
ಬೆಂಗಳೂರು: ರಾಜ್ಯ ಸರಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡಲು ಸದನವನ್ನು ಬಳಸುತ್ತಿರುವುದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾನ್ಯ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇವತ್ತು ಮಾತನಾಡಿದ್ದಾರೆ. ಆದರೆ, ಸದನದ ಒಳಗಡೆ ಗೌರವಾನ್ವಿತ ರಾಜ್ಯಪಾಲರಿಗೆ ಅಗೌರವ ಸೂಚಿಸುವ ಕೆಲಸವನ್ನು ಆಡಳಿತ ಪಕ್ಷದವರು ಮಾಡಿದ್ದು ಖಂಡನಾರ್ಹ ಎಂದು ತಿಳಿಸಿದರು.
ಈ ಕಾಂಗ್ರೆಸ್ ಸರಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸ ಮಾಡಿದೆ. ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ದಾರಿಯಲ್ಲಿ ರಾಜ್ಯ ಸರಕಾರ ಸಾಗುತ್ತಿದೆ. ಸದನದ ದುರ್ಬಳಕೆಯನ್ನೂ ರಾಜ್ಯ ಸರಕಾರ ಮಾಡಲು ಹೊರಟಿರುವುದು ದುರ್ದೈವ ಎಂದು ಟೀಕಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಜೀಯವರು, ಕೇಂದ್ರ ಸರಕಾರವು ಮನ್ ರೇಗಾದಲ್ಲಿ ವಿಬಿ ಜಿ ರಾಮ್ ಜಿ ಎಂದು ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ.
ಸುಧಾರಣೆಗಳನ್ನು ತಂದಿದ್ದಾರೆ. ಅದರ ವಿರುದ್ಧ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಪಪ್ರಚಾರಗಳನ್ನು ಪ್ರಾರಂಭಿಸಿದೆ ಎಂದು ಆರೋಪಿಸಿದರು.
ಪಾಪ, ಕಾಂಗ್ರೆಸ್ಸಿನವರು ಗೊಂದಲದಲ್ಲಿದ್ದಾರೆ. ಗ್ರಾಮೀಣ ಭಾಗದ ಬಡವರು, ಸಣ್ಣ ರೈತರು, ಕಾರ್ಮಿಕರಿಗೆ ಅನುಕೂಲ ಆಗಲೆಂದು ಉದ್ಯೋಗ ಖಾತ್ರಿ ಯೋಜನೆ ಜಾರಿಯಾಗಿದೆ. ಕಾಂಗ್ರೆಸ್ ಪುಡಾರಿಗಳಿಗಾಗಿ ಈ ಯೋಜನೆ ಅಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಕಿವಿಮಾತು ಹೇಳಿದರು.
ಕಾಂಗ್ರೆಸ್ ಪಕ್ಷವು ಉದ್ಯೋಗ ಖಾತ್ರಿ ಯೋಜನೆ ಇರುವುದು ಕಾಂಗ್ರೆಸ್ ಪುಡಾರಿಗಳಿಗಾಗಿ ಎಂದು ಭಾವಿಸಿದಂತಿದೆ. ನರೇಂದ್ರ ಮೋದಿ ಜೀಯವರು ಸಾಕಷ್ಟು ಸುಧಾರಣೆಗಳೊಂದಿಗೆ ಕಾಯ್ದೆ ತಂದಿದ್ದು, ಅದನ್ನು ವಿರೋಧಿಸಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮಾನ್ಯ ರಾಜ್ಯಪಾಲರ ಮೂಲಕ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಜನರನ್ನು ಎತ್ತಿಕಟ್ಟುವಂಥ ಕುತಂತ್ರ, ಷಡ್ಯಂತ್ರಕ್ಕೆ ಕೈ ಹಾಕಿದ್ದರು. ಅದಕ್ಕೆ ಗೌರವಾನ್ವಿತ ರಾಜ್ಯಪಾಲರು ಅವಕಾಶ ನೀಡಿಲ್ಲ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಸರಕಾರಕ್ಕೆ 140 ಶಾಸಕರ ಬೆಂಬಲ ಇದೆ ಎಂಬ ಕಾರಣಕ್ಕೆ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವು ತಮ್ಮ ನಡವಳಿಕೆ ಸರಿ ಮಾಡಿಕೊಳ್ಳದೇ ಹೋದರೆ, ಒಕ್ಕೂಟದ ವ್ಯವಸ್ಥೆಗೆ ಕಲ್ಲು ಹಾಕುವ ಕೆಲಸವನ್ನು ಸುಧಾರಣೆ ಮಾಡಿಕೊಳ್ಳದೇ ಇದ್ದರೆ 140 ಶಾಸಕರಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿ 40ಕ್ಕೆ ಇಳಿಸಬೇಕೆಂದು ಈಗಾಗಲೇ ರಾಜ್ಯದ ಜನರು ಕಾಯುತ್ತಿದ್ದಾರೆ. ಆ ದಿನಗಳೂ ದೂರ ಉಳಿದಿಲ್ಲ ಎಂದು ಎಚ್ಚರಿಸಿದರು. ಇದನ್ನು ಅರ್ಥ ಮಾಡಿಕೊಂಡು ಸರಕಾರವು ಸರಿಯಾದ ದಾರಿಯಲ್ಲಿ ಹೋಗಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಉಳಿಸಬೇಕೆಂದು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


