ನವದೆಹಲಿ: ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಸೆಪ್ಟೆಂಬರ್ 10-11 ರಂದು ಅಹಮದಾಬಾದ್ನ ಸೈನ್ಸ್ ಸಿಟಿಯಲ್ಲಿ ಆಯೋಜನೆಗೊಂಡಿರುವ ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ (Centre-State Science Conclave) ಅನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, ಅಮೃತ ಕಾಲದಲ್ಲಿ ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ನಿರ್ಮಿಸಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ವಿಜ್ಞಾನಿಗಳಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಮತ್ತು ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳನ್ನು ನಿರ್ಮಿಸಲು ಒತ್ತು ನೀಡುವಂತೆ ಮೋದಿ ರಾಜ್ಯಗಳನ್ನು ಕೇಳಿದರು. ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿಯೂ ಇನ್ನೋವೇಶನ್ ಲ್ಯಾಬ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದರು. ವೈಜ್ಞಾನಿಕ ಸಂಶೋಧನೆಯನ್ನು ತಳ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ಸ್ಥಳೀಯ ಸಮಸ್ಯೆಗಳಿಗೆ ವಿಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು.
ತಮ್ಮ ಸರ್ಕಾರವು ವಿಜ್ಞಾನ ಆಧಾರಿತ ಅಭಿವೃದ್ಧಿಯ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದೆ ಮತ್ತು 2014 ರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಅಮೃತ ಕಾಲದಲ್ಲಿ ಭಾರತವನ್ನು ಸಂಶೋಧನೆ ಮತ್ತು ನಾವೀನ್ಯತೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಎಲ್ಲರೂ ಏಕಕಾಲದಲ್ಲಿ ಅನೇಕ ರಂಗಗಳಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಮೋದಿ ಹೇಳಿದರು.
ಈ ಸಮಾವೇಶ ʼಸೈನ್ಸ್, ಟೆಕ್ನಾಲಜಿ, ಇನ್ನೋವೇಷನ್- 2047ʼ ಸೇರಿದಂತೆ ವಿವಿಧ ವಿಷಯಾಧಾರಿತ ಸೆಷನ್ಗಳನ್ನು ಒಳಗೊಂಡಿರುತ್ತದೆ. ರಾಜ್ಯಗಳಲ್ಲಿ ಸೈನ್ಸ್, ಟೆಕ್ನಾಲಜಿ, ಇನ್ನೋವೇಷನ್ ಗಾಗಿ ಭವಿಷ್ಯದ ಬೆಳವಣಿಗೆಯ ಮಾರ್ಗಗಳು ಮತ್ತು ದೃಷ್ಟಿ; ಆರೋಗ್ಯ – ಎಲ್ಲರಿಗೂ ಡಿಜಿಟಲ್ ಆರೋಗ್ಯ ರಕ್ಷಣೆ; 2030 ರ ವೇಳೆಗೆ R&D ನಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ದ್ವಿಗುಣಗೊಳಿಸುವುದು; ಕೃಷಿ – ರೈತರ ಆದಾಯವನ್ನು ಸುಧಾರಿಸಲು ತಾಂತ್ರಿಕ ಮಧ್ಯಸ್ಥಿಕೆಗಳು; ನೀರು – ಕುಡಿಯುವ ನೀರಿನ ಉತ್ಪಾದನೆಗೆ ನಾವೀನ್ಯತೆ; ಶಕ್ತಿ- ಹೈಡ್ರೋಜನ್ ಮಿಷನ್ನಲ್ಲಿ ಎಸ್ & ಟಿ ಪಾತ್ರ ಸೇರಿದಂತೆ ಎಲ್ಲರಿಗೂ ಶುದ್ಧ ಶಕ್ತಿ; ಡೀಪ್ ಓಷನ್ ಮಿಷನ್ ಮತ್ತು ಕರಾವಳಿ ರಾಜ್ಯಗಳು/ಕೇಂದ್ರಾಡಳಿಪ್ರದೇಶಗಳು ಹಾಗೂ ದೇಶದ ಭವಿಷ್ಯದ ಆರ್ಥಿಕತೆಗಾಗಿ ಅದರ ಪ್ರಸ್ತುತತೆ ಮುಂದಾದ ಸೆಷನ್ಗಳು ಆಯೋಜನೆಗೊಳ್ಳಲಿವೆ.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಉಪಸ್ಥಿತರಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು, ಉದ್ಯಮದ ಪ್ರಮುಖರು, ಉದ್ಯಮಿಗಳು, ಎನ್ಜಿಒಗಳು, ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಈ ರೀತಿಯ ಮೊದಲ ಕಾನ್ಕ್ಲೇವ್ಗೆ ಸಾಕ್ಷಿಯಾಗಲಿದ್ದಾರೆ ಎಂದು ಪಿಎಂಒ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.