
ಗಾಂಧಿನಗರ: ಕರ್ಣಾವತಿ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ಭಾರತದ ಯುವಕರು ಜಾತಿ, ಧರ್ಮ ಮತ್ತು ಸಾಮಾಜಿಕ ಅಡೆತಡೆಗಳನ್ನು ಮೀರಿ ಎದ್ದುನಿಂತು, ಭಾರತದ ಕಳೆದುಹೋದ ಜಾಗತಿಕ ಸ್ಥಾನಮಾನವನ್ನು ಪುನರ್ನಿರ್ಮಿಸಲು ಏಕತೆ, ಸಹಾನುಭೂತಿ ಮತ್ತು ಟೀಮ್ ವರ್ಕ್ ಮೇಲೆ ಗಮನ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು.
ಯುವ ಪದವೀಧರರು ನೈತಿಕ ಮತ್ತು ರಾಷ್ಟ್ರೀಯ ನವೀಕರಣದ ಪಥದರ್ಶಕರಾಗಲು ಕರೆ ನೀಡಿದ ಐಎಎಫ್ ಮುಖ್ಯಸ್ಥರು, “ನಾವು ಒಂದು ಕಾಲದಲ್ಲಿ ಜಗತ್ತಿನಲ್ಲಿ ನಾಯಕರಾಗಿದ್ದೆವು, ಆದರೆ ಶತಮಾನಗಳಿಂದ ನಾವು ಹಿಂದುಳಿದಿದ್ದೇವೆ. ಭಾರತವು ತನ್ನ ಸರಿಯಾದ ಸ್ಥಾನವನ್ನು ಮರಳಿ ಪಡೆಯಬೇಕಾದರೆ, ಅದನ್ನು ಸಾಧ್ಯವಾಗಿಸುವವರು ನಿಮ್ಮಂತಹ ಯುವಕರು” ಎಂದು ಹೇಳಿದರು.
ಗುಜರಾತ್ನ ಗಾಂಧಿನಗರದಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಮಾತನಾಡಿದ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಸಿಂಗ್, ದೇಶದ ಶಕ್ತಿ ಅದರ ಏಕತೆಯಲ್ಲಿದೆ, ಅದರ ವಿಭಜನೆಗಳಲ್ಲಿ ಅಲ್ಲ ಎಂದು ಒತ್ತಿ ಹೇಳಿದರು.
“ಪರಸ್ಪರ ಭಾವನೆಗಳನ್ನು ಗೌರವಿಸಿ. ಯಾವುದೇ ಸಾಮಾಜಿಕ ವಿಭಜನೆ ಇರಬಾರದು, ಏಕೆಂದರೆ ನಮ್ಮನ್ನು ವಿಭಜಿಸುವ ಎಲ್ಲವೂ ಒಳ್ಳೆಯದಲ್ಲ. ನಮ್ಮ ರಕ್ತನಾಳಗಳಲ್ಲಿ ಒಂದೇ ರಕ್ತ ಹರಿಯುತ್ತದೆ ಮತ್ತು ನಾವೆಲ್ಲರೂ ಒಂದೇ ಭೂಮಿಗೆ ಸೇರಿದವರು. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು. ಆಗ ಮಾತ್ರ ನಮ್ಮ ದೇಶ ಪ್ರಗತಿ ಹೊಂದುತ್ತದೆ” ಎಂದಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸೇನೆಯನ್ನು 10% ಇರುವವರು ನಿಯಂತ್ರಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ಅವರ ಹೇಳಿಕೆಗೆ ಉತ್ತರವೆಂಬಂತೆ ವಾಯುಸೇನಾ ಮುಖ್ಯಸ್ಥರು ಮಾತನಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



