ನವದೆಹಲಿ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಭಿನ್ನ ಮತ ಭುಗಿಲೆದ್ದಿದೆ. ಸಚಿನ್ ಪೈಲಟ್ ಅವರ ಮುಖ್ಯಮಂತ್ರಿ ಸ್ಥಾನಕ್ಕೇರುವ ಪ್ರಯತ್ನವನ್ನು ತಡೆಯುವ ಸಲುವಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ 90ಕ್ಕೂ ಹೆಚ್ಚು ಕಾಂಗ್ರೆಸ್ ಮತ್ತು ಸ್ವತಂತ್ರ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ನಿನ್ನೆ ಸಂಜೆ ಮುಖ್ಯಮಂತ್ರಿ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿತ್ತು. ಈ ಸಭೆಗೆ ರಾಜ್ಯ ಉಸ್ತುವಾರಿ ಅಜಯ್ ಮಾಕನ್ ಮತ್ತು ಹಿರಿಯ ಮುಖಂಡ ಮಲ್ಲಿಕಾರ್ಜುನ ಖಡ್ಕೆ ವೀಕ್ಷಕರಾಗಿ ಬಂದಿದ್ದರು. ಈ ಸಭೆಯಲ್ಲಿ ಮುಂದಿನ ನೂತನ ಸಿಎಂ ಬಗ್ಗೆ ಪ್ರಸ್ತಾಪ ಅಂಗೀಕರಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೆ ಅತೃಪ್ತ ಶಾಸಕರು ನಗರಾಭಿವೃದ್ಧಿ ಸಚಿವ ಶಾಂತಿ ಧರಿವಾಲ್ ಅವರ ಮನೆಯಲ್ಲಿ ಜಮಾಯಿಸಿದರು. ಬಳಿಕ ಸ್ಪೀಕರ್ ನಿವಾಸಕ್ಕೆ ಬಂದರು. ಹೀಗಾಗಿ ಸಭೆ ಮೊಟಕುಗೊಂಡಿದೆ.
92 ಶಾಸಕರು ತಮ್ಮೊಂದಿಗಿದ್ದಾರೆ ಎಂದು ಸಂಪುಟ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ. ಶಾಸಕರಲ್ಲಿ ಅಸಮಾಧಾನವಿದೆ ಎಂದಿದ್ದಾರೆ. ಈ ಹಿಂದೆ ಬಂಡಾಯವೆದ್ದವರಿಗೆ ಅಧಿಕಾರ ಹಸ್ತಾಂತರಿಸುವುದನ್ನು ತಾವು ವಿರೋಧಿಸುತ್ತೇವೆ ಎಂದು ಸಚಿನ್ ಪೈಲಟ್ ಅವರ ಹೆಸರನ್ನು ಹೇಳದೆಯೇ ಖಚರಿಯಾವಾಸ್ ಹೇಳಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಗಾದಿಯ ಪ್ರಬಲ ಉಮೇದುದಾರ. ಹೀಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ಹಸ್ತಾಂತರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ತಮಗೆ ನಿಷ್ಠರಾಗಿರುವ 90ಕ್ಕೂ ಹೆಚ್ಚು ರಾಜಸ್ಥಾನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೆಹ್ಲೋಟ್, ಯಾವುದು ತನ್ನ ಕೈಯಲ್ಲಿಲ್ಲ, ಶಾಸಕರು ಕೋಪಗೊಂಡಿದ್ದಾರೆ ಎಂದು ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.