ನವದೆಹಲಿ: ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರ ಮೇಲ್ಛಾವಣಿ ಕುಸಿತದ ಘಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ವಿಮಾನಯಾನ ಸಚಿವಾಲಯವು, ದೇಶಾದ್ಯಂತ ಇರುವ ಎಲ್ಲಾ ವಿಮಾನನಿಲ್ದಾಣದ ಕಟ್ಟಡಗಳ ರಚನಾತ್ಮಕ ಪರಿಶೀಲನೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಮಾಹಿತಿ ನೀಡಿದ್ದು, 2-5 ದಿನಗಳಲ್ಲಿ ಸಚಿವಾಲಯವು ಎಲ್ಲಾ ವಿಮಾನ ನಿಲ್ದಾಣಗಳಿಂದ ವರದಿಯನ್ನು ಕೇಳಿದೆ, ಭವಿಷ್ಯದಲ್ಲಿ ಇಂತಹ ಕುಸಿತದ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
“ಇಂತಹ ಘಟನೆಗಳು ಪುನರಾವರ್ತನೆಯಾಗುವುದನ್ನು ನಾವು ಬಯಸುವುದಿಲ್ಲವಾದ್ದರಿಂದ, ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ರಚನಾತ್ಮಕ ಪ್ರಾಥಮಿಕ ತಪಾಸಣೆ ಮಾಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಾವು 2-5 ದಿನಗಳಲ್ಲಿ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಿಂದ ವರದಿಯನ್ನು ಕೇಳಿದ್ದೇವೆ, ಅದರ ನಂತರ ನಾವು ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ” ಎಂದು ನಾಯ್ಡು ಹೇಳಿದ್ದಾರೆ.
“ಸದ್ಯಕ್ಕೆ, ಟರ್ಮಿನಲ್-1 ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಎಲ್ಲಾ ವಿಮಾನ ಚಲನೆಗಳನ್ನು ಟರ್ಮಿನಲ್ 2 ಮತ್ತು ಟರ್ಮಿನಲ್ 3 ಗೆ ವರ್ಗಾಯಿಸಲಾಗಿದೆ. ವಿಮಾನಗಳು ರದ್ದುಗೊಂಡಿರುವ ಕಾರಣ ಟಿಕೆಟ್ ಬುಕ್ ಮಾಡಿದವರಿಗೆ ಮರುಪಾವತಿ ಅಥವಾ ಪರ್ಯಾಯ ವಿಮಾನವನ್ನು ನೀಡಲಾಗುತ್ತಿದೆ. ಏಳು ದಿನಗಳಲ್ಲಿ ಜನರಿಗೆ ಮರುಪಾವತಿಯನ್ನು ಒದಗಿಸಲು ಸುತ್ತೋಲೆಯನ್ನು ಹೊರಡಿಸಲು ವಿಮಾನಯಾನ ಸಚಿವಾಲಯ ನಿರ್ಧರಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.