ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ನಂತರ ಕಾಂಗ್ರೆಸ್ ಪಕ್ಷದವರಿಗೆ ಜ್ಞಾನೋದಯವಾಗಿದೆ. ಅವರಿಗೆ ಅಭಾರಿಯಾಗಿದ್ದೇನೆ. ಭಾರತೀಯರ ಸಾರ್ವಭೌಮತೆ, ಒಡಂಬಡಿಕೆ, ದೇಶಪ್ರೇಮ, ಇವೆಲ್ಲಕ್ಕಿಂತ ಪ್ರಮುಖವಾಗಿ ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವದ ಭೂಪಟದಲ್ಲಿ ಕೈಗೊಂಡ ದೂರದೃಷ್ಟಿಯ ಚಿಂತನೆಗೆ ಕವಲುದಾರಿ ತರಲು ಕಾಂಗ್ರೆಸ್ನವರು ಈ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ರಾಜ್ಯದ ವಸತಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು ಭಾರತ್ ಜೋಡೋ ಯಾತ್ರೆ ಕರ್ನಾಟಕದ ನನ್ನ ಉಸ್ತುವಾರಿ ಜಿಲ್ಲೆಯಿಂದ ಆರಂಭವಾಗಿದೆ. ಹಿಂದೆ ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದುಕೊಂಡು ಬಂದಿದ್ದರು. ನಾನೂ ನೂರಾರು ಕಿಲೋಮೀಟರ್ ಸುತ್ತಾಡಿಕೊಂಡು ಬಂದಿದ್ದೆ. ಇದು ಪಾದಯಾತ್ರೆ ಅಲ್ಲ; ಅಲ್ಲಲ್ಲಿ ಹತ್ತುವುದು- ಇಳಿಯುವ ಯಾತ್ರೆ ಇದು ಎಂದು ವಿಶ್ಲೇಷಿಸಿದರು.
ಗುಂಡ್ಲುಪೇಟೆಯಲ್ಲಿ ಯಾತ್ರೆ ಆರಂಭಿಸಿ ಸಭೆ ನಡೆಸಿ ಅಲ್ಲಿ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಪ್ರಾರಂಭಿಸಿದ್ದು ದಿವಂಗತ ಜೆ.ಎಚ್.ಪಟೇಲ್ ಅವರು. ಆಗ ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದೆ. ಪಟೇಲರು ಚಾಮರಾಜನಗರ ಜಿಲ್ಲಾ ನಾಮಕರಣ ಮಾಡಿ ಜಿಲ್ಲಾ ಕೇಂದ್ರ ಕಟ್ಟಿದ್ದನ್ನು ಹೊರತುಪಡಿಸಿದರೆ ಮುಂದೆ ಬಂದ ಕಾಂಗ್ರೆಸ್ ಸರಕಾರ ಏನು ಮಾಡಿದೆ ಏನಿಲ್ಲ ಎಂಬ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸವಾಲೆಸೆದರು.
ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲಿ ಏನಾದರೂ ಒಂದಷ್ಟು ಕೆಲಸಗಳಾಗಿದ್ದರೆ, ಅದು ಬಿಜೆಪಿಯಿಂದ ಆಗಿದೆ. ಸುಮಾರು 212 ಕೋಟಿ ರೂಪಾಯಿಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಆರಂಭವಾಯಿತು. ಇವತ್ತಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ ನೀರಾವರಿ ಸಚಿವರಾಗಿದ್ದರು. ನಾನು ಆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಒಂದೇ ಬಾರಿಗೆ 110 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ. 14-15 ಕೆರೆಗಳಿಗೆ ನೀರು ತುಂಬಿಸಿ ಬರಡು ಭೂಮಿ, ಉದ್ಧಾರ ಆಗದ ಜಿಲ್ಲೆ ಎಂಬ ಭಾವನೆಯನ್ನು ಅಳಿಸಿಹಾಕಲು ಬಿಜೆಪಿ ಸರಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಜಿಲ್ಲೆ ಅಭಿವೃದ್ಧಿ ಕಾಣಲು 2012-13ರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ಕಾಲೇಜಿಗೆ ಜಾಗವನ್ನೂ ನೀಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಇಲ್ಲಿ ಬರಲು ನಾವೇ ಚಿಂತನೆ ಮಾಡಿದ್ದೇವೆ. ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಆಗಿದೆ. ಗುಂಡ್ಲುಪೇಟೆ, ಬಂಡೀಪುರ, ನಾಗರಹೊಳೆ ಇಲ್ಲಿದ್ದು, ಪ್ರಕೃತಿಗೆ ಮತ್ತೊಂದು ಹೆಸರು ಎಂದು ಹೆಸರುವಾಸಿಯಾಗಿದೆ ಎಂದು ತಿಳಿಸಿದರು.
ಜಗದೀಶ ಶೆಟ್ಟರ್ ಅವರು ಸಿಎಂ ಆಗಿದ್ದಾಗ ಮಲೆ ಮಾದೇಶ್ವರ ಪ್ರಾಧಿಕಾರ ಆರಂಭಿಸಿ 8ರಿಂದ 10 ಕೋಟಿ ಇದ್ದ ಆದಾಯವು 110 ಕೋಟಿ 120 ಕೋಟಿಗೆ ಏರಿದೆ. ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರ ಇದ್ದರೂ ಕಾಂಗ್ರೆಸ್ ಅತ್ತ ಗಮನ ಕೊಟ್ಟಿರಲಿಲ್ಲ. ಆ ಸಮಸ್ಯೆ ಪರಿಹರಿಸಿದ್ದೇವೆ. ಹನೂರು ತಾಲ್ಲೂಕು ಮಾಡಿದ್ದೇವೆ ಎಂದು ತಿಳಿಸಿದರು.
ಮಲೆ ಮಾದೇಶ್ವರ ಬೆಟ್ಟದ ರಸ್ತೆಗಳ ವಿಸ್ತರಣೆ ಮತ್ತು ಅಭಿವೃದ್ಧಿ ನಡೆದಿದೆ. 200ಕ್ಕೂ ಹೆಚ್ಚು ಕೆರೆಗಳನ್ನು ಗುರುತಿಸಿ ಅವುಗಳಿಗೆ ನೀರು ಹರಿಸಲು ಯೋಜನೆ ರೂಪಿಸಿದ್ದು, ಅಕ್ಟೋಬರ್ 15ರವೇಳೆಗೆ ಬೊಮ್ಮಾಯಿಯವರು ಯೋಜನೆಗೆ ಚಾಲನೆ ಕೊಡಲಿದ್ದಾರೆ. 2ರಿಂದ 3 ವರ್ಷಗಳಲ್ಲಿ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ಗುಡಿಸಲುರಹಿತ ಜಿಲ್ಲೆ ಮಾಡಲಾಗುವುದು. ಜಿಲ್ಲೆ ಶಾಪಗ್ರಸ್ಥ ಎಂಬ ಹಣೆಪಟ್ಟಿಯಿಂದ ಹೊರಬರಲು ಇದು ಪೂರಕ ಎಂದರು.
ಸಿದ್ದರಾಮಯ್ಯರವರು ಸಿಎಂ ಆಗುವ ಹಗಲುಕನಸು ಕಾಣುತ್ತಿರುವಂತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 4ರಲ್ಲಿ ಇಬ್ಬರು ಶಾಸಕರು ನಮ್ಮವರಿದ್ದಾರೆ. ಸ್ಥಳೀಯ ಸಂಸ್ಥೆಗಳು ನಮ್ಮ ಅಧಿಕಾರ ಹೊಂದಿವೆ. ದಲಿತರಿಗೆ ಅನ್ಯಾಯ ಮಾಡುವ ಕೂಗು ಕಾಂಗ್ರೆಸ್ಸಿಗರದು. 2018ರ ಚುನಾವಣೆಯಲ್ಲಿ ಡಾ. ಪರಮೇಶ್ವರ್ ಅವರಿಗೆ ಯಾರು ಅನ್ಯಾಯ ಮಾಡಿದರೆಂದು ನೀವೇ ನೋಡಿಕೊಳ್ಳಿ ಎಂದು ತಿಳಿಸಿದರು.
ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ನೈತಿಕತೆಯೇ ಇಲ್ಲ. ಅವರನ್ನು ಚುನಾವಣೆಗೆ ನಿಲ್ಲಿಸಿ, ಸೋಲಿಸಿದ್ದೀರಿ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸಂವಿಧಾನ ತಿದ್ದಲು ಹೊರಟಿದ್ದರೆಂದು ಸುಳ್ಳು ಆರೋಪ ಮಾಡುತ್ತೀರಿ. ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟ್ರದ ಸಂಪತ್ತು ಎಂದು ಇಡೀ ವಿಶ್ವದ ಜನ ಮಾತನಾಡುತ್ತಾರೆ. ಅಂಥವರ ಬಗ್ಗೆ ಹೀಗೆ ಮಾತನಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಯವರು ರಾಷ್ಟ್ರೀಯ ಪಕ್ಷದ ಮುಖಂಡರ ಮಗ. ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಬಗ್ಗೆ ಅಪಾರವಾದ ಗೌರವವಿದೆ. ಸಿದ್ದರಾಮಯ್ಯನವರು ಮತ್ತಿತರ ಕಾಂಗ್ರೆಸ್ ಮುಖಂಡರು ಜೋಡಿಸಿಕೊಂಡಾದರೂ ಹೋಗಲಿ; ಕುಡ್ಕೊಂಡಾದರೂ ಹೋಗಲಿ; ನೀವುಗಳು ಹೇಗಿದ್ದೀರೆಂದು ರಾತ್ರಿ ಆದ ಮೇಲೆ ತಿಳಿಯುತ್ತದೆ. ನಿಮ್ಮ ಗುಂಪು- ಆ ಗುಂಪು ಇದೆಯಲ್ಲವೇ? ಆ ಗುಂಪುಗಳು ಶಾಶ್ವತವಾಗಿರಲಿ ಎಂದು ವಿನಂತಿಸುವೆ ಎಂದರು.
ಯಾತ್ರೆ ಜೋಡೋ ಮಾಡಲಿದೆಯೇ? ಕೂಡೋದೋ ಕಳೆಯೋದೋ ಗೊತ್ತಿಲ್ಲ. 2 ವರ್ಷ ಕೋವಿಡ್ ನಿಂದ ರಾಜ್ಯ ತತ್ತರಿಸಿತ್ತು. ಇದೀಗ ಗರಿಷ್ಠ ಮಳೆಯಿಂದ ಹಾನಿ ಸಂಭವಿಸಿದೆ. ಇವೆಲ್ಲವನ್ನೂ ನಿಭಾಯಿಸಿ ಜನಸಾಮಾನ್ಯರಿಗೆ ಅನಾನುಕೂಲ ಆಗದಂತೆ ಅಭಿವೃದ್ಧಿಯ ವೇಗ ಹೆಚ್ಚಿಸುವಂತೆ ಬಸವರಾಜ ಬೊಮ್ಮಾಯಿಯವರು ನಡೆದುಕೊಂಡಿದ್ದಾರೆ. ಇದು ಜೋಡೋ ಯಾತ್ರೆಯೇ ಅಥವಾ ಇನ್ನೊಂದು ಯಾತ್ರೆಯೇ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.
ಕಟೌಟ್ ಅನ್ನು ನಾವು ಹರಿದಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಶಿಸ್ತಿನ ಪಕ್ಷ ಎಂದರಲ್ಲದೆ, ಸ್ವಯಂಕೃತವಾಗಿ ಅವರೇನಾದರೂ ಮಾಡಿದ್ದಾರೋ ಗೊತ್ತಿಲ್ಲ. ನಾವು ಮಾಡಿದ್ದಂತೂ ಅಲ್ಲ ಎಂದು ತಿಳಿಸಿದರು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯ ಹತ್ತಿರ ಏನಾಯಿತು? ಬೆಂಕಿ ಇಟ್ಟವರು, ಮಾಡಬಾರದ್ದನ್ನು ಮಾಡಿದ್ದು ಯಾರು? ನಿಮ್ಮವರೇ ಮಾಡಿ ಇನ್ನೊಬ್ಬರಿಗೆ ಹೇಳುತ್ತೀರಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆ ಹಾಕಿದರು.
ನ್ಯಾಷನಲ್ ಹೆರಾಲ್ಡ್ ಹಗರಣ ವಿಚಾರದಲ್ಲಿ ಉತ್ತರಿಸಲು ಕೋರಿದ್ದ ಬಿಜೆಪಿ ಯುವ ಮೋರ್ಚಾದ ಫ್ಲೆಕ್ಸ್ ಗಳನ್ನು ತೆಗೆಯಲು ಎಸ್ಪಿ ಸೂಚಿಸಿದ್ದು, ತೆಗೆಸಿದ್ದಾರೆ. ಅವರ ಫ್ಲೆಕ್ಸ್ ಅವರೇ ಕುಯ್ದಿದ್ದಾರೋ ಗೊತ್ತಿಲ್ಲ ಎಂದು ಸೋಮಣ್ಣ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ಉತ್ತರ ಕೊಟ್ಟರು.
ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ನಾವು ಯಾವಾಗಲೂ ರೆಡಿ ಇದ್ದೇವೆ; ನಾಳೆ ಬಂದರೂ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಇನ್ನೊಂದು ಪ್ರಶ್ನೆಗೆ ಸೋಮಣ್ಣ ಅವರು ಉತ್ತರ ನೀಡಿದರು.
.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.