
ಬೆಂಗಳೂರು: ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂಬ ಕೆಟ್ಟ ಪದ ಬಳಸಿದ್ದು ಸರಿಯೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಇದನ್ನು ಖಂಡತುಂಡವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಿಗೆ ಪಶ್ಚಾತ್ತಾಪ ಆಗಿದ್ದರೆ ಅವರು ತಕ್ಷಣ ದೇಶದ ಕ್ಷಮೆ ಕೇಳಬೇಕು. ಮೋದಿಜೀ ಅವರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಯವರು ತಾಳ್ಮೆ ಕಳಕೊಂಡು ಹೀಗೆ ಮಾತನಾಡುತ್ತಿದ್ದಾರಾ? ರಾಹುಲ್ ಗಾಂಧಿಯವರ ಓಲೈಕೆಗಾಗಿ ಹೀಗೆ ಮಾತನಾಡುತ್ತಾರಾ? ಮುಖ್ಯಮಂತ್ರಿ ಪದವಿಯಲ್ಲಿ ಇನ್ನೊಂದಷ್ಟು ದಿನ ಉಳಕೊಳ್ಳಲು ಹೀಗೆ ಮಾತಾಡಿದ್ದಾರಾ? ಅಥವಾ ತಲೆಗಿಲೆ ಕೆಟ್ಟು ಇಂಥ ಪದ ಬಳಸುತ್ತಿದ್ದಾರಾ? ಎಂದು ಕೇಳಿದರು. ಅವರಿಗೆ ಪರೀಕ್ಷೆ ಮಾಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಂದ ಈಚೆಗೆ ಅಮೃತವನ್ನು ಸವಿಯಬೇಕಾದ ನಾಲಿಗೆಯಲ್ಲಿ ಹೇಸಿಗೆಯ ಮಾತುಗಳು ಬರುತ್ತಿರುವುದು ವಿಪರ್ಯಾಸ. ನಾಲಿಗೆಗೆ ಒಂದು ಬೆಲೆ ಇದೆ. ಅದಕ್ಕೊಂದು ಗೌರವ ಇದೆ. ನಾಲಿಗೆ ಒಂದು ಜೀವನದ ಉತ್ತಮ ಮಟ್ಟ ಇಲ್ಲವೇ ಕೆಟ್ಟ ಪರಂಪರೆಯ ಸೃಷ್ಟಿಗೆ ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.
ಪ್ರಿಯಾಂಕ್ ಖರ್ಗೆಯವರು ಇದಕ್ಕೂ ಮುಂಚೆ ಇದೇರೀತಿಯ ಪದ ಬಳಸಿದ್ದರು. ಸರಿಸಮಾನ ಪದವಿಯಲ್ಲಿ ಇರುವವರು ಕೆಲವು ಸಂದರ್ಭದಲ್ಲಿ ಟೀಕೆ ಮಾಡುವಾಗ ಲಘುವಾಗಿ ಮಾತನಾಡಿದರೂ ಅವರವರ ಎತ್ತರಕ್ಕೆ ಸರಿ ಹೋಗಬಹುದು. ಆದರೆ, ಒಬ್ಬ ಯುವಕ, ಸಣ್ಣ ವ್ಯಕ್ತಿ ದೇಶದ ಪ್ರಧಾನಿಯನ್ನು ಇಷ್ಟೊಂದು ಕಠಿಣ ಪದಗಳಿಂದ ನಿಂದಿಸಿದರೆ ಪ್ರಧಾನಿಯನ್ನು ಗೌರವಿಸುವ ಈ ದೇಶವಾಸಿಗಳು ಅವರನ್ನು ಬಹುಶಃ ಕುನ್ನಿಗೆ ಹೋಲಿಸುತ್ತಾರೆ. ನಾನು ಆ ಥರ ಹೋಲಿಸುವುದಿಲ್ಲ ಎಂದು ನುಡಿದರು.
ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ..
ಸದನ ಇಷ್ಟು ದಿನ ನಡೆದಿದ್ದು, ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ ಮಾಡಿದ್ದಾರೆ. ವಿಬಿ ಜಿ ರಾಮ್ ಜಿ ವಿರೋಧಿಸುವ ಕೆಲಸ ಮಾತ್ರ ಮಾಡಿದ್ದಾರೆ. ಜನರ ಸಮಸ್ಯೆ ಚರ್ಚೆ ಆಗಿಲ್ಲ ಎಂದು ಟೀಕಿಸಿದರು. ಕಾಯ್ದೆ ಮೊದಲೇ ಅನುಮೋದನೆ ಪಡೆದ ಕಾರಣ ಇವರ ಇಷ್ಟು ದಿನದ ಶ್ರಮ ಕಸದ ಬುಟ್ಟಿಗೆ ಹೋಯಿತಲ್ಲವೇ? ಎಂದು ಕೇಳಿದರು. ನಿಮ್ಮ ವ್ಯರ್ಥ ಪ್ರಯತ್ನಗಳನ್ನು ಹೋರಾಟದ ಮೂಲಕ ಜನಮನಕ್ಕೆ ಒಯ್ಯಲಿದ್ದೇವೆ ಎಂದು ತಿಳಿಸಿದರು.
2 ಲಕ್ಷ 80 ಸಾವಿರ ಹುದ್ದೆಗಳು ಖಾಲಿ
ದಾವಣಗೆರೆಯಲ್ಲಿ ನಿನ್ನೆ ಪರಿಶಿಷ್ಟ ವರ್ಗಗಳ ಸಮಾವೇಶ ನಡೆದಿದೆ. ಒಳ ಮೀಸಲಾತಿ ಬಗ್ಗೆಯೂ ಅಲ್ಲಿ ಮಾತನಾಡಿದ್ದಾರೆ. ಮೀಸಲಾತಿ ಹೆಚ್ಚಳದ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳೇ, ಎರಡೂವರೆ ವರ್ಷಗಳಿಂದ ಯಾವುದೇ ನೇಮಕಾತಿ ಸರಕಾರದಲ್ಲಿ ಆಗುತ್ತಿಲ್ಲ. 2 ಲಕ್ಷ 80 ಸಾವಿರ ಹುದ್ದೆಗಳು ಖಾಲಿ ಬಿದ್ದಿವೆ. ಒಳ ಮೀಸಲಾತಿ ಕಾಯ್ದೆ ಇನ್ನೂ ಊರ್ಜಿತ ಆಗಿಲ್ಲ. ನೀವು ಮಾಡಿದ್ದೇನು? ಎಂದು ಕೇಳಿದರು.
ಬಿಜೆಪಿಯ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು 15ರಿಂದ 17 ಶೇ, ಎಸ್ಟಿಗಳಿಗೆ 3ರಿಂದ ಶೇ 7 ಮಾಡಿ, ಅವತ್ತೇ ಕಾನೂನು ಮಾಡಿ ಜಾರಿಗೊಳಿಸಿದ್ದರು. ಅದನ್ನು ನೀವು ಊರ್ಜಿತ ಮಾಡಬೇಕಿತ್ತು. ಕೋರ್ಟಲ್ಲಿ ವಾದ ಮಾಡಲು ನೀವು ಅರ್ಜಿಯೂ ಹಾಕಿಲ್ಲ ಎಂದು ಟೀಕಿಸಿದರು. ನೀವು ಬಿಜೆಪಿಯದು ನಾಟಕ ಎಂದವರು ಒಳ ಮೀಸಲಾತಿ ಮಾಡುವಾಗ ಶೇ 17, ಶೇ 7 ರ ಮೇಲೆ ಯಾವ ರೀತಿ ಮಾಡಿದಿರಿ? ನೀವು ಶೆಡ್ಯೂಲ್ 9ಕ್ಕೆ ಸೇರಿಸಿದ್ದೀರಾ ಮುಖ್ಯಮಂತ್ರಿಗಳೇ ಎಂದು ಕೇಳಿದರು.
ನೀವು ಸಂತೆಭಾಷಣ ಮಾಡುವುದೇಕೆ?..
ನಿಮ್ಮ ಖಜಾನೆ ಖಾಲಿ ಆಗಿದೆ. ಯುವಜನರ ಬಗ್ಗೆ ನಿಮಗೆ ಪ್ರೀತಿ ಪ್ರೇಮ ಇಲ್ಲ. ಅವರ ಭವಿಷ್ಯದ ಕುರಿತು ಕಾಳಜಿ ಇಲ್ಲ. ಅದನ್ನು ತುಂಬುವ ಬದಲು ನೀವು ಸಂತೆಭಾಷಣ ಮಾಡುವುದೇಕೆ? ಎಂದು ಕೇಳಿದರು. ಇದಕ್ಕೆ ಬದ್ಧತೆ ಬೇಕು. ಬದ್ಧತೆ ಇದ್ದರೆ ಕೇಂದ್ರದ ಬಳಿಗೆ ತೆರಳಿ ಮಾತನಾಡಬೇಕು. ಕೇವಲ ಪತ್ರ ಬರೆದು ಕುಳಿತರೆ ಆಗದು ಎಂದು ತಿಳಿಸಿದರು. ದಲಿತರ ಉದ್ಧಾರದ ಭಾಷಣ ಮಾಡಿ, ದಲಿತರ ಸರ್ವನಾಶ ಮಾಡುತ್ತೀರಿ ಎಂದು ಆಕ್ಷೇಪಿಸಿದರು.
ಇನ್ನು ಮೇಲೆ ಬಂಗಾರದ ಮೂಲಕ ಭ್ರಷ್ಟಾಚಾರ..
ತಿಮ್ಮಾಪುರ ಇಲಾಖೆಯಲ್ಲಿ 25 ಲಕ್ಷ ಕರೆನ್ಸಿ ಸಿಕ್ಕಿದೆ. ಎಲ್ಲೇ ಹೋದರೂ ಲಕ್ಷ ಲಕ್ಷ ಕರೆನ್ಸಿ ಸಿಗುತ್ತಿದೆ. ಅದಕ್ಕಾಗಿಯೇ ಸರಕಾರ, ಕರೆನ್ಸಿ ಮೂಲಕ ಭ್ರಷ್ಟಾಚಾರದ ಹಣ ಕೊಡುವಂತಿಲ್ಲ ಎಂಬ ತೀರ್ಮಾನಕ್ಕೆ ಬಂದ ಹಾಗಿದೆ. ಇನ್ನು ಮೇಲೆ ಬಂಗಾರದ ಮೂಲಕ ಭ್ರಷ್ಟಾಚಾರ ಎಂದು ನಿರ್ಧರಿಸಿದಂತಿದೆ. ಎಲ್ಲೆಡೆ ಬಂಗಾರ ಸಿಗುತ್ತಿದೆ ಎಂದು ವ್ಯಂಗ್ಯವಾಡಿದರು. ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


