ನವದೆಹಲಿ: ಪ್ರಜಾಪ್ರಭುತ್ವದ ನೂತನ ದೇಗುಲ ‘ಸಂಸತ್ ಭವನ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದರು. ಇಂದು ಬೆಳಗ್ಗೆ 7.15 ಕ್ಕೆ ಸಾಂಪ್ರದಾಯಿಕ ಬಿಳಿ ಉಡುಗೆಯಲ್ಲಿ ಮೋದಿ ಗೇಟ್ ನಂ.1 ರಿಂದ ಸಂಸತ್ ಆವರಣಕ್ಕೆ ಆಗಮಿಸಿದರು. ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.
ಮಹಾತ್ಮ ಗಾಂಧಿ ಪ್ರತಿಮೆ ಪಕ್ಕದಲ್ಲಿ ಆಯೋಜಿಸಿದ್ದ ಪೂಜಾ ವಿಧಾನಗಳಲ್ಲಿ ಇಬ್ಬರೂ ಭಾಗಿಯಾದರು. ಕರ್ನಾಟಕದ ಶೃಂಗೇರಿ ಮಠದ ಪುರೋಹಿತರು ವೇದ ಘೋಷಗಳನ್ನು ಪಠಿಸಿದರು. ಗಣಪತಿ ಹೋಮ ನೆರವೇರಿಸಲಾಯಿತು. ನಂತರ ಸೆಂಗೋಲ್ ಪ್ರತಿಷ್ಠಾಪಿಸಲಾಯಿತು. ಜ್ಯೋತಿಯನ್ನ ಬೆಳಗಿಸುವ ಮೂಲಕ ನೂತನ ಸಂಸತ್ ಭವನದ ಉದ್ಘಾಟನೆಗೆ ಅಧಿಕೃತ ಚಾಲನೆ ನೀಡಿದರು. ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ಕೆಲ ಕಾರ್ಮಿಕರಿಗೆ ಗೌರವ ಸಲ್ಲಿಸಿದರು. ಶಾಲು ಮತ್ತು ಸ್ಮರಣಿಗೆ ನೀಡಿ ಅವರನ್ನು ಸನ್ಮಾನಿಸಿದರು.
ಬಳಿಕ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಗುರುತಿಸಲು ಫಲಕ ಅನಾವರಣಗೊಳಿಸಿದರು. ಇದಾದ ಬಳಿಕ ಸಂಸತ್ನ ಲಾಬಿಯಲ್ಲಿ ಏರ್ಪಡಿಸಲಾಗಿದ್ದ ಸರ್ವಧರ್ಮ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು.
ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಪ್ರಧಾನಿ ಮೋದಿ ಅವರು, ಇಂದು ನಮಗೆಲ್ಲ ದೇಶವಾಸಿಗಳಿಗೆ ಮರೆಯಲಾಗದ ದಿನ ಎಂದು ಟ್ವೀಟ್ ಮಾಡಿದ್ದಾರೆ. ಸಂಸತ್ತಿನ ಹೊಸ ಕಟ್ಟಡವು ನಮ್ಮೆಲ್ಲರ ಹೆಮ್ಮೆ ಮತ್ತು ಭರವಸೆಯನ್ನು ತುಂಬಲಿದೆ. ಈ ದೈವಿಕ ಮತ್ತು ಭವ್ಯವಾದ ಕಟ್ಟಡವು ಜನರ ಸಬಲೀಕರಣದ ಜೊತೆಗೆ ರಾಷ್ಟ್ರದ ಸಮೃದ್ಧಿ ಮತ್ತು ಶಕ್ತಿಗೆ ಹೊಸ ವೇಗ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ ಎಂದರು. ಇಂದು ನಡೆದ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡ ಅವರು, ‘ಭಾರತದ ಸಂಸತ್ತಿನ ನೂತನ ಕಟ್ಟಡ ಉದ್ಘಾಟನೆಯಾಗುತ್ತಿದ್ದಂತೆ ನಮ್ಮ ಹೃದಯ ಮತ್ತು ಮನಸ್ಸು ಹೆಮ್ಮೆ,ಭರವಸೆಯಿಂದ ತುಂಬಿದೆ, ಈ ಐಕಾನಿಕ್ ಕಟ್ಟಡವು ಸಬಲೀಕರಣದ ತೊಟ್ಟಿಲಾಗಲಿ, ಕನಸುಗಳನ್ನು ಬೆಳಗಿಸಲಿ, ಇದು ನಮ್ಮ ಮಹಾನ್ ರಾಷ್ಟ್ರವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.