ಬೆಂಗಳೂರು: ಬಿಜೆಪಿ ಸರಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ಆರು ಸಾವಿರ ರೂಪಾಯಿ ಮತ್ತು ರಾಜ್ಯದ ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರಗಳು 4 ಸಾವಿರ ರೂಪಾಯಿ ನೆರವನ್ನು ಖಾತೆಗೆ ಜಮಾ ಮಾಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ “ರೈತ ಉತ್ಪಾದಕ ಸಂಸ್ಥೆಗಳಿಗೆ ಇರುವ ಮಾರುಕಟ್ಟೆ ಅವಕಾಶಗಳು” ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡಿದ್ದು, ರಾಜ್ಯದಲ್ಲಿ 1,093 ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್ಪಿಒ) ರಚಿಸಲಾಗಿದೆ ಎಂದು ತಿಳಿಸಿದರು.
ಎಫ್ಪಿಒಗಳಿಗೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಂದ ಒಟ್ಟು ಸುಮಾರು 80 ಲಕ್ಷ ರೂಪಾಯಿ ನೀಡಲಾಗುತ್ತಿದೆ. ರೈತರ ವಾರ್ಷಿಕ ಆದಾಯ ದುಪ್ಪಟ್ಟುಗೊಳಿಸಲು ಪ್ರಧಾನಿಯವರು ದೃಢಸಂಕಲ್ಪ ಮಾಡಿದ್ದು, ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ಯುವಕರು ಉದ್ಯಮ- ಉದ್ಯೋಗಕ್ಕಾಗಿ ಬೆಂಗಳೂರು ಮತ್ತಿತರ ನಗರಕ್ಕೆ ತೆರಳುವ ಕಾರಣ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕೃಷಿಯಲ್ಲಿ ಉತ್ತಮ ಆದಾಯ ಬರುವಂತಾದರೆ ಕೃಷಿಯ ಘನತೆ ಹೆಚ್ಚಲಿದೆ. ಕೃಷಿಯ ಆದಾಯ ಹೆಚ್ಚುತ್ತಿರುವ ಕಾರಣ ಇದೀಗ ಎಂಜಿನಿಯರ್ಗಳೂ ಕೃಷಿಯತ್ತ ಮುಖ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಕುರಿ, ಮೇಕೆ, ಕೋಳಿ, ಮೀನು ಸಾಕಣೆಗೆ 87 ಲಕ್ಷ ಸಾಲ ನೀಡಿ ಅದರಲ್ಲಿ 50 ಲಕ್ಷ ರೂಪಾಯಿ ಸಬ್ಸಿಡಿ ಕೊಡುವ ಯೋಜನೆ ಜಾರಿಯಲ್ಲಿದೆ. ಕೃಷಿಗೆ ಆದ್ಯತೆ ಕೊಡುವ ಅದ್ಭುತ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ನುಡಿದರು.
ರೈತರಿಗಾಗಿ ಫಸಲ್ ಬಿಮಾ ಯೋಜನೆ ಜಾರಿ ಮಾಡಿ, ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ರೈತರ ಉತ್ಪನ್ನ ಶೇಖರಣೆಗೆ ಜಿಲ್ಲೆಗೊಂದು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಹಿಂದಿನ ಆಡಳಿತವು ರೈತರ ಬಗ್ಗೆ ಕೇವಲ ಮಾತಿನ ಕಳಕಳಿಯನ್ನು ತೋರಿಸುತ್ತಿತ್ತು ಎಂದು ತಿಳಿಸಿದರು.
ಕಬಸವರಾಜ ಬೊಮ್ಮಾಯಿ ಅವರ ಸರಕಾರವು ರೈತ ಸಮುದಾಯದ ವಿದ್ಯಾರ್ಥಿಗಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಹಾಲು ಉತ್ಪಾದಕರಿಗಾಗಿ ಬ್ಯಾಂಕ್ ನಿರ್ಮಿಸಿದ್ದು, ಇವೆರಡು ಯೋಜನೆಗಳೂ ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿವೆ ಎಂದರು. ಹಾಲಿಗೆ ಯಡಿಯೂರಪ್ಪ ಅವರ ಸರಕಾರ 4 ರೂಪಾಯಿ ಬೆಂಬಲ ಬೆಲೆ ನೀಡಿ ಹೈನುಗಾರರನ್ನು ಪ್ರೋತ್ಸಾಹಿಸಿದೆ ಎಂದು ವಿವರಿಸಿದರು.
ಯಂತ್ರೋಪಕರಣಗಳಿಗೆ ಸಹಾಯಧನ- ಸಹಕಾರ, ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಪ್ರಯೋಗಶೀಲರಾಗಬೇಕು ಎಂದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ರೈತರು ಹೆಚ್ಚು ಹೆಚ್ಚು ಪ್ರಯೋಗಶೀಲರಾಗಿ ಇರುವ ಕಾರಣ ಆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು. ಬದಲಾವಣೆಯ ಅನ್ವೇಷಣೆ- ಹುಡುಕಾಟವೇ ಇದಕ್ಕೆ ಕಾರಣ ಎಂದರು.
ಭಾರತ ಕೃಷಿ ಸಂಸ್ಕøತಿಯ ದೇಶ. ಸ್ವಾತಂತ್ರ್ಯದ ಬಳಿಕ ರೈತರಿಗೆ ಗೌರವ ಕೊಟ್ಟ ಮೊದಲ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು. ಜೈ ಜವಾನ್ ಜೈಕಿಸಾನ್ ಶಬ್ದದ ಮೂಲಕ ಅವರು ರೈತರಿಗೆ ಶಕ್ತಿ ತುಂಬಿದರು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ಜವಾನ್ ಜೈಕಿಸಾನ್ ಜೈ ವಿಜ್ಞಾನ್ ಎನ್ನುವ ಪರಿಕಲ್ಪನೆಯ ಮೂಲಕ ರೈತರಿಗೆ ವಿಜ್ಞಾನವನ್ನು ಜೋಡಿಸಿದರು. ಕಿಸಾನ್ ಕಾರ್ಡ್ ಆರಂಭಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿಯವರು ಕೃಷಿಗೆ ಪ್ರಾಧಾನ್ಯತೆ ನೀಡಿದರು ಎಂದು ವಿವರಿಸಿದರು.
ಕೋವಿಡ್ ಸಂಕಷ್ಟದ ನಡುವೆಯೂ ಕೃಷಿಕರು ಅತಿ ಹೆಚ್ಚು ಉತ್ಪನ್ನಗಳನ್ನು ಬೆಳೆದಿದ್ದು, ಅವರು ಹೆಚ್ಚು ಕ್ರಿಯಾಶೀಲರಾಗಿದ್ದುದರ ಸಂಕೇತ. ಸಂಕಷ್ಟದ ಅವಧಿಯಲ್ಲೂ ರಾಷ್ಟ್ರ ಉಳಿಸುವ ಕಾರ್ಯವನ್ನು ರೈತರು ಮಾಡಿದ್ದಾರೆ. ನೀವೆಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ರೈತರಿಗೆ ಉತ್ತಮ ಕಾರ್ಯಕ್ರಮಗಳ ಕುರಿತು ತಿಳಿಸಿ ರೈತರಲ್ಲಿ ಭರವಸೆ ತುಂಬುವ ಕಾರ್ಯವನ್ನು ರೈತ ಮೋರ್ಚಾ ಮಾಡುತ್ತಿದೆ. ನಮ್ಮ ಸರಕಾರ ಯೋಜನೆಗಳ ಬಗ್ಗೆ ಕೇವಲ ಮಾತನಾಡುವುದಿಲ್ಲ. ಯೋಜನೆಗಳನ್ನು ಕೆಳಹಂತದ ವರೆಗೆ ತಲುಪಿಸುವ ಕಾರ್ಯವನ್ನು ಅದು ಮಾಡುತ್ತಿದೆ ಎಂದರು.
ಸರಕಾರ ಮತ್ತು ರೈತರ ಮಧ್ಯೆ ಕೊಂಡಿಯಾಗಿ ರೈತಮೋರ್ಚಾ ಕೆಲಸ ಮಾಡುತ್ತಿದೆ. ಈ ಕೆಲಸ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ತಿಳಿಸಿದರು. ರೈತರ ಪರವಾಗಿ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್, ವಿಧಾನಸಭೆ, ಲೋಕಸಭಾ ಚುನಾವಣೆಗಳು ಮುಂದಿನ 2 ವರ್ಷಗಳಲ್ಲಿ ನಡೆಯಲಿದ್ದು, ಭವಿಷ್ಯದಲ್ಲಿ ಸವಾಲು ಕಾದಿದೆ. ರಾಜಕೀಯ ಪಕ್ಷದ ಶಕ್ತಿ ಮತ್ತು ಅಸ್ತಿತ್ವ ತೋರಿಸಲು ಇವು ಮಹತ್ವದ ದಿನಗಳು. ಈ ಸಂದರ್ಭದಲ್ಲಿ ನಮ್ಮ ಶಕ್ತಿ ಮತ್ತು ಸಂಘಟನೆಯನ್ನು ತೋರಿಸಿಕೊಡಬೇಕು ಎಂದು ತಿಳಿಸಿದರು.
ರುಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.