ಬೆಂಗಳೂರು: ರಸ್ತೆಗಳನ್ನು, ಹೆದ್ದಾರಿಗಳನ್ನು ಅಗಲೀಕರಣಗೊಳಿಸುವಾಗ ಅಕ್ಕಪಕ್ಕದಲ್ಲಿ ಅಡಚಣೆಯಾಗುವ ಮರಗಳನ್ನು ಕಡಿದು ಪರಿಸರನಾಶ ಮಾಡುವುದರ ಬದಲಾಗಿ ಅಂತಹ ಮರಗಳನ್ನು ಸ್ಥಳಾಂತರಗೊಳಿಸಿ ಬೇರೆಡೆ ನೆಟ್ಟು ಹಸಿರು ಸಂರಕ್ಷಿಸುವ ಅಪರೂಪದ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ವ್ಯಾಪಕವಾಗಿ ಕೈಗೊಳ್ಳಲಾಗುತ್ತಿದೆ.
ರಸ್ತೆ ಮತ್ತು ಹೆದ್ದಾರಿ ವಿಸ್ತರಣೆ ಕಾಮಗಾರಿಗಳನ್ನು ರಾಜ್ಯದಲ್ಲಿ ವ್ಯಾಪಕವಾಗಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯುವ ಕಾರ್ಯಕ್ಕೆ ಪರ್ಯಾಯವಾಗಿ ಈ ಬದಲೀ ವ್ಯವಸ್ಥೆಗೆ ಆದ್ಯತೆ ನೀಡಲು ಮತ್ತು ಬೆಳೆದುನಿಂತ ಗಿಡಮರಗಳನ್ನು ಬೇರೆಡೆಗೆ ನೆಟ್ಟು ಬೆಳೆಸುವ ವೈಜ್ಞಾನಿಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ಇದರ ಅಧೀನ ಸಂಸ್ಥೆಯಾದ ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಸೂಚಿಸಲಾಗಿತ್ತು, ಅದರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಬೆಂಗಳೂರು ಸುತ್ತಮುತ್ತ ಈಗಾಗಲೇ ಸುಮಾರು 1,500ಕ್ಕೂ ಹೆಚ್ಚು ಬೆಳೆದು ನಿಂತ ಗಿಡ ಮರಗಳನ್ನು ಬೇರೆಡೆ ಒಯ್ದು ನೆಡಲಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ಇತರ ಕಡೆಗಳಲ್ಲೂ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರು ತಿಳಿಸಿದ್ದಾರೆ.
ರಸ್ತೆ ಮತ್ತು ಹೆದ್ದಾರಿಗಳ ವಿಸ್ತರಣೆ ಸಂದರ್ಭದಲ್ಲಿ ಮರಗಳನ್ನು ಕಡಿಯುವುದರ ಬದಲಾಗಿ ಅವುಗಳನ್ನು ಸಂರಕ್ಷಿಸಿ ಪುನಶ್ಚೇತನಗೊಳಿಸಲು ಸೂಕ್ತ ಸಲಹೆ ನೀಡಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ನೀಡಿದ ಸಲಹೆಯಂತೆ ಒಟ್ಟು 6 ರಸ್ತೆ ಮತ್ತು ಹೆದ್ದಾರಿ ಅಗಲೀಕರಣ ಯೋಜನೆಗಳಲ್ಲಿ 2100 ಮರಗಳನ್ನು ಗುರುತಿಸಿ ಬೇರೆಡೆಗೆ ಸ್ಥಳಾಂತರಿಸಿ, ನೆಟ್ಟು ಪೋಷಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇವುಗಳಲ್ಲಿ ಈಗಾಗಲೇ 1,500 ಕ್ಕೂ ಹೆಚ್ಚು ಮರಗಳನ್ನು ಕಿತ್ತು ಬೇರೆಡೆ ನೆಡುವ ಮೂಲಕ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಮಾದರಿ ಪ್ರಯತ್ನ ನಡೆಸಲಾಗಿದೆ. ಉಳಿದ ಮರಗಳನ್ನೂ ಸ್ಥಳಾಂತರಿಸಿ ಪೋಷಿಸುವ ಕೆಲಸ ನಡೆಯುತ್ತಿದೆಯೆಂದು ಸಿ.ಸಿ.ಪಾಟೀಲರು ವಿವರಿಸಿದ್ದಾರೆ.
ಮರಗಳನ್ನು ಸ್ಥಳಾಂತರಿಸುವುದಕ್ಕೆ ಆಯ್ಕೆ ಮಾಡಲಾದ ಹೆದ್ದಾರಿಗಳ ವಿವರಗಳು:_
ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟದಿಂದ ಆನೇಕಲ್ಲಿಗೆ ತೆರಳುವ ಹೆದ್ದಾರಿ, ಅತ್ತಿಬೆಲೆ ಮೂಲಕ ಆನೇಕಲ್ಲಿನಿಂದ ಕಾಟನಲ್ಲೂರ್ ಗೇಟ್ (ಎನ್.ಹೆಚ್.-4), ಹೀಗೆ ಒಟ್ಟು 155 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಮರಗಳ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಖ್ಯವಾಗಿ ಹೊಂಗೆ, ಗುಲ್ ಮೊಹರ್, ಸಿಸ್ಸೋ, ಅರಳಿ, ಬೇವು, ಬಸರಿ, ಅಕೇಷಿಯಾ, ನೀಲಗಿರಿ ಮುಂತಾದ ಮರಗಳನ್ನು ಸ್ಥಳಾಂತರಿಸಿ ಪೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿ.ಸಿ.ಪಾಟೀಲರು ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಶಾಲೆ ಕಾಲೇಜು, ನ್ಯಾಯಾಲಯಗಳೂ ಸೇರಿದಂತೆ ಯಾವುದೇ ಕಟ್ಟಡ ನಿರ್ಮಿಸುವಾಗಲೂ ಸುತ್ತಮುತ್ತ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸುವುದಕ್ಕೆ ಅವಕಾಶವಿಟ್ಟು ಅವುಗಳನ್ನು ಪೋಷಿಸಬೇಕು ಎಂದು ಈಗಾಗಲೇ ತಮ್ಮ ಇಲಾಖೆಯಲ್ಲಿ ಸುತ್ತೋಲೆ ಹೊರಡಿಸಿ ಆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಹೆದ್ದಾರಿಗಳ ಪಕ್ಕದಿಂದ ಈ ರೀತಿ ಸ್ಥಳಾಂತರಿಸಿದ ಗಿಡಮರಗಳನ್ನು ಬೆಂಗಳೂರು ಸುತ್ತಮುತ್ತಲಿರುವ ಗ್ರಾಮಗಳ ಮತ್ತು ಕೆರೆಕಟ್ಟೆಗಳ ಅಕ್ಕಪಕ್ಕದ ಅರಣ್ಯಗಳಲ್ಲಿ, ಕಿರುತೋಪುಗಳಲ್ಲಿ ನೆಡಲಾಗಿದೆ. ಮಂಡೂರು, ಹೊಸಕೋಟೆ ಕೆರೆ, ಬೆಟ್ಟಕೊಟ್ಟೆ ಅರಣ್ಯ, ಮೈಲನಹಳ್ಳಿ, ಹೆಸರುಘಟ್ಟ, ಸೊಣ್ಣೇನಹಳ್ಳಿ, ದಿಬ್ಬೂರು, ಕೃಷ್ಣದೊಡ್ಡಿ, ಹಾರಗದ್ದೆಕೆರೆ, ಗುಂಜೂರ್ ಕೆರೆ, ಈ ಮುಂತಾದ ಕಡೆಗಳಲ್ಲಿ ಬದಲಿ ವ್ಯವಸ್ಥೆಗೊಳಿಸಿ ನೆಟ್ಟು ಪೋಷಿಸಲಾಗುತ್ತಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ಶಿವಪ್ರಸಾದ್ ತಿಳಿಸಿದ್ದಾರೆ.
ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ವೈಜ್ಞಾನಿಕವಾಗಿ ಅವುಗಳ ಬೇರುಗಳನ್ನು ಸಂರಕ್ಷಿಸುವುದಲ್ಲದೆ, ಬ್ಯಾಕ್ಟೀರಿಯಾ ಅಥವಾ ಇನ್ನಿತರ ಅಪಾಯಕಾರಿ ಸೋಂಕುಗಳಿಗೆ ಈಡಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಣ್ಣು ಪರೀಕ್ಷೆಯ ವರದಿ ಪಡೆದು ಆಯಾ ಜಾತಿಯ ಗಿಡಮರಗಳಿಗೆ ಸ್ಥಳೀಯ ಪರಿಸರ ಹೊಂದಿಕೆಯಾಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಮುಂದೆ ಈ ಗಿಡಮರಗಳಿಗೆ ನೀರು, ಗೊಬ್ಬರ ಕೊಟ್ಟು ಮೂರು ವರ್ಷಗಳವರೆಗೆ ಪೋಷಿಸಿ ರಕ್ಷಿಸಲು ಖಾಸಗಿ ಸಹಭಾಗಿತ್ವ ಪಡೆಯಲಾಗುತ್ತಿದೆ ಎಂದು ಶಿವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.