ಮಂಗಳೂರು : ನಗರದ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಈ ದಿನ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅದೇ ರೀತಿ ವಿದ್ಯಾ ಸಂಸ್ಥೆಯ ವತಿಯಿಂದ ಪ್ರತೀ ವರ್ಷ ಅಧ್ಯಾಪನಾ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಶಿಕ್ಷಕರನ್ನು ಗೌರವಿಸಿ, ಸನ್ಮಾನಿಸುವ ಗುರುವಂದನಾ ಎಂಬ ವಿಶೇಷ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.
ಸಂತ ಆಗ್ನೆಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕಿಯಾಗಿ 37 ವರ್ಷಗಳ ಕಾಲ ಮತ್ತು ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 16 ವರ್ಷಗಳ ಕಾಲ ಪ್ರಾಂಶುಪಾಲೆಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಶಾರದಾ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ| ಲೀಲಾ ಉಪಾಧ್ಯಾಯ, ಸಂತ ಅಲೋಶಿಯಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ವಿಭಾಗಾಧ್ಯಕ್ಷರಾಗಿ ಸೇವೆಗೈದು ನಿವೃತ್ತಿ ಹೊಂದಿದ ಮಾನವ ಸಂಪನ್ಮೂಲ ಅಭಿವೃದ್ಧಿ ಶಿಕ್ಷಣ ತರಬೇತುದಾರ, ಸಂಸ್ಕೃತ ಸಂಘದ ಅಧ್ಯಕ್ಷರಾಗಿದ್ದ ಖ್ಯಾತ ವಿದ್ವಾಂಸ ಡಾ| ಶಿಕಾರಿಪುರ ಕೃಷ್ಣಮೂರ್ತಿ ಹಾಗೂ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ, ವಿದ್ಯಾಭಾರತಿ ಕರ್ನಾಟಕ ಪ್ರಾಂತದ ಕಾರ್ಯದರ್ಶಿಯಾದ ಶ್ರೀ ವಸಂತ ಮಾಧವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಮಾನ್ಯ ಪ್ರೊ. ಎಂ.ಬಿ.ಪುರಾಣಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತಗೊಂಡ ಹಿರಿಯ ಶಿಕ್ಷಕರು ತಮ್ಮ ಸೇವಾವಧಿಯ ಅನುಭವಗಳನ್ನು ಹೇಳುವುದರೊಂದಿಗೆ, ಶಿಕ್ಷಕರಲ್ಲಿ ಇರಬೇಕಾದ ಗುಣ-ನಡತೆ, ಜವಾಬ್ದಾರಿಗಳ ಬಗ್ಗೆ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು. ಪ್ರೊ.ಎಂ.ಬಿ.ಪುರಾಣಿಕರು ಸನ್ಮಾನಿತ ಶಿಕ್ಷಕರ ಸಾಧನೆಗಳನ್ನು ವಿವರಿಸಿ ಅಭಿನಂದನೆಗೈದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ, ಶುಭೋದಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಜಯಶ್ರೀ ಪೈ ಮತ್ತು ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಸನ್ಮಾನ ಪತ್ರಗಳನ್ನು ಓದಿದರು.
ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ಸದಸ್ಯರುಗಳಾದ ಶ್ರೀ ಸೀತಾರಾಮ ಆಚಾರ್ಯ, ಪ್ರದೀಪ ಕುಮಾರ ಕಲ್ಕೂರಾ, ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿ ಶ್ರೀ ವಿವೇಕ್ ತಂತ್ರಿ, ವಿದ್ಯಾನಿಕೇತನದ ಪ್ರಾಂಶುಪಾಲೆ ಶ್ರೀಮತಿ ಸುಷ್ಮಾ ದಿನಕರ್, ಉಪ-ಪ್ರಾಂಶುಪಾಲ ಶ್ರೀ ವಿನಾಯಕ್, ಶ್ರೀಮತಿ ಸುನಂದ ಪುರಾಣಿಕ್, ಶ್ರೀಮತಿ ವಿನೋದಾ ಅನಂತರಾಮ ರಾವ್ ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀಪತಿ ರಾವ್ ಸ್ವಾಗತಗೈದರು. ಶಾರದಾ ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ನಿರ್ವಹಣೆಗೈದರೆ, ಶಾರದಾ ವಿದ್ಯಾನಿಕೇತನ ಡೇ-ಬೋರ್ಡಿನ ಪ್ರಾಂಶುಪಾಲೆ ಶ್ರೀಮತಿ ಲತಾಂಜಲಿ ರೈ ಧನ್ಯವಾದವಿತ್ತರು. ಶಾರದಾ ಸಮೂಹ ಸಂಸ್ಥೆಗಳ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ, ರೂಪಕ, ಸಂಗೀತ, ಕಿರು-ಪ್ರಹಸನಗಳನ್ನು ಪ್ರದರ್ಶಿಸಿ ಮನರಂಜಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.