ನವದೆಹಲಿ: ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಸರ್ಕಾರಗಳು ಎರಡು ರಾಜ್ಯಗಳ ನಡುವಿನ ಅಂತರರಾಜ್ಯ ಗಡಿ ವಿವಾದ ಇತ್ಯರ್ಥಕ್ಕೆ ಒಪ್ಪಂದಕ್ಕೆ ಸಹಿ ಹಾಕಿವೆ.
ಗುರುವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು.
ಉಭಯ ರಾಜ್ಯಗಳ ನಡುವಿನ ಒಪ್ಪಂದವು ಗಡಿಯಲ್ಲಿರುವ 123 ಗ್ರಾಮಗಳಿಗೆ ಸಂಬಂಧಿಸಿದ ವಿವಾದವನ್ನು ಕೊನೆಗೊಳಿಸುತ್ತದೆ. ಐತಿಹಾಸಿಕ ದೃಷ್ಟಿಕೋನ, ಜನಸಂಖ್ಯಾ ವಿವರ, ಆಡಳಿತಾತ್ಮಕ ಅನುಕೂಲತೆ, ಗಡಿಯ ಸಾಮೀಪ್ಯ ಮತ್ತು ನಿವಾಸಿಗಳ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದ ಮಾಡಲಾಗಿದೆ. ಈ ವಿವಾದಿತ ಗ್ರಾಮಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದವು ಅಂತಿಮವಾಗಿರುತ್ತದೆ ಎಂದು ಎರಡೂ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿವೆ ಮತ್ತು ಭವಿಷ್ಯದಲ್ಲಿ ಯಾವುದೇ ಪ್ರದೇಶ ಅಥವಾ ಗ್ರಾಮಕ್ಕೆ ಸಂಬಂಧಿಸಿದಂತೆ ಯಾವುದೇ ರಾಜ್ಯಗಳು ಯಾವುದೇ ಹೊಸ ಹಕ್ಕನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಒಪ್ಪಂದದ ನಂತರ, ಎರಡೂ ರಾಜ್ಯಗಳ ಗಡಿಯನ್ನು ನಿರ್ಧರಿಸಲು ಸರ್ವೆ ಆಫ್ ಇಂಡಿಯಾದಿಂದ ವಿವರವಾದ ಸಮೀಕ್ಷೆಯನ್ನು ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ನಡುವಿನ ಅಂತರರಾಜ್ಯ ಗಡಿ ವಿವಾದ ಇತ್ಯರ್ಥಕ್ಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಬಹಳ ದೊಡ್ಡ ಸಾಧನೆಯಾಗಿದೆ. ಇದರೊಂದಿಗೆ ದಶಕಗಳಿಂದ ಬಾಕಿ ಉಳಿದಿದ್ದ ಈ ಎರಡು ರಾಜ್ಯಗಳ ನಡುವಿನ 700 ಕಿಲೋಮೀಟರ್ ಉದ್ದದ ಗಡಿ ವಿವಾದವನ್ನು ಈಗ ಸಂಪೂರ್ಣವಾಗಿ ಪರಿಹರಿಸಲಾಗಿದೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ, ಶಾಂತಿಯುತ ಮತ್ತು ಸಂಘರ್ಷ ರಹಿತ ಈಶಾನ್ಯ ರಾಜ್ಯವನ್ನು ಸ್ಥಾಪಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿ ಎರಡು ರಾಜ್ಯಗಳ ನಡುವಿನ ದೀರ್ಘಾವಧಿಯ ಅಂತರ-ರಾಜ್ಯ ಗಡಿ ವಿವಾದದ ಇತ್ಯರ್ಥವಾಗಿದೆ ಎಂದಿದ್ದಾರೆ.
2018 ರಿಂದ, ಭಾರತ ಸರ್ಕಾರವು ಈಶಾನ್ಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು BRU, ಬೋಡೋ, ಕರ್ಬಿ ಆಂಗ್ಲಾಂಗ್ ಮತ್ತು ಬುಡಕಟ್ಟು ಶಾಂತಿ ಒಪ್ಪಂದ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಒಪ್ಪಂದಗಳ ಪರಿಣಾಮವಾಗಿ ಇಡೀ ಈಶಾನ್ಯದಲ್ಲಿ ಶಾಂತಿ ನೆಲೆಸಿದೆ ಮತ್ತು ಇಲ್ಲಿಯವರೆಗೆ ಎಂಟು ಸಾವಿರಕ್ಕೂ ಹೆಚ್ಚು ಶಸ್ತ್ರಸಜ್ಜಿತ ಯುವಕರು ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ ಎಂದು ಶಾ ತಿಳಿಸಿದರು. ಮೋದಿ ಸರ್ಕಾರದ ಪ್ರಯತ್ನದಿಂದಾಗಿ ಇಂದು ಇಡೀ ಈಶಾನ್ಯದಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿದೆ ಮತ್ತು ಈ ಇಡೀ ಪ್ರದೇಶವು ಪ್ರಗತಿಯ ಹಾದಿಯಲ್ಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.