ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ನಾಯಕ ಭಬೇಶ್ ಚಂದ್ರ ರಾಯ್ ಅವರ ಅಪಹರಣ ಮತ್ತು ಕ್ರೂರ ಹತ್ಯೆಯನ್ನು ಭಾರತ ಶನಿವಾರ ತೀವ್ರವಾಗಿ ಖಂಡಿಸಿದೆ. ಬಾಂಗ್ಲಾದೇಶದಲ್ಲಿ ಪ್ರಸ್ತುತ ಮಧ್ಯಂತರ ಸರ್ಕಾರದ ಅಡಿಯಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ “ವ್ಯವಸ್ಥಿತ ಕಿರುಕುಳ”ದ ಭಾಗವಾಗಿ ಈ ಘಟನೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಹಿಂದಿನ ದಾಳಿಗಳಿಗೆ ಕಾರಣರಾದವರು ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದ ಅವರು, ಸರ್ಕಾರವು ನೆಪ ಹೇಳುವುದನ್ನು ನಿಲ್ಲಿಸಿ ಹಿಂದೂಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
“ಈ ಹತ್ಯೆ ತೀವ್ರ ದುಃಖಕರವಾಗಿದೆ” ಎಂದು ಜೈಸ್ವಾಲ್ ಎಕ್ಸ್ನಲ್ಲಿ ಬರೆದು, ಬಾಂಗ್ಲಾದೇಶ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಮತ್ತು ಕ್ರಮ ಕೈಗೊಳ್ಳಲು ಕರೆ ನೀಡಿದರು.
ನೆರೆಯ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಭಾರತವು ಈ ಹಿಂದೆಯೂ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ.
ಹಿಂದೂ ಸಮುದಾಯದ ನಾಯಕ ಭಬೇಶ್ ಚಂದ್ರ ರಾಯ್ ಅವರನ್ನು ಉತ್ತರ ಬಾಂಗ್ಲಾದೇಶದ ದಿನಾಜ್ಪುರ ಜಿಲ್ಲೆಯ ಅವರ ಮನೆಯಿಂದ ಅಪಹರಿಸಲಾಗಿತ್ತು. ಅವರ ಮೃತದೇಹ ಗುರುವಾರ ರಾತ್ರಿ ಢಾಕಾದ ವಾಯುವ್ಯಕ್ಕೆ 330 ಕಿಲೋಮೀಟರ್ ದೂರದಲ್ಲಿರುವ ಬಸುದೇಬ್ಪುರ ಗ್ರಾಮದಲ್ಲಿ ಪತ್ತೆಯಾಗಿದೆ.
ಕುಟುಂಬ ಮೂಲಗಳು ಮತ್ತು ಸ್ಥಳೀಯ ಪೊಲೀಸರ ವರದಿಗಳ ಪ್ರಕಾರ, ಗುರುವಾರ ಸಂಜೆ 4:30 ರ ಸುಮಾರಿಗೆ ರಾಯ್ ಅವರ ಮನೆಯಲ್ಲಿ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ದಾಳಿಕೋರರು ಕರೆ ಮಾಡಿದ್ದರು ಎಂದು ಅವರ ಪತ್ನಿ ಶಾಂತನಾ ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ, ಎರಡು ಮೋಟಾರ್ ಸೈಕಲ್ಗಳಲ್ಲಿ ಬಂದ ನಾಲ್ವರು ಪುರುಷರು ರಾಯ್ ಅವರನ್ನು ಅಪಹರಿಸಿದರು. ಅವರನ್ನು ನರಬರಿ ಗ್ರಾಮಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ತೀವ್ರವಾಗಿ ಥಳಿಸಲಾಯಿತು. ಮನೆಗೆ ಹಿಂದಿರುಗಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕುಟುಂಬಸ್ಥರು ತಕ್ಷಣವೇ ದಿನಾಜ್ಪುರದ ಆಸ್ಪತ್ರೆಗೆ ಅವರನ್ನು ಕರೆದೊಯ್ದರು, ಆದರೆ ವೈದ್ಯಕೀಯ ಸಿಬ್ಬಂದಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.