ಬೆಂಗಳೂರು: ಕಾಂಗ್ರೆಸ್ ಸರಕಾರದಲ್ಲಿ ಯಾರೂ ಸಹ ಸರಕಾರವನ್ನು ಟೀಕಿಸುವ ಹಾಗಿಲ್ಲ ಎಂಬಂಥ ಪರಿಸ್ಥಿತಿ ಇದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ್ ಅವರು ಹೇಳಿದ್ದಾರೆ.
ವಿಧಾನಸೌಧದ ಮೊಗಸಾಲೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಯಾರೂ ಸಹ ಸರಕಾರ ಟೀಕಿಸುವ ಹಾಗಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಇಲ್ಲ ಎಂಬಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇವತ್ತು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸರಕಾರಿ ಶಾಲೆಯ ಒಬ್ಬ ಶಿಕ್ಷಕ ರಾಜ್ಯದಲ್ಲಿ ಯಾವ್ಯಾವ ಮುಖ್ಯಮಂತ್ರಿ ಅವಧಿಯಲ್ಲಿ ಎಷ್ಟು ಸಾಲ ಮಾಡಿದ್ದಾರೆ ಎಂಬ ವಿವರವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಮಾಡಿದ್ದ ಸಾಲ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತಿತರ ಸಿಎಂಗಳ ಅವಧಿಯ ಸಾಲದ ವಿವರ ನೀಡಿದ್ದಾರೆ. ಇದನ್ನು ಬಿಇಒ ಜಯಪ್ಪರ ಗಮನಕ್ಕೆ ತಂದ ಸರಕಾರವು ಶಿಕ್ಷಕ ಶಾಂತಮೂರ್ತಿಯವರನ್ನು ಅಮಾನತು ಮಾಡಿಸಿದೆ ಎಂದು ಟೀಕಿಸಿದರು.
ಈ ಹಿಂದೆ ಮನೆಯಲ್ಲಿ ವಿದ್ಯುತ್ ಇಲ್ಲ ಎಂದು ಹೇಳಿದ್ದ ಸುಳ್ಯದ ಗ್ರಾಹಕರೊಬ್ಬರ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿ ಅವರನ್ನು ಒಳಗಡೆ ಹಾಕಿಸಿದ್ದರು. ಅಂದಿನ ವಿದ್ಯುತ್ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಇದು ಆಗಿತ್ತು ಎಂದು ಆಕ್ಷೇಪಿಸಿದರು.
ಹಿಂದೆ ಶ್ರೀಮತಿ ಇಂದಿರಾ ಗಾಂಧಿಯವರ ಆಡಳಿತದಲ್ಲೂ ಪತ್ರಿಕೆಯವರು ಸೇರಿ ಎಲ್ಲರ ಮೇಲೆ ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆದಿದ್ದವು. ಇದು ಸರಿ ಇಲ್ಲ. ಈ ಪ್ರವೃತ್ತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದರು.
ಪ್ರಮಾಣವಚನ ಸ್ವೀಕಾರದ ಬಳಿಕ ಗ್ಯಾರಂಟಿಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ ಅನುಷ್ಠಾನಕ್ಕೆ ತರುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ತಿಳಿಸಿದ್ದೀರಿ. ಕೇಂದ್ರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಒಂದು ಕೆಜಿ ಅಕ್ಕಿ ಸೇರಿಸಿ 6 ಕೆಜಿ ಕೊಡುತ್ತಿದ್ದರು. 6 ಕೆಜಿ ಜೊತೆ ನಿಮ್ಮ 10 ಕೆಜಿ ಸೇರಿಸಿ 16 ಕೆಜಿ ಕೊಡುತ್ತೀರಾ ಅಥವಾ ಮೋದಿಯವರ 5 ಕೆಜಿಗೆ 5 ಕೆಜಿ ಸೇರಿಸಿ 10 ಕೆಜಿ ಕೊಡುತ್ತೀರಾ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಕೇಂದ್ರದ 5 ಕೆಜಿಗೆ 5 ಕೆಜಿ ಸೇರಿಸಿದರೆ ನಿಮ್ಮದು 5 ಕೆಜಿ ಆಗಲಿದೆ. 10 ಕೆಜಿ ಆಗುವುದಿಲ್ಲ. ಮಾತು ಕೊಟ್ಟಂತೆ ನಡೆಯುವುದಾದರೆ 15 ಕೆಜಿ ಕೊಡಬೇಕು. ಈ ಕುರಿತು ಬಿಜೆಪಿ ನಿಮ್ಮಿಂದ ತಕ್ಷಣ ಸ್ಪಷ್ಟನೆ ಬಯಸುತ್ತದೆ ಎಂದು ತಿಳಿಸಿದರು. ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಅವರು ತಿಳಿಸಿದರು.
ಈ ಬಾರಿ ಮಾವು ಫಸಲು ಕಡಿಮೆ ಇತ್ತು. ಆಲಿಕಲ್ಲು ಮಳೆ ಮತ್ತು ಅಕಾಲಿಕ ಮಳೆಯಿಂದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅಪಾರ ನಷ್ಟವಾಗಿದೆ. ಕಂಪೆನಿಗಳು ಪ್ರತಿ ಟನ್ಗೆ 45 ಸಾವಿರದಿಂದ 55 ಸಾವಿರ ಬೆಲೆ ನೀಡಿ ಖರೀದಿ ಮಾಡುತ್ತಿದ್ದವು ಎಂದ ಅವರು, ಸರಕಾರ ಎಚ್ಚತ್ತುಕೊಂಡು ಅಧಿಕಾರಿಗಳಿಂದ ಪರಿಶೀಲನೆ ಮಾಡಿಸಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.