ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣಕಾಸು ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ. ಅವರಿಗೆ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಸಾಥ್ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 21 ರಂದು ವಿಚಾರಣೆಗೆ ಒಳಪಡುವಂತೆ ಇಡಿ ನೋಟಿಸ್ ನೀಡಿತ್ತು. ಮೊದಲು ಜೂನ್ 8 ರಂದು ಹಾಜರಾಗಲು ನೋಟಿಸ್ ನೀಡಲಾಯಿತು, ಆದರೆ ಅವರು ಕೋವಿಡ್ -19 ಕಾರಣದಿಂದ ಹಾಜರಾಗಲಿಲ್ಲ. ನಂತರ, ಜೂನ್ 23 ಕ್ಕೆ ಸಮನ್ಸ್ ನೀಡಲಾಯಿತು. ಆಗಲೂ ವಿಶ್ರಾಂತಿ ಕಾರಣದಿಂದ ಅವರು ಹಾಜರಾಗಲಿಲ್ಲ. ಬಳಿಕ ಇಂದು ಹಾಜರಾಗುವಂತೆ ಸಮನ್ಸ್ ನೀಡಲಾಯಿತು.
ಈ ವಿಚಾರಣೆಯು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್ ಭಾಗವಾದ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದೆ.
ಸೋನಿಯಾ ಅವರು ಕೇಂದ್ರ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ವಿದ್ಯುತ್ ಲೇನ್ನಲ್ಲಿರುವ ಇಡಿ ಪ್ರಧಾನ ಕಚೇರಿಗೆ ತಮ್ಮ Z+ ಭದ್ರತೆಯೊಂದಿಗೆ ಆಗಮಿಸಿದ್ದಾರೆ. ಆಕೆಯ ಹೇಳಿಕೆಯನ್ನು ಏಜೆನ್ಸಿಯು ಮನಿ ಲಾಂಡರಿಂಗ್ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿಕೊಳ್ಳುತ್ತದೆ ಮತ್ತು ಅದನ್ನು ಆಡಿಯೋ-ವಿಡಿಯೋ ಮೋಡ್ನಲ್ಲಿ ಸಂಗ್ರಹಿಸಲಿದೆ.
ಇನ್ನೊಂದೆಡೆ ಸೋನಿಯಾ ಗಾಂಧಿಯ ವಿರುದ್ಧ ಇಡಿ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್, ಡಿಎಂಕೆ, ಸಿಪಿಐ-ಎಂ, ಸಿಪಿಐ, ಐಯುಎಂಎಲ್, ಎನ್ಸಿ, ಟಿಆರ್ಎಸ್, ಎಂಡಿಎಂಕೆ, ಎನ್ಸಿಪಿ, ವಿಸಿಕೆ, ಶಿವಸೇನೆ, ಆರ್ಜೆಡಿ ಮತ್ತು ಆರ್ಎಸ್ಪಿ ಸೇರಿದಂತೆ 13 ರಾಜಕೀಯ ಪಕ್ಷಗಳ ನಾಯಕರು ರಾಜಧಾನಿಯ ಸಂಸತ್ ಭವನದಲ್ಲಿ ಸಭೆ ನಡೆಸಿ ವಿಚಾರಣೆಯನ್ನು ಖಂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.