News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

5 ವರ್ಷಗಳಲ್ಲಿ ಜಿಲ್ಲೆಗೊಂದು ಅತ್ಯುತ್ಕೃಷ್ಟ ಎಂಜಿನಿಯರಿಂಗ್ ಕಾಲೇಜು-ಉನ್ನತ ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿದ ಉನ್ನತ ಸಮಿತಿ

ಬೆಂಗಳೂರು: ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 30 ಎಂಜಿನಿಯರಿಂಗ್ ಕಾಲೇಜುಗಳನ್ನು ಇನ್ನು 5 ವರ್ಷಗಳಲ್ಲಿ ಅತ್ಯುತ್ಕೃಷ್ಟವಾಗಿ ಬೆಳೆಸುವ `ರೀತಿ’ (RETE- ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್) ಯೋಜನೆಗೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದ ಉನ್ನತ ಸಮಿತಿಯು ಮಂಗಳವಾರ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು.

ಇದರ ಅಂಗವಾಗಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರಕಾರದ ಪರವಾಗಿ ವರದಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಜಿಲ್ಲೆಗೆ ತಲಾ ಒಂದರಂತೆ ಒಟ್ಟು 30 ಕಾಲೇಜುಗಳನ್ನು `ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ(`ರೀತಿ’) ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಪರಿಪೋಷಣೆ ಇನ್ಕ್ಯುಬೇಷನ್), ಆ್ಯಕ್ಸಲೇಟರ್ ಮತ್ತು ಸೂಪರ್-30 ಎನ್ನುವ ಮೂರು ವಿಭಾಗಗಳಡಿ ಪರಿಗಣಿಸಲಾಗಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಸಂಸ್ಥೆಗಳನ್ನು ಆರಿಸಿಕೊಳ್ಳಲಾಗಿದೆ’ ಎಂದರು.

`ವಿದ್ಯಾರ್ಥಿಗಳಿಗೆ ತಮ್ಮ ಊರುಗಳ ಹತ್ತಿರದಲ್ಲೇ ಅತ್ಯುನ್ನತ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲು ಹೋದ ವರ್ಷದ ನವೆಂಬರಿನಲ್ಲಿ ಉನ್ನತ ಸಮಿತಿ ರಚಿಸಲಾಗಿತ್ತು. ಜತೆಗೆ, ಸೂಕ್ತ ಖಾಸಗಿ/ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲು ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥರಾದ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿತ್ತು’ ಎಂದು ಅವರು ಹೇಳಿದರು.

ಸರ್ಕಾರ, ಉದ್ಯಮರಂಗ ಮತ್ತು ವಿಟಿಯು ಮೂರೂ ಸೇರಿಕೊಂಡು `ರೀತಿ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಿದ್ದು, ತಲಾ ಶೇ.33ರಷ್ಟು ವೆಚ್ಚ ಭರಿಸಲಿವೆ. ಇದು ಐತಿಹಾಸಿಕ ಕ್ರಮವಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸೂಕ್ತ ಅವಕಾಶ ಒದಗಿಸಿದೆ. 2 ಮತ್ತು 3ನೇ ಸ್ತರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಔದ್ಯಮಿಕ ಅರಿವು ಮತ್ತು ಸಂಶೋಧನೆ ಆಧರಿತ ತಾಂತ್ರಿಕ ಶಿಕ್ಷಣ ನೀಡುವುದು ಇದರ ಹೆಗ್ಗುರಿಯಾಗಿದೆ. ಈ ಮೂಲಕ ರಾಜ್ಯದ ಉದ್ದಗಲಕ್ಕೂ ಉತ್ಕೃಷ್ಣ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿರಬೇಕೆಂಬ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಈ ಕಾಲೇಜುಗಳಲ್ಲಿ ವಿದ್ಯಾರ್ಥಿಕೇಂದ್ರಿತ ಕೌಶಲ್ಯ ಮತ್ತು ಸಂಶೋಧನಾ ಬಹುಶಿಸ್ತೀಯ ಶಿಕ್ಷಣ ಒದಗಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಿ, ಅವರಲ್ಲಿ ಉದ್ಯಮಶೀಲತೆಯನ್ನೂ ಬೆಳೆಸಲಾಗುವುದು. ಜತೆಗೆ, ಈ 30 ಕಾಲೇಜುಗಳಲ್ಲಿ ಸ್ವಯಂ ಮೌಲ್ಯಮಾಪನ ಮತ್ತು `ಮೆಂಟರ್-ಆಡಿಟ್ ಮಾದರಿ’ ಮೂಲಕ ಉತ್ತರದಾಯಿತ್ವವನ್ನು ತರಲಾಗುವುದು ಎಂದು ಸಚಿವರು ವಿವರಿಸಿದರು.

ಈ ವರದಿಯನ್ನು ಸಲ್ಲಿಸಿರುವ ಪ್ರೊ.ಕರಿಸಿದ್ದಪ್ಪ ನೇತೃತ್ವದ ಸಮಿತಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಮ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉದ್ಯಮಿ ನಾರಾಯಣನ್ ರಾಮಸ್ವಾಮಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಲಹೆಗಾರ ಕಾರ್ತಿಕ್ ಕಿಟ್ಟು ಮತ್ತು ವಿಟಿಯು ಕುಲಸಚಿವ ಆನಂದ್ ದೇಶಪಾಂಡೆ ಇದ್ದರು.

`ಸೂಪರ್-30’ ಷರತ್ತುಗಳು 
ಈ ಕಾಲೇಜುಗಳು ಅತ್ಯುತ್ಕೃಷ್ಟ ಮಟ್ಟವನ್ನು ಸಾಧಿಸಲು ಹಲವು ನಿಯಮಗಳನ್ನು ಪಾಲಿಸಲಾಗುವುದು. ಆ ನಿಯಮಗಳು ಹೀಗಿವೆ:
• 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿ ಮೂಲಕ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು.
• ಕಾಲೇಜುಗಳು ಅಪೇಕ್ಷಿತ ಮಟ್ಟವನ್ನು ಮುಟ್ಟಲು ವಿಫಲವಾದಲ್ಲಿ ಮಧ್ಯದಲ್ಲೇ `ಸೂಪರ್-30’ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗುವುದು.
• ಯೋಜನೆಯ ಅವಧಿಯಾದ 5 ವರ್ಷಗಳ ಕೊನೆಯ ವೇಳೆಗೆ ಈ ಕಾಲೇಜುಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಪೈಕಿ ಶೇ.80ರಷ್ಟಕ್ಕಾದರೂ ಎನ್.ಬಿ.ಎ ಮಾನ್ಯತೆ ಹೊಂದಿರಬೇಕು.
• ಐ.ಟಿ. ಉದ್ದಿಮೆ ಮತ್ತು ಪ್ರಮಖ ಎಂಜಿನಿಯರಿಂಗ್ ಶಾಖೆಗೆ ಸೇರಿದ ತಲಾ 1 ಉದ್ದಿಮೆ ಸೇರಿ ಒಟ್ಟು 3 ಉದ್ದಿಮೆಗಳೊಂದಿಗೆ ಯಶಸ್ವಿ ಸಹಭಾಗಿತ್ವವನ್ನು ಹೊಂದಿರಬೇಕು.
• ಅಂತಿಮ ವರ್ಷದ ಬಿ.ಇ.ಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಪದವಿ ಪಡೆಯುವ ಹೊತ್ತಿಗೆ ಶೇ.50ರಷ್ಟು ವಿದ್ಯಾರ್ಥಿಗಳಾದರೂ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿರಬೇಕು.
• ಆಯಾ ಕಾಲೇಜುಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಪ್ರತೀವರ್ಷವೂ ಗುಣಮಟ್ಟದ ಇಂಟರ್ನ್-ಶಿಪ್ ಅನ್ನು ಕಡ್ಡಾಯವಾಗಿ ಮಾಡಬೇಕು.
• ಅಗತ್ಯವೆನಿಸಿದರೆ ವಿಟಿಯು ಕಡೆಯಿಂದ ಶಾಶ್ವತ ಮಾನ್ಯತೆ ಪಡೆದುಕೊಳ್ಳಬೇಕು.

ಆಯ್ಕೆಯಾಗಿರುವ ಸರಕಾರಿ ಕಾಲೇಜುಗಳು 
ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನಹಡಗಲಿಗಳಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ., ದಾವಣಗೆರೆಯಲ್ಲಿರುವ ಯೂನಿವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರಗಿಯಲ್ಲಿರುವ ವಿಟಿಯು ಪಿಜಿ ಸೆಂಟರ್.

ಆಯ್ಕೆಯಾಗಿರುವ ಖಾಸಗಿ ಕಾಲೇಜುಗಳು
(1) ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಬೆಳಗಾವಿ
(2) ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಗುಬ್ಬಿ (ತುಮಕೂರು ಜಿಲ್ಲೆ)
(3) ಶ್ರೀಮಧ್ವ ವಾದಿರಾಜ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜು, ಉಡುಪಿ
(4) ಜಿಎಸ್ಎಸ್ಎಸ್ ಮಹಿಳಾ ಎಂಜಿನಿಯರಿಂಗ್ & ಟೆಕ್ನಾಲಜಿ ಸಂಸ್ಥೆ, ಮೈಸೂರು.
(5) ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್ (ಕೋಲಾರ ಜಿಲ್ಲೆ)
(6) ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್, ಮುಧೋಳ (ಬಾಗಲಕೋಟೆ ಜಿಲ್ಲೆ)
(7) ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ, ವಿಜಯಪುರ
(8) ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಮಗಳೂರು
(9) ಎಸ್.ಜೆ.ಸಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ
(10) ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ
(11) ಪಿಇಎಸ್ ತಾಂತ್ರಿಕ & ಮ್ಯಾನೇಜ್ಮೆಂಟ್ ಸಂಸ್ಥೆ, ಶಿವಮೊಗ್ಗ
(12) ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಭಾಲ್ಕಿ (ಬೀದರ್ ಜಿಲ್ಲೆ)
(13) ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ಗದಗ
(14) ವಿವೇಕಾನಂದ ಎಂಜಿನಿಯರಿಂಗ್ & ತಾಂತ್ರಿಕ ಕಾಲೇಜು, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ)
(15) ಜೈನ್ ಎಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿ
(16) ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು, ಸುರಪುರ (ಯಾದಗಿರಿ ಜಿಲ್ಲೆ)

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top