಅನಾವರಣವಾಗಿದೆ. ದೇಶ ತುಂಡರಿಸುವ ಮಾತನಾಡುವ ರಾಷ್ಟ್ರದ್ರೋಹಿಗಳಿಗೆ ಹಾಗೂ ಅವರನ್ನು ಬೆಂಬಲಿಸುವ ವಿಕೃತ ಮನಸುಗಳಿಗೆ ಇಡೀ ಸಮಾಜದ ಒಕ್ಕೊರಲ ಧಿಕ್ಕಾರವಿದೆ. ಇಂತಹ ದುಷ್ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಎಬಿವಿಪಿ ಆಗ್ರಹಿಸಿದೆ ಎಂದರು.
ಈ ಸಂದರ್ಭ ಈ ರ್ಯಾಲಿಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ಚೇತನ್ ಪಡೀಲ್, ನಾರಯಣಗುರು ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಘ್ನೇಶ್ ಕೋಟೆ, ಕೆನರಾ ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಮನ್, ವಿದ್ಯಾರ್ಥಿ ಮುಖಂಡರಾದ ಶೀತಲ್, ವಿಘ್ನೇಶ್, ಅಮರನಾಥ್, ಕೀರ್ತನ್ ದಾಸ್, ಶೋಧನ್, ಗಂಗಾಧರ್, ಅನುಷ, ಸುಷ್ಮಿತ, ರಶ್ಮಿ, ಸುಶಾನ್, ಧನುಷ್ ಮೊದಲಾದವರು ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.