ಲಕ್ನೋ: ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಯಮರಾಜ ಕಾಯುತ್ತಿದ್ದಾನೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಅಲ್ಲಿನ ಅಂಬೇಡ್ಕರ್ ನಗರದಲ್ಲಿ ಮೂವರು ಕಿಡಿಗೇಡಿಗಳು ಸೈಕ್ಲ್ನಲ್ಲಿ ತೆರಳುತ್ತಿದ್ದ ಬಾಲಕಿಯ ದುಪ್ಪಟ್ಟಾ ಎಳೆದು ನೆಲಕ್ಕೆ ಕೆಡವಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇದನ್ನು ಉಲ್ಲೇಖಿಸಿ ಯೋಗಿ ಖಡಕ್ ಸಂದೇಶ ರವಾನಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಯಮ ಕಾದು ಕುಳಿತಿದ್ದಾನೆ ಎಂದು ಎಚ್ಚರಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಲವಾದ ಕಾನೂನಿನ ಅಗತ್ಯವಿದೆ. ಮಹಿಳೆಯರಿಗೆ ತೊಂದರೆ ಕೊಡುವ ಯಾರೇ ಆದರೂ ಅಂತವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಯೋಗಿ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಅಲ್ಲಿ ಕೆಲವೊಂದು ಅಹಿತಕರ ಘಟನೆಗಳು ವರದಿಯಾಗುತ್ತಿರುವುದು ವಿಷಾದನೀಯ.
ಸಿಸಿಟಿವಿ ದೃಶ್ಯಗಳ ಪ್ರಕಾರ, 11 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸಂತ್ರಸ್ತೆ ಮತ್ತು ಇನ್ನಿಬ್ಬರು ಹುಡುಗಿಯರು ತಮ್ಮ ಸೈಕಲ್ನಲ್ಲಿ ಸಂಚರಿಸುತ್ತಿದ್ದಾಗ ವೇಗವಾಗಿ ಬಂದ ಬೈಕಿನಲ್ಲಿದ್ದ ಧುರುಳರು ಮುಂದೆ ಸೈಕಲ್ನಲ್ಲಿದ್ದ ಬಾಲಕಿಯ ಶಾಲು ಎಳೆದಿದ್ದಾರೆ. ಇದರಿಂದ ಆಕೆ ಕೆಳಗೆ ಬಿದ್ದಿದ್ದಾಳೆ. ಆಕೆಯ ಮೇಲೆ ಮತ್ತೊಂದು ಬೈಕ್ ಹರಿದು ಹೋದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯ ಬಳಿಕ ಮೂವರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಬೇಡ್ಕರ್ ನಗರ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಸಿನ್ಹಾ ಮಾತನಾಡಿ, ಮೂವರು ಆರೋಪಿಗಳು ವಾಹನದಿಂದ ಜಿಗಿದು ಪೊಲೀಸರ ರೈಫಲ್ ಕಸಿದುಕೊಂಡು ನಮ್ಮ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಇಬ್ಬರಿಗೆ ಗುಂಡು ತಗುಲಿದೆ ಮತ್ತು ಒಬ್ಬನ ಕಾಲು ಮುರಿದಿದೆ, ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ದುಪಟ್ಟಾ ಎಳೆದ ಆರೋಪಿಗಳನ್ನು ಶಹವಾಜ್ ಮತ್ತು ಆತನ ಸಹೋದರ ಅರ್ಬಾಜ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿ ಫೈಸಲ್ ಎಂಬಾತನ ಬೈಕು ಬಾಲಕಿಯ ಮೇಲೆ ಹರಿದು ಹೋಗಿದೆ. ಆರೋಪಿಗಳಿಗೂ ಈತನಿಗೂ ಸಂಬಂಧವಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ ಎಂದಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೊಲೆ ಮತ್ತು ಮಹಿಳಾ ದೌರ್ಜನ್ಯ ಎಸಗಿದ್ದಕ್ಕಾಗಿ ಮತ್ತು ಲೈಂಗಿಕ ಅಪರಾಧಗಳಿಗಾಗಿ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.