ಬೆಂಗಳೂರು: ಭಾರತೀಯ ಜನತಾ ಪಕ್ಷದ ಪೂರ್ಣ ಬಹುಮತದ ಸರಕಾರ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಮತ್ತು ಬಿ.ಎಸ್.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವಗಳ ಸರಕಾರಗಳು ಅನುಷ್ಠಾನ ಮಾಡಿದ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯದ ಜನತೆಗೆ ಸಂಪೂರ್ಣ ಮೆಚ್ಚುಗೆಯಿದೆ. ಇದರಿಂದ ಜನಮತ ಬಿಜೆಪಿಗೆ ಸಿಗಲಿದೆ ಎಂದು ತಿಳಿಸಿದರು.
ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ದರ್ಶನ ಮಾಡಿದ್ದೇನೆ. ಒಂದು ವರ್ಷದಿಂದ ಬಿಜೆಪಿಯ ಚುನಾವಣೆ ತಯಾರಿ ನಡೆದಿತ್ತು. ಪೇಜ್ ಪ್ರಮುಖರ ಸಮಾವೇಶದಿಂದ ತೊಡಗಿ, ಸಂಕಲ್ಪ ಯಾತ್ರೆ, ಬೂತ್ ವಿಜಯ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಮಡಿದ್ದೇವೆ. ಪ್ರಧಾನಿ ಮೋದಿ ಅವರು ಚುನಾವಣೆ ಘೋಷಣೆಗೆ ಮೊದಲು 16 ಬಾರಿ, ಚುನಾವಣೆ ಘೋಷಣೆ ಆದ ನಂತರ 20 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿಯ ಬಹುಮತದ ಸರಕಾರ ನಿರ್ಮಾಣ ಆಗುತ್ತದೆ ಎಂದು ನಳಿನ್ ಭರವಸೆ ವ್ಯಕ್ತಪಡಿಸಿದರು.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂತಹ ಕಾಂಗ್ರೆಸ್ಸನ್ನು ರಾಜ್ಯದ ಜನತೆ ತಿರಸ್ಕರಿಸುತ್ತಾರೆ. ವರಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಖಚಿತ. ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಸೋಲುವುದು ಖಚಿತ. ಹಾಗಿದ್ದರೂ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ನಲ್ಲಿ ಒಳ ಜಗಳ ನಡೆದಿದೆ. ಯಾರನ್ನು ಯಾರು ಸೋಲಿಸುವುದು ಅಂತ ಅವರವರೇ ಕಾಯುತ್ತಿದ್ದಾರೆ. ಕಳೆದ ಬಾರಿ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಗುಂಪುಗಳೇ ಈ ಬಾರಿಯೂ ಕಾರ್ಯ ಪ್ರವೃತ್ತವಾಗಿವೆ ಎಂದು ನಳಿನ್ಕುಮಾರ್ ಕಟೀಲ್ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬಜರಂಗ ದಳ ನಿಷೇಧದ ದ್ವೇಷದ ರಾಜಕಾರಣ, ಸುಳ್ಳು ಭರವಸೆ, ಗ್ಯಾರಂಟಿ ಕಾರ್ಡ್ಗಳು- ಇವೆಲ್ಲ ಕಾಂಗ್ರೆಸ್ ಭವಿಷ್ಯ ಏನು ಎಂಬುದನ್ನು ಈಗಾಗಲೇ ಜನತೆ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ರಾಜಸ್ಥಾನ, ಹಿಮಾಚಲದಲ್ಲಿ ಯಾಕೆ ಜಾರಿಯಾಗಿಲ್ಲ? 60 ವರ್ಷಗಳ ಸುದೀರ್ಘ ಆಡಳಿತದಲ್ಲಿ ಕಾಂಗ್ರೆಸ್ನವರು ಕೊಡಲಾಗದ ಗ್ಯಾರಂಟಿಗಳನ್ನು ಈಗ ಕೊಡುತ್ತೇವೆ ಅಂತ ಸುಳ್ಳು ಹೇಳ್ತೀರಲ್ಲ ಎಂದು ಕಾಂಗ್ರೆಸ್ ಮುಖಂಡರನ್ನು ನಳಿನ್ ತರಾಟೆಗೆ ತೆಗೆದುಕೊಂಡರು.
ಚುನಾವಣೆ ಪ್ರಚಾರದ ವೇಳೆ ಹೋದ ಕಡೆಗಳೆಲ್ಲಾ ಬಿಜೆಪಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಡಬಲ್ ಎಂಜಿನ್ ಸರಕಾರದ ಸಾಧನೆಗಳು ಇವತ್ತು ಜನಸಾಮಾನ್ಯರಿಗೆ ತಲುಪಿವೆ. ಪ್ರಧಾನಿ ಮೋದಿ ಅವರ ಆಡಳಿತದ ಶೈಲಿ, ಅಭಿವೃದ್ಧಿ ಕಾರ್ಯಗಳು, ನಮ್ಮ ಮುಖ್ಯಮಂತ್ರಿಗಳ ಕಾರ್ಯಗಳು, ಡಬಲ್ ಎಂಜಿನ್ ರಕಾರ ಅನುಷ್ಠಾನ ಮಾಡಿದ ಸಮಾಜ ಕಲ್ಯಾಣ ಯೋಜನೆಗಳು ಪ್ರತಿ ಮನೆಮನೆಗೆ ತಲುಪಿವೆ. ಅಭೂತಪೂರ್ವ ಅಭಿವೃದ್ಧಿ ಕಾರ್ಯ, ಮೂಲಸೌಕರ್ಯ ನಿರ್ಮಾಣದ ಲಾಭಗಳು ಜನಮಾನಸಕ್ಕೆ ತಲುಪಿವೆ ಎಂದು ಅವರು ನುಡಿದರು.
ಕಳೆದ ಚುನಾವಣೆಯ ವರೆಗೂ ಹಳೆ ಮೈಸೂರು ಭಾಗ ಜೆಡಿಎಸ್ ಭದ್ರಕೋಟೆ ಆಗಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರವಾಸದ ನಂತರ ಆ ಭಾಗದಲ್ಲೂ ನಿರೀಕ್ಷೆಗೆ ಮೀರಿ ಜನಬೆಂಬಲ ಬಿಜೆಪಿಗೆ ಸಿಗುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ಜನರ ಸಕಾರಾತ್ಮಕ ಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಪೂರ್ಣ ಬಹುಮತದ ಸರಕಾರ ಬರುತ್ತದೆ ಎಂದರು.
224 ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಗಳನ್ನು ಗುರುತಿಸಿ ಗೌರವಿಸಿದ್ದೇವೆ. ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ 34 ಒಬಿಸಿ, 37 ಪರಿಶಿಷ್ಟ ಜಾತಿ, 18 ಪರಿಶಿಷ್ಟ ಪಂಗಡ, 134 ಸಾಮಾನ್ಯ ವರ್ಗದವರಿಗೆ ಟಿಕೆಟ್ ನಿಡಿದ್ದೇವೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ, ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿದ್ದೇವೆ ಎಂದು ವಿವರ ನೀಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಕೇಂದ್ರ ನಾಯಕ ಅಮಿತ್ ಶಾ, ಬೇರೆ ಬೇರೆ ಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಸಚಿವರು ರಾಜ್ಯದಲ್ಲಿ ಬಿಜೆಪಿ ಪರ ವ್ಯಾಪಕ ಪ್ರಚಾರ ಮಾಡಿದ್ದಾರೆ. ಇವೆಲ್ಲವೂ ಪಕ್ಷಕ್ಕೆ ಬಹಳಷ್ಟು ಬಲ ಕೊಟ್ಟಿದೆ. ಪ್ರಧಾನಿ ಪ್ರವಾಸ, ಅವರ ಯೋಜನೆ, ರೋಡ್ ಶೋ ಬಗ್ಗೆ ಚರ್ಚೆ ನಡೆಯುತ್ತಿದೆ. ಇವೆಲ್ಲವೂ ಜನರ ಮನಸ್ಸಿನಲ್ಲಿದೆ. ನಾಲ್ಕು ವರ್ಷದ ಸರಕಾರ ನಮ್ಮದು. ಈ ಅವಧಿಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಒಪ್ಪಿಗೆಯಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ- ಹೀಗೆ ಎಲ್ಲ ಭಾಗಗಳಲ್ಲೂ ಬಿಜೆಪಿ ಇಂದು ಮುಮಚೂಣಿಯಲ್ಲಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.