ಬೆಂಗಳೂರು: ರೈತರ ಸಮಸ್ಯೆಗಳು ಸೇರಿ ಯಾವ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರೂ ಸರಕಾರದಿಂದ ಸರಿಯಾದ ಮಾಹಿತಿಯ ಉತ್ತರ ಸಂಪೂರ್ಣವಾಗಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಡುಗೋಡಿಯಲ್ಲಿ ದಲಿತರ ಜಮೀನು ಕಸಿದುಕೊಳ್ಳುವ ವಿಷಯದಿಂದ ಪ್ರಾರಂಭವಾಗಿದೆ. ಕಾನೂನು- ಸುವ್ಯವಸ್ಥೆ, ರೈತರ ಸಮಸ್ಯೆಗಳು, ಒಳ ಮೀಸಲಾತಿ, ಕಾಲ್ತುಳಿತ ಸಾವು ವಿಷಯವನ್ನು ಪ್ರಸ್ತಾಪಿಸಿದ್ದೇವೆ. ನಿನ್ನೆವರೆಗೂ ಕಾಲ್ತುಳಿತ ದುರ್ಘಟನೆಯನ್ನು ಒಪ್ಪಲು ಸಿದ್ಧರಿಲ್ಲ ಎಂದು ಆರೋಪಿಸಿದರು.
ಕಾಲ್ತುಳಿತದಲ್ಲಿ 11 ಸಾವು ವಿಷಯದಲ್ಲಿ ನಮ್ಮಿಂದ ತಪ್ಪಾಗಿಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪೊಲೀಸರ ತಪ್ಪೆಂದಿದ್ದಾರೆ. ಉಪ ಮುಖ್ಯಮಂತ್ರಿಗಳು, ‘ಹೌದು ಅದರಲ್ಲಿ ಸ್ವಲ್ಪ ಅಚಾತುರ್ಯ ಆಗಿದೆ’ ಎನ್ನುತ್ತಾರೆ. ಇವರು ಮಾಡಿದ ತಪ್ಪಿಗೆ 11 ಜನರ ಬಲಿ ತೆಗೆದುಕೊಂಡರು ಎಂಬುದನ್ನು ನಾವು ಇವತ್ತಿಗೂ ಹೇಳಲೇಬೇಕಿದೆ ಎಂದರು. ಇದು ಕೇವಲ ಪೊಲೀಸರ ತಪ್ಪಲ್ಲ; ಇದು ಕಾಂಗ್ರೆಸ್ ಸರಕಾರದ- ಮುಖ್ಯಮಂತ್ರಿಗಳ ತಪ್ಪು ಎಂದು ಆರೋಪಿಸಿದರು.
ಒಳ ಮೀಸಲಾತಿ ವಿಷಯ ಬಹಳವಾಗಿ ಬಿಂಬಿತವಾಗಿತ್ತು. ಸದನ ನಡೆಯುವಾಗ ಯಾವುದೇ ಪ್ರಮುಖ ವಿಷಯಗಳನ್ನು ಈ ರೀತಿ ಮಾಡಬಾರದು ಎಂದಿದೆ. ಹಾಗೆ ಮಾಡುವುದಿದ್ದರೆ ಸದನದ ಒಳಗಡೆ ಚರ್ಚೆ ಮಾಡಬೇಕಿತ್ತು. ಆದರೆ, ಚರ್ಚೆ ಆಗಿಲ್ಲ. ಸಚಿವ ಸಂಪುಟದ ಒಂದು ವಿಶೇಷ ಸಭೆ ಕರೆದಿದ್ದರು. ಅಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಸದನದಲ್ಲಿ ಕೊಟ್ಟ ಹೇಳಿಕೆ ಅದರ ಹಿಂದಿನ ದಿನವೇ ಬಹಿರಂಗವಾಗಿತ್ತು. ಇವರಲ್ಲಿ ಗೌಪ್ಯತೆಯ ಕೊರತೆಯೂ ಇದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಹೇಳಿಕೆ ನೀಡುವಾಗ ಸ್ಪಷ್ಟನೆ ಕೊಡಬೇಕಿತ್ತು. ಸ್ಪಷ್ಟನೆ ಕೇಳುವುದು ನಮ್ಮ ಹಕ್ಕು. ಆದರೆ, ಉತ್ತರ ಕೊಟ್ಟಿಲ್ಲ; ಒಳ ಮೀಸಲಾತಿಯಲ್ಲಿ ಯಾರ್ಯಾರಿಗೆ ನ್ಯಾಯ ಕೊಟ್ಟಿರುವುದಾಗಿ ಬೆನ್ನು ತಟ್ಟಿಕೊಳ್ಳುತ್ತೀರೋ ಅವರೆಲ್ಲರೂ ಬೀದಿಯಲ್ಲಿದ್ದಾರೆ ಎಂದು ವಿವರಿಸಿದರು.
ಸರಕಾರವು 3 ಗುಂಪುಗಳಾಗಿ ಮಾಡಿದೆ. ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ವರದಿಯನ್ನು ನೀವು ಪರಿಗಣಿಸಿಲ್ಲ; ನೀವೇ ಮಾಡಿದ ನ್ಯಾ. ನಾಗಮೋಹನ್ದಾಸ್ ಆಯೋಗದ ವರದಿಯನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ; ಇಷ್ಟನ್ನೂ ನೀವು ತಿರಸ್ಕರಿಸಿ ನಿಮ್ಮ ಪಕ್ಷಕ್ಕೆ ಬೇಕಾದಂತೆ ನೀವು ಒಂದು ತೀರ್ಮಾನ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಇದು ಕೇವಲ ರಾಜಕೀಯ ತೀರ್ಮಾನ. ಇದು ಮತಬ್ಯಾಂಕಿನ ತೀರ್ಮಾನ. ಜನರು ಬೀದಿಗೆ ಇಳಿದಿದ್ದರು. ಸಮಯ ತೆಗೆದುಕೊಳ್ಳಲು ನಿಮಗೆ ಅವಕಾಶವೇ ಇರಲಿಲ್ಲ; ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನೀವು ನಿರ್ಧಾರ ಮಾಡಿದ್ದೀರಿ ಎಂದು ಟೀಕಿಸಿದರು. ನ್ಯಾ. ನಾಗಮೋಹನ್ದಾಸ್ ಆಯೋಗದ ವರದಿಯಲ್ಲಿ 5 ಗುಂಪುಗಳಾಗಿ ಮಾಡಿದ್ದರು. 115 ಕೋಟಿ ರೂ. ಖರ್ಚು ಮಾಡಿದ್ದೀರಿ. ಹಿಂದೆ ನ್ಯಾ. ಸದಾಶಿವ ಆಯೋಗಕ್ಕೂ ಹಣ ಖರ್ಚಾಗಿದೆ. ಇದು ವ್ಯರ್ಥ ಆಗಿಲ್ಲವೇ? ಇಷ್ಟೆಲ್ಲ ಕಸರತ್ತು ಮಾಡಿ, ಒಂದು ವರ್ಷಕ್ಕೂ ಹೆಚ್ಚು ಸಮಯ ದಬ್ಬಿ, ಒಂದೇ ದಿನಕ್ಕೆ ನೀವು ತೀರ್ಮಾನ ಮಾಡಲು ಸಾಧ್ಯ ಆಗುವುದಿದ್ದರೆ ನಿಮಗೆ ಒಳ ಮೀಸಲಾತಿ ಕೊಡುವ ಮಾನಸಿಕತೆ ಇರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
59 ಜಾತಿಯವರು ಇವತ್ತು ಬೀದಿಯಲ್ಲಿ ನಿಂತಿದ್ದಾರೆ. ಅವರೆಲ್ಲರೂ ಸಣ್ಣಪುಟ್ಟ ಜಾತಿಗಳು. ಅವರಿಗೆ ನಾಯಕತ್ವ ಇಲ್ಲ; ವ್ಯವಸ್ಥೆ ಇಲ್ಲ. ಕೆಲವರಿಗೆ 6, ಮತ್ತೊಬ್ಬರಿಗೆ 6, 5 ಕೊಟ್ಟಿದ್ದೀರಿ. ಸಂತೋಷ ಅದು ಬೇರೆ ವಿಷಯ. ಈ 3 ಗುಂಪುಗಳು ನಮಗೆ ನ್ಯಾಯ ಸಿಕ್ಕಿದೆ ಎನ್ನುವುದಾದರೆ ಇದು ಡಾ.ಬಾಬಾಸಾಹೇಬ ಅಂಬೇಡ್ಕರರಿಗೆ ಮಾಡುವ ಮೋಸ. ಸರಕಾರವಂತೂ ಮೋಸ, ವಂಚನೆ ಮಾಡುತ್ತಲೇ ಬರುತ್ತಿದೆ ಎಂದು ಹೇಳಿದರು.
ಬಾಬಾಸಾಹೇಬ ಅಂಬೇಡ್ಕರರು 101 ಜಾತಿಗಳಿಗೂ ನ್ಯಾಯ ಕೊಡಬೇಕೆಂದು ಹೋರಾಟ ಮಾಡಿದ್ದರು. 59 ಜಾತಿಗಳನ್ನು ನೀವು ಎಲ್ಲಿ ಸೇರಿಸಿದ್ದೀರಿ? ಅವರು ಯಾರ ಜೊತೆ ಇರಬೇಕು? ಅವರು ಯಾವ ರೀತಿ ಸವಲತ್ತು ಪಡೆಯಬೇಕು? ನೀವು ಏನೂ ಮಾಡಿಲ್ಲ; ಏನೂ ಹೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೀದಿಯಲ್ಲಿರುವ ಅವರಿಗೆ ಯಾರು ನ್ಯಾಯ ಕೊಡಿಸಬೇಕು ಎಂದು ಕೇಳಿದರು.
ಅಲೆಮಾರಿ ಸಮುದಾಯ, ಸಣ್ಣಪುಟ್ಟ ಸಮುದಾಯಗಳನ್ನು ಅವರ ಮೂಲಜಾತಿ ಗಮನಿಸಿ ಸೇರಿಸಬೇಕಿತ್ತು. ಅದನ್ನು ಸರಕಾರ ಮಾಡಿಲ್ಲ ಎಂದು ತಿಳಿಸಿದರು. ಕುಲಶಾಸ್ತ್ರ ಅಧ್ಯಯನ ಮಾಡಿದ್ದರೆ ಯಾರ್ಯಾರು ಯಾವ ಮೂಲ ಜಾತಿ ಎಂದು ಸರಕಾರಕ್ಕೆ ಮಾಹಿತಿ ಸಿಗುತ್ತಿತ್ತು. ಸರಕಾರಕ್ಕೆ ಬಲ ಯಾರು? ಎಡ ಯಾರು? ಸ್ಪøಶ್ಯರಲ್ಲಿ ಯಾರ್ಯಾರು ಬರುತ್ತಾರೆ ಎಂಬುದೇ ಗೊತ್ತಿಲ್ಲ ಎಂದು ದೂರಿದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.