ಬೆಂಗಳೂರು: ಆರೋಗ್ಯ ಕೊಡಿ ಎಂದು ಆಸ್ಪತ್ರೆಗೆ ಬಂದರೆ ಇವರು ಜೀವ ತೆಗೆಯುವ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ರಾಜಕೀಯ ಪ್ರೇರಿತವಾಗಿ, ನೈತಿಕತೆ ಇಲ್ಲದೆ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ.
ಇಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಿಗಳನ್ನು ಉಚಿತವಾಗಿ ಒದಗಿಸಲು ಸರಕಾರದಿಂದ ಆಗುತ್ತಿಲ್ಲ; ಉಚಿತ ಔಷಧಿ ನೀಡದೆ ಐವಿ ಫ್ಲೂಯಿಡ್ ಕೊಟ್ಟು ಬಾಣಂತಿಯರನ್ನು ಕೊಂದ ಕೀರ್ತಿ ಪಡೆದ ಸರಕಾರ ರಾಜ್ಯದಲ್ಲಿದೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಜೀ ಅವರ ಯೋಜನೆಯಡಿ ಜನೌಷಧಿ ಕೇಂದ್ರಗಳಲ್ಲಿ ಶೇ 80ರಷ್ಟು ಕಡಿಮೆ ದರದಲ್ಲಿ ಔಷಧಿ ಸಿಗುತ್ತಿತ್ತು ಎಂದು ಅವರು ನುಡಿದರು.
ಸರಕಾರಿ ಆಸ್ಪತ್ರೆಗಳಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿರುವ ಸರಕಾರವು ಜನವಿರೋಧಿ ಮತ್ತು ಆರೋಗ್ಯ ವ್ಯವಸ್ಥೆಗೆ ವಿರೋಧಿ ಎಂದು ಟೀಕಿಸಿದರು. ಇದನ್ನು ಖಂಡಿಸಿ ಇಂದು ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸರಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಆರೋಗ್ಯ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಕಳಪೆ ಔಷಧಿ, ನಕಲಿ ಔಷಧಿ ಕುರಿತು ತಿಳಿಸಿದರೆ ನಾನೇನೂ ಮಾಡಲಾಗದು ಎನ್ನುತ್ತಾರೆ ಎಂದು ದೂರಿದರು. ಔಷಧಿ, ಮಾತ್ರೆ ಇಲ್ಲ ಎಂದರೆ ನಾನೇನೂ ಮಾಡಲಾಗದು ಎನ್ನುತ್ತಾರೆ; ಈ ಥರ ಏನೂ ಮಾಡಲಾಗದೆ ಇದ್ದರೆ ಯಾಕೆ ಆರೋಗ್ಯ ಸಚಿವರಾಗಿದ್ದೀರಿ ಎಂದು ಕೇಳಿದರು.
ಆರೋಗ್ಯ ಸಚಿವರಿಗೆ ಮತ್ತು ಈ ಕೊಲೆಗಡುಕ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಮೌನಿಯಾಗಿದ್ದಾರೆ. ಸಾವುಗಳಿಗೆ ಉತ್ತರ ಕೊಡದ ಸರಕಾರವು ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ; ಔಷಧಿ, ವ್ಯವಸ್ಥೆಗಳೂ ಇಲ್ಲ ಎಂದು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.