ಬೆಂಗಳೂರು: ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷಾ ಉಡಾವಣೆಗಳ ಪೈಕಿ ಮೊದಲ ಮಾನವರಹಿತ ಪರೀಕ್ಷಾ ವಾಹನದ ಉಡಾವಣೆ ಅ. 21 ರಂದು ಶ್ರೀ ಹರಿಕೋಟಾದಿಂದ ನಡೆಯಲಿದೆ.
ಇದಕ್ಕೂ ಮುನ್ನ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾಕ್ಟರ್ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು. ಇಸ್ರೋ ಅಧ್ಯಕ್ಷ, ಎಸ್. ಸೋಮನಾಥ್ ಅವರು ಗಗನಯಾನ ಮಿಷನ್ನ ಪ್ರಗತಿಯ ಬಗ್ಗೆ ವಿವರಿಸಿದರು.
ಗಗನಯಾನ ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತಿರುವ ಈ ಪರಿಕ್ಷಾರ್ಥ ಉಡಾವಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಪರೀಕ್ಷೆಯಲ್ಲಿ ಗಗನಯಾನಿ ಪಾರಾಗುವ ವ್ಯವಸ್ಥೆಯ ಪ್ರಾತ್ಯಕ್ಷಿಕೆಯೂ ಇರಲಿದ್ದು, 21 ರ ಬೆಳಿಗ್ಗೆ 7 ರಿಂದ 9 ಗಂಟೆಯ ಒಳಗೆ ಈ ಉಡಾವಣೆ ನಡೆಯಲಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗುವ ಕ್ರೂ ಮಾಡ್ಯೂಲ್ ಬಂಗಾಳಕೊಲ್ಲಿಗೆ ಬಂದು ಇಳಿಯಲಿದ್ದು, ಬಳಿಕ ವಶಕ್ಕೆ ಪಡೆಯಲಾಗುತ್ತದೆ.
ಮುಂದಿನ ವರ್ಷದ ಕೊನೆಯ ವೇಳೆಗೆ ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶ ನೌಕೆ ಹೊತ್ತೊಯ್ಯಲಿದ್ದು, ಗಗನಯಾನಿಗಳನ್ನು ಭೂಮಿಯ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸಿ ವಾಪಸ್ ಭೂಮಿಗೆ ಸುರಕ್ಷಿವಾಗಿ ಕರೆತರಲು ಯೋಜನೆ ರೂಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.