ನವದೆಹಲಿ: 2ನೇ ಭಾರತ-ಜಪಾನ್ 2ಪ್ಲಸ್2 ಸಚಿವರ ಮಾತುಕತೆ ಇಂದು ಟೋಕಿಯೋದಲ್ಲಿ ಆರಂಭವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಜಪಾನ್ ರಕ್ಷಣಾ ಸಚಿವ ಯಸುಕಾಜು ಹಮದಾ ಮತ್ತು ಜಪಾನ್ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂಡೋ-ಜಪಾನ್ ದ್ವಿಪಕ್ಷೀಯ ಸಂಬಂಧಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ ಎಂದು ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಎರಡೂ ದೇಶಗಳು ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳ ಸುದೀರ್ಘ ಇತಿಹಾಸವನ್ನು ಹೊಂದಿವೆ. ಏಷ್ಯಾದಲ್ಲಿ ಎರಡು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವಗಳಾಗಿ, ಎರಡೂ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಅನುಸರಿಸುತ್ತಿವೆ. ಈ ವರ್ಷ, ಭಾರತ ಮತ್ತು ಜಪಾನ್ 70 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿದ್ದು, ಡಿಸೆಂಬರ್ನಲ್ಲಿ ನವದೆಹಲಿಯಲ್ಲಿ ಇದನ್ನು ಸ್ಮರಣಾರ್ಥವಾಗಿ ಆಯೋಜಿಸಲು ಎರಡೂ ರಾಷ್ಟ್ರಗಳು ಉತ್ಸಾಹಭರಿತವಾಗಿವೆ” ಎಂದಿದ್ದಾರೆ.
ಶಿಂಜೋ ಅಬೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಸಿಂಗ್, ಭಾರತ-ಜಪಾನ್ ಸಂಬಂಧವನ್ನು ಉನ್ನತೀಕರಿಸುವಲ್ಲಿ ಅವರ ಕೊಡುಗೆಗಳು ಮಹತ್ವದ್ದಾಗಿದೆ ಎಂದು ಹೇಳಿದರು. ಈ ನಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಜಪಾನ್ನ ಜನರೊಂದಿಗೆ ಭಾರತವು ಒಗ್ಗಟ್ಟಿನಲ್ಲಿ ನಿಂತಿದೆ ಎಂದು ಅವರು ಹೇಳಿದರು.
ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣಾ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಭಯ ದೇಶಗಳ ಬದ್ಧತೆಯನ್ನು ಇಂದಿನ ಸಭೆಯು ಪ್ರದರ್ಶಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಹೇಳಿದ್ದಾರೆ. ಇದು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಬಲವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
“ನಮ್ಮ ನಾಯಕರ ಇತ್ತೀಚಿನ ಸಭೆಯು ನಮ್ಮ ಸಂಬಂಧದ ನಿರಂತರತೆ ಮತ್ತು ಬಲವನ್ನು ಪುನರುಚ್ಚರಿಸಿದೆ. ಭಾರತ-ಜಪಾನ್ ಸಹಭಾಗಿತ್ವವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಇದು ನಮ್ಮ ಹಂಚಿಕೆಯ ಮೌಲ್ಯಗಳಾದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಗೌರವದಲ್ಲಿ ಬೇರೂರಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.