ಜಮ್ಮು: ಇಲ್ಲಿನ ಕುಪ್ವಾರಾ ಅರಣ್ಯ ಪ್ರದೇಶದ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ ಉಗ್ರರನ್ನು ಸದೆಬಡೆಯುವ ಸಂದರ್ಭ ತೀವ್ರ ಗಾಯಗೊಂಡಿದ್ದ ಕರ್ನಲ್ ಸಂತೋಷ್ ಮಹಾದಿಕ್ ಸಾವನ್ನಪ್ಪಿದ್ದು, ಭಾರತೀಯ ಸೇನೆ ಇಂದು ಕರ್ನಲ್ ಸಂತೋಷ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದೆ.
41ನೇ ರಾಷ್ಟ್ರೀಯ ರೈಫಲ್ಸ್ನ ಅರೆ ಸೈನಿಕ ಪಡೆಯ ಕಮಾಂಡರ್, ಮಹಾರಾಷ್ಟ್ರದ 39 ವರ್ಷದ ಕರ್ನಲ್ ಸಂತೋಷ್ ಮಹಾದಿಕ್ ಅವರು ಕುಪ್ವಾರಾದ ಹಾಜಿ ನಾಕಾದ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರನ್ನು ಶೋಧಿಸುವ ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದರು. ಈ ಸಂದರ್ಭ ಪೊದೆಗಳ ಹಿಂದೆ ಅವಿತುಕೊಂಡಿದ್ದ ಉಗ್ರರು ಕರ್ನಲ್ ಸಂತೋಷ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಅವರು ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ.13ರಿಂದಲೇ ಆರಂಭಗೊಂಡಿರುವ ಶೋಧ ಕಾರ್ಯಾಚರಣೆಯಲ್ಲಿ ಓರ್ವ ಸೇನಾ ಜವಾನ ಕೂಡ ಗಾಯಗೊಂಡಿರುದಾಗಿ ತಿಳಿದು ಬಂದಿದೆ.
ಕರ್ನಲ್ ಸಂತೋಷ್ ಅವರು ಪತ್ನಿ ಮತ್ತು 11 ಮತ್ತು 5 ವರ್ಷದ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ದುಃಖತಪ್ತ ಸಂದರ್ಭದಲ್ಲಿ ಕುಟುಂಬಕ್ಕೆ ಎಲ್ಲಾ ಬೆಂಬಲ ನೀಡುವುದಾಗಿ ರಕ್ಷಣಾ ವಕ್ತಾರರು ತಿಳಿಸಿದರು.
ಕರ್ನಲ್ ಸಂತೋಷ್ ಅವರು ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ನಿಜವಾಗಿ ಕೆಚ್ಚೆದೆಯ ಯೋಧ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಕಳೆದುಕೊಂಡಂತಹ ಯೋಧನಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಎಂದು ಕಮಾಂಡಿಂಗ್ ಇನ್ ಚೀಫ್ ನಾದರ್ನ್ ಕಮಾಂಡ್ ಲೆಪ್ಟಿನೆಂಟ್ ಜನರಲ್ ಡಿ. ಎಸ್. ಹೂಡಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.