ನವದೆಹಲಿ: ಸಿಖ್ ಧರ್ಮಕ್ಕೆ ಅಡಿಪಾಯವನ್ನು ಹಾಕಿದ ಮೊದಲ ಸಿಖ್ ಗುರು ಗುರುನಾನಕ್ ದೇವ್ ಜಿ ಅವರ ಜನ್ಮದಿನವನ್ನು ಸ್ಮರಿಸುವ ಗುರುನಾನಕ್ ಜಯಂತಿ ಅಥವಾ ಗುರುಪುರಬ್ ಅನ್ನು ಇಂದು ಭಾರತ ಮತ್ತು ಪ್ರಪಂಚದಾದ್ಯಂತ ಧಾರ್ಮಿಕ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ವರ್ಷ ಗುರುನಾನಕ್ ದೇವ್ ಜಿ ಅವರ 553 ನೇ ಜನ್ಮದಿನವಾಗಿದ್ದು, ಪ್ರಪಂಚದಾದ್ಯಂತದ ಭಕ್ತರು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ಗುರುನಾನಕ್ ಜಯಂತಿಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಅವರ ನಿವಾಸದಲ್ಲಿ ಸಂಭ್ರಮಾಚರಣೆ ನಡೆಯಿತು. ಸಮಾರಂಭದಲ್ಲಿ ಕೇಂದ್ರ ಸಚಿವ ಹರ್ದೀಪ್ ಪುರಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾತನಾಡಿ, ಗುರುಗಳ ಆಶೀರ್ವಾದದಿಂದ ದೇಶವು ಅಗಾಧ ಪ್ರಗತಿಯನ್ನು ಸಾಧಿಸಿದೆ. ಶ್ರೀ ಗುರುನಾನಕ್ ದೇವ್ ಜೀ ಜನರಿಗೆ ಜೀವನವನ್ನು ನಡೆಸಲು ಬೇಕಾದ ಮಾರ್ಗದರ್ಶನ ನೀಡಿದರು ಮತ್ತು ಅವರ ಉಪದೇಶಗಳು ಪ್ರಕ್ಷುಬ್ಧ ಸಮಯದಲ್ಲಿ ಮಾರ್ಗದರ್ಶಿ ಬೆಳಕಾಯಿತು. ಗುರುನಾನಕ್ ದೇವ್ ಜಿ ಅವರ ಬೋಧನೆಗಳಿಂದ ಪ್ರೇರಿತರಾಗಿ 130 ಕೋಟಿ ಭಾರತೀಯರ ಕಲ್ಯಾಣದ ಸ್ಫೂರ್ತಿಯೊಂದಿಗೆ ದೇಶವು ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ವೇಳೆ ದೇವ್ ದೀಪಾವಳಿ ಮತ್ತು ಶ್ರೀ ಗುರುನಾನಕ್ ಜಯಂತಿಯ ಶುಭ ಸಂದರ್ಭದಲ್ಲಿ ಜನತೆಗೆ ಮೋದಿ ಶುಭಹಾರೈಸಿದರು.
ದೇಶದಲ್ಲಿ ಸಿಖ್ ಸಂಪ್ರದಾಯವನ್ನು ಸಶಕ್ತಗೊಳಿಸಲು ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ, ದೆಹಲಿ-ಅಮೃತಸರ-ಕತ್ರಾ ಎಕ್ಸ್ಪ್ರೆಸ್ವೇ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಮ್ಮ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯು ದೆಹಲಿ ಮತ್ತು ಅಮೃತಸರ ನಡುವಿನ ಪ್ರಯಾಣದ ಸಮಯವನ್ನು ಮೂರರಿಂದ ನಾಲ್ಕು ಗಂಟೆಗಳವರೆಗೆ ಮೊಟಕುಗೊಳಿಸುತ್ತದೆ ಎಂದು ಹೇಳಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಜನರು ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ದೇಶ ವಿಭಜನೆ ವಿಭಿಷಿಕ ಸಂಸ್ಮರಣಾ ದಿನವನ್ನೂ ಆರಂಭಿಸಲಾಗಿದೆ ಎಂದರು. ವಿಭಜನೆಯ ಸಂತ್ರಸ್ತರಾದ ಸಿಖ್ ಸಮುದಾಯಕ್ಕೆ ಭಾರತದಲ್ಲಿ ನೆಲೆಸಲು ಪೌರತ್ವ ತಿದ್ದುಪಡಿ ಕಾಯ್ದೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.