ಚೆನ್ನೈ: ತಮಿಳುನಾಡಿನ ಕುಂಭಕೋಣಂನ ದೇವಸ್ಥಾನದಿಂದ ಕಳ್ಳತನವಾಗಿದ್ದ ಕಳಿಂಗನರ್ತನ ಕೃಷ್ಣನ ಮೂರ್ತಿ ಸೇರಿದಂತೆ ಮೂರು ಪುರಾತನ ವಿಗ್ರಹಗಳು ಅಮೆರಿಕಾದ ವಸ್ತುಸಂಗ್ರಹಾಲಯದಲ್ಲಿ ಪತ್ತೆಯಾಗಿವೆ ಎಂದು ತಮಿಳುನಾಡಿನ ಐಡಲ್ ವಿಂಗ್ ಸಿಐಡಿ ಗುರುವಾರ ತಿಳಿಸಿದೆ.
ಕುಂಭಕೋಣಂನ ಸುಂದರ ಪೆರುಮಾಳ್ಕೋವಿಲ್ ಗ್ರಾಮದ ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದಿಂದ ಸುಮಾರು 60 ವರ್ಷಗಳ ಹಿಂದೆ ಕಾಳಿಂಗನರ್ತನ ಕೃಷ್ಣ, ವಿಷ್ಣು ಮತ್ತು ಶ್ರೀದೇವಿಯ ಕಂಚಿನ ವಿಗ್ರಹಗಳನ್ನು ಕಳವು ಮಾಡಲಾಗಿತ್ತು ಮತ್ತು ನಕಲಿ ವಿಗ್ರಹಗಳನ್ನು ಅವುಗಳ ಜಾಗದಲ್ಲಿ ಇಡಲಾಗಿತ್ತು. ಇದು ತೀರಾ ಇತ್ತೀಚಿನ ವರ್ಷಗಳವರೆಗೂ ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಗ್ರಹಗಳು ಯುಎಸ್ನ ವಸ್ತುಸಂಗ್ರಹಾಲಯದಲ್ಲಿವೆ ಎಂದು ತನಿಖೆಯಿಂದ ದೃಢಪಟ್ಟ ನಂತರ, ಸೌಂದರರಾಜ ಪೆರುಮಾಳ್ ದೇವಸ್ಥಾನಕ್ಕೆ ವಿಗ್ರಹ ಹಿಂದಿರುಗಿಸುವಂತೆ ಐಡಲ್ ವಿಂಗ್ ಪತ್ರಗಳನ್ನು ಸಲ್ಲಿಸಿದೆ ಎಂದು ಐಡಲ್ ವಿಂಗ್ ಡಿಜಿಪಿ ಕೆ ಜಯಂತ್ ಮುರಳಿ ಹೇಳಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಏಷ್ಯನ್ ಆರ್ಟ್ ಮ್ಯೂಸಿಯಂನಲ್ಲಿ ಕಾಳಿಂಗನರ್ತನ ಕೃಷ್ಣನ ವಿಗ್ರಹ ಪತ್ತೆಯಾಗಿದ್ದರೆ, ಟೆಕ್ಸಾಸ್ನ ಕಿಂಬೆಲ್ ಆರ್ಟ್ ಮ್ಯೂಸಿಯಂನಲ್ಲಿ ವಿಷ್ಣುವಿನ ವಿಗ್ರಹ ಮತ್ತು ಫ್ಲೋರಿಡಾದ ಹಿಲ್ಸ್ ಹರಾಜು ಗ್ಯಾಲರಿಯಲ್ಲಿ ಶ್ರೀದೇವಿಯ ವಿಗ್ರಹವಿದೆ ಎಂದು ಇಲ್ಲಿ ಪ್ರಕಟಣೆ ತಿಳಿಸಿದೆ.
ಫೆಬ್ರವರಿ 12, 2020 ರಂದು ಅರುಲ್ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕಾ ರಾಜಾ ಅವರು ನೀಡಿದ ದೂರಿನ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಯಾರೋ ದುಷ್ಕರ್ಮಿಗಳು ತಿರುಮಂಗೈ ಆಳ್ವಾರರ ವಿಗ್ರಹವನ್ನು ಕದ್ದು ನಕಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಅಧಿಕಾರಿ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಈ ವಿಗ್ರಹವು ಸುಮಾರು 60 ರಿಂದ 65 ವರ್ಷಗಳ ಹಿಂದೆ ಕಳ್ಳತನವಾಗಿದ್ದು, ಅದರ ಪ್ರತಿಕೃತಿಯನ್ನು ಅದರ ಜಾಗದಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಪೊಲೀಸ್ ಉಪಾಧೀಕ್ಷಕ ಪಿ ಚಂದ್ರಶೇಖರನ್ ಅವರು ತನಿಖೆಯ ಸಮಯದಲ್ಲಿ ಪತ್ತೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.