
ಬೆಳಗಾವಿ: ಕಂದಾಯ ಸಚಿವರ ಅಕ್ರಮಗಳ ಕುರಿತಂತೆ ಸದನದಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಂದಾಯ ಸಚಿವರ ವಿರುದ್ಧ ನಾವು ಮಾಡಿದ ಆರೋಪ ಗಂಭೀರ ಸ್ವರೂಪದ್ದು. ಕಂದಾಯ ಸಚಿವರಾದ ಅವರು ಸರಿಯಾಗಿ ದಾಖಲಾತಿ ಪರಿಶೀಲಿಸದೆಯೇ ಹೇಳಿಕೆ ನೀಡುತ್ತಿದ್ದಾರೆ. ಅವರು ನಡೆಸುತ್ತಿರುವ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಹಾಗಿದ್ದರೆ ಎಂದು ಪ್ರಶ್ನಿಸಿದ್ದಾರೆ.
ಜವಾಬ್ದಾರಿಯುತ ಸಚಿವೆ ಸದನಕ್ಕೆ ತಪ್ಪು ಮಾಹಿತಿ ಕೊಡುವುದು ಖಂಡಿತ ಸರಿಯಲ್ಲ. ಇದರ ಕುರಿತು ಬಿಜೆಪಿ- ಜೆಡಿಎಸ್ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಕುರಿತು ತಪ್ಪು ಮಾಹಿತಿ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ಮಾಹಿತಿಯೂ ಸಚಿವರ ಬಳಿ ಇರದಿದ್ದರೆ ಅದು ಖಂಡಿತ ಸರಿಯಲ್ಲ . ಗ್ಯಾರಂಟಿಗಳ ಪರಿಣಾಮವಾಗಿ ಸಾರಿಗೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಸರಿಯಾಗಿ ಸಂಬಳ ಕೊಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬರುವ ದಿನಗಳಲ್ಲಿ ಇವರ ಬಂಡವಾಳ ಇನ್ನಷ್ಟು ಬಯಲಾಗಲಿದೆ. ತಾನೆಷ್ಟು ದಿನ ಮುಖ್ಯಮಂತ್ರಿಗಳಾಗಿ ಇರುತ್ತೇನೋ ಎಂಬ ಗೊಂದಲ ಸಿದ್ದರಾಮಯ್ಯರನ್ನು ಕಾಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದರು. ಕಳೆದೊಂದು ವರ್ಷದಲ್ಲಿ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ ಎಂದು ಟೀಕಿಸಿದರು.
ಒಳಜಗಳ, ಡಿನ್ನರ್ ಮೀಟಿಂಗ್ ಬೆಳಗಾವಿಯಲ್ಲೂ ಮುಂದುವರೆದಿದೆ. ಸಿಎಂ, ಸಚಿವರು, ಶಾಸಕರ ನಡುವಿನ ಒಳಜಗಳದಿಂದ, ಸಿಎಂ ವಿಚಾರದಲ್ಲಿ ಪೈಪೋಟಿಯ ಪರಿಣಾಮವಾಗಿ ಆಡಳಿತ ಹಳಿ ತಪ್ಪಿದ್ದು ಸತ್ಯ ಎಂದರು.
ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ಮೂಲಕ ಹೈಕಮಾಂಡಿಗೆ ಹಣ ಸಂದಾಯ ಮಾಡುವುದು ಮುಂದುವರೆದಿದೆ. ಇದನ್ನು ಹಿಂದಿನಿಂದಲೂ ಹೇಳಿದ್ದೇನೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೂರಾರು ಕೋಟಿ ಪೋಲಾಗಿದೆ. ಬಳಿಕ ಒಂದಾದ ಮೇಲೊಂದು ಹಗರಣ ನಡೆಯುತ್ತಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಗುತ್ತಿಗೆದಾರರಿಂದ ವಸೂಲಿ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ, ರಾಜ್ಯ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಇವರಿಗೆ ಬಡವರಾದರೇನು? ಶ್ರೀಮಂತ ಆದರೇನು? ರಾಜ್ಯದಲ್ಲಿ ಲೂಟಿ ಮಾಡಿ, ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿ ಪಡಿಸಿ ತಾವು ಅಧಿಕಾರದಲ್ಲಿ ಮುಂದುವರೆಯಬೇಕಿದೆ. ಇದೊಂದೇ ಸರಕಾರದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ನೀರಾವರಿ ಯೋಜನೆಗಳ ಪ್ರಗತಿ ಶೇ 10ರಷ್ಟೂ ಇಲ್ಲ ಎಂದು ಅವರು ಇದೇವೇಳೆ ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



