ಉಡುಪಿ: ಹಿಂದೂ ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂಗೆ ಹೋಲಿಸಿ ಇದನ್ನು ಬೇರು ಸಮೇತ ನಿರ್ಮೂಲನೆ ಮಾಡಬೇಕು ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ಖಂಡಿಸುವುದಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಹೇಳಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ಎಲ್ಲರನ್ನೂ, ಎಲ್ಲಾ ಧರ್ಮವನ್ನು ಸಮಾನತೆಯಿಂದ ನೋಡುವ ಪ್ರಮಾಣವನ್ನು ಮಾಡಿ ಈಗ ತನ್ನ ಮಗ ರಾಜ್ಯದ ಸಚಿವ ಒಂದು ಧರ್ಮದ ಬಗ್ಗೆ ಇಂತಹ ಹೇಳಿಕೆಯನ್ನು ನೀಡಬೇಕಾದರೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಯಾವ ನಿಲುವು ತಳೆದಿದ್ದಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಮಾಜದಲ್ಲಿ ಇಂತಹ ವಿಷ ಬೀಜ ಬಿತ್ತುವುದು ಸರಿಯೇ? ಒಂದು ವರ್ಗದ ಓಲೈಕೆಗಾಗಿ ಪವಿತ್ರ ಹಿಂದೂ ಧರ್ಮವನ್ನು ಕೊನೆಗಾನಿಸುವ ಮಾತು ಎಷ್ಟು ಸರಿ? ಸನಾತನ ಹಿಂದೂ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಅವರ ಮನೋಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಆರಂಭಗೊಂಡ (I. N. D. I. A) ಇಂ.ಡಿ.ಯಾ. ಮೈತ್ರಿಕೂಟವು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ, ವಿಭಜಿಸುವ ಹುನ್ನಾರ ನಡೆಸಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು. ಸನಾತನ ಹಿಂದೂ ಧರ್ಮದ ನಾಶವನ್ನು ಬಯಸುವವರು ಸ್ವತಃ ಅವರೇ ನಾಶಗೊಳ್ಳುತ್ತಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಹಲವಾರು ವರ್ಷಗಳಿಂದ ಸನಾತನ ಹಿಂದೂ ಧರ್ಮದ ಮೇಲೆ ನಿರಂತರವಾಗಿ ದಾಳಿಗಳು ನಡೆದರು, ಸವಾಲುಗಳು ಎದುರಾದರು ನಮ್ಮ ಸನಾತನ ಹಿಂದೂ ಧರ್ಮ ಇಂದಿಗೂ ಎಂದೆಂದಿಗೂ ಬಲಿಷ್ಠವಾಗಿದೆ. ಕರ್ನಾಟಕ ಸರ್ಕಾರವು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಈ ಹೇಳಿಕೆ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯ ಅದಮಾರು ಮಠದ ಕೃಷ್ಣ ಸೇವಾ ಬಳಗದ ಕಾರ್ಯಾಧ್ಯಕ್ಷನಾಗಿ ಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರು, ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆಯ ದೃಷ್ಟಿಯಿಂದ ಧರ್ಮವನ್ನು ಅವಮಾನಿಸುವವರ ವಿರುದ್ಧ ತೀವ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.